ರಾಜ್ಯಕ್ಕೂ ಕಾಲಿಟ್ಟ ಹೊಸ ಕೊರೊನಾ ರೂಪಾಂತರ ತಳಿ, ಇರಲಿ ಎಚ್ಚರ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮೂಲ ತಳಿಗಿಂತ ಹೆಚ್ಚು ಹರಡಬಲ್ಲ ಓಮಿಕ್ರಾನ್ ಉಪ-ರೂಪಾಂತರ ಬಿಎ-2 ರ ಎರಡು ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿದ್ದು ರಾಜ್ಯದಲ್ಲಿ ಮುಂದೆ ಕೊರೊನಾ ಹೊಸ ರೂಪಾಂತರ ತಳಿಯಿಂದ ಉದ್ಭವಿಸುತ್ತಿರುವ ಪರಿಸ್ಥಿತಿ ನಿಭಾಯಿಸಲು ಕರ್ನಾಟಕ ಆರೋಗ್ಯ ಇಲಾಖೆ ಕ್ರಮಗಳನ್ನು ಚುರುಕುಗೊಳಿಸಿದೆ.
ರಾಜ್ಯದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೆಚ್ಚಿನ ಪ್ರಮುಖ ಐಟಿ ಕಂಪನಿಗಳು ಲಕ್ಷಾಂತರ ಸಾಫ್ಟ್ವೇರ್ ವೃತ್ತಿಪರರನ್ನು ಹೊಂದಿರುವ ಬೆಂಗಳೂರಿನ ಮಹದೇವಪುರ ಮತ್ತು ಪೂರ್ವ ವಲಯಗಳಿಂದ ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವುದಕ್ಕೆ ಅಧಿಕಾರಿಗಳು ಆತಂಕಿತರಾಗಿದ್ದಾರೆ.
ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಸಿ.ಎನ್.ಮಂಜುನಾಥ್ ಮಾತನಾಡಿ, ಕೊರೊನಾ ರೂಪಾಂತರಗಳಾದ ಬಿಎ.2.10 ಮತ್ತು ಬಿಎ.2.12 ಪತ್ತೆಯಾಗಿದೆ. ಬಿಎ.2 ರೂಪಾಂತರಗಳು ಈ ಹಿಂದೆ ನವದೆಹಲಿ ಮತ್ತು ಮುಂಬೈನಲ್ಲಿ ಕಂಡುಬಂದಿದ್ದವು ಎಂದು ಅವರು ತಿಳಿಸಿದ್ದಾರೆ.
ಮುಂದಿನ 3-4 ವಾರಗಳಲ್ಲಿ ಕರ್ನಾಟಕದಲ್ಲಿ ನಾಲ್ಕನೇ ಕೋವಿಡ್ ಅಲೆ ಪ್ರಾರಂಭವಾಗುವ ಸಾಧ್ಯತೆಯಿದೆ. ಬಿಎ .2 ರೂಪಾಂತರವು ಉಲ್ಬಣಕ್ಕೆ ಕಾರಣವಾಗಬಹುದು ಎಂದು ಮಂಜುನಾಥ್ ಎಚ್ಚರಿಸಿದ್ದಾರೆ.
ನಾಲ್ಕನೇ ಅಲೆ ಹೆಚ್ಚು ವೇಗವಾಗಿ ಅಪ್ಪಳಿಸಿದರೆ, ಸೋಂಕಿತರು ವೇಗವಾಗಿ ಹರಡುತ್ತಿದ್ದರೂ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಮೊದಲಿಗಿಂತ ಕಡಿಮೆ ಇರುತ್ತದೆ. ಕೋವಿಡ್ ಹರಡದಂತೆ ಜನರು ಜಾಗರೂಕರಾಗಿರಬೇಕು ಎಂದು ಎಂದು ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.