ಬಿಸಿಯೂಟಕ್ಕೆ ಕಳಪೆ ಬೇಳೆಕಾಳು ಸರಬರಾಜು ಮಾಡುವ ಮೂಲಕ ಬಿಜೆಪಿ ಸರ್ಕಾರ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದೆ-ಸಿದ್ದರಾಮಯ್ಯ ಕಿಡಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶಾಲಾ ಮಕ್ಕಳ ಬಿಸಿಯೂಟಕ್ಕೆ ಕಳಪೆ ಗುಣಮಟ್ಟದ ಬೇಳೆಕಾಳು ಸರಬರಾಜು ಮಾಡುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಮಕ್ಕಳಿಗೆ ವಿಷವುಣಿಸುವ ಈ ಕುಕೃತ್ಯದಲ್ಲಿ ಆಹಾರ ನಿಗಮದ ಅಧಿಕಾರಿಗಳೇ ಷಾಮೀಲಾಗಿದ್ದರೂ ರಾಜ್ಯದ ಬಿಜೆಪಿ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಅವರು ಸರಣಿ ಟ್ವೀಟ್ ಮಾಡಿ, ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ದಾವಣಗೆರೆ, ಬಳ್ಳಾರಿಯಲ್ಲಿ ಕಳಪೆ ಬೇಳೆ ಪೂರೈಕೆಯ ದೂರುಗಳಿದ್ದರೂ ಆಹಾರ ನಿಗಮದ ಅಧಿಕಾರಿಗಳು ಕಳಪೆ ಬೇಳೆ ಸರಬರಾಜು ಮಾಡುತ್ತಿರುವ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳದೆ ಇರುವುದಕ್ಕೆ ಏನು ಕಾರಣ? ಲಂಚದ ಹಣದಲ್ಲಿ ಯಾರೆಲ್ಲ ಪಾಲುದಾರರು? ಶಾಲಾ ಮಕ್ಕಳ ಪೌಷ್ಟಿಕತೆ ವೃದ್ಧಿಗಾಗಿ ನಮ್ಮ ಸರ್ಕಾರ ಜಾರಿಗೆ ತಂದಿದ್ದ ಕ್ಷೀರಭಾಗ್ಯ ಯೋಜನೆ ಸ್ಥಗಿತಗೊಳಿಸಿದ್ದ ಬಿಜೆಪಿ ಸರ್ಕಾರ, ಮೊಟ್ಟೆ ಖರೀದಿಯಲ್ಲಿಯೂ ಕಮಿಷನ್ ನುಂಗಿದ ಆರೋಪ ಕೇಳಿ ಬಂದಿತ್ತು. ಈಗ ಮಕ್ಕಳ ಅನ್ನದ ತಟ್ಟೆಗೆ ಕೈ ಹಾಕಿದೆ.
ಈ ಸಚಿವರು, ಅಧಿಕಾರಿಗಳು ಹೊಟ್ಟೆಗೆ ಏನು ತಿನ್ನುತ್ತಿದ್ದಾರೆ? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಳಪೆ ಗುಣಮಟ್ಟದ ಬೇಳೆ ಸರಬರಾಜು ಮಾಡುತ್ತಿರುವ ಕಂಪನಿಗಳನ್ನು ತಕ್ಷಣ ಬ್ಲಾಕ್ ಲೀಸ್ಟ್ ಗೆ ಸೇರಿಸಬೇಕು ಮತ್ತು ಕಂಪನಿಗಳ ಜೊತೆ ಷಾಮೀಲಾಗಿ ಭ್ರಷ್ಟಾಚಾರ ಎಸಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ವಿಪ ನಾಯಕರು ಒತ್ತಾಯಿಸಿದ್ದಾರೆ.