ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗೆಳತಿ… ಗೆ
—————-
ಹೃದಯ ಕುಸುಮ ನೀನಾಗಿ
ಅಂಧಕಾರವ ಸೀಳಿ
ಬೆಳಕ ಹೆಜ್ಜೆಗಳನಿಟ್ಟು
ನನ್ನತ್ತ ನಡೆದು ಬಾ ಗೆಳತಿ
ಓ ಬಾನ ಬೆಳ್ಳಕ್ಕಿಯೇ
ಜಾತಿ ಬೇಲಿಗಳ ಕಿತ್ತೆಸೆದು ಬಾ
ಶತಮಾನಗಳಾಚೆಯ
ಸನಾತನಿಗಳ ರೀತಿ ರಿವಾಜು
ನೀತಿ ಸಂಸ್ಕಾರಗಳ
ಧಿಕ್ಕರಿಸಿ ಬಾ
ಮತಾಂಧರ ತಲೆತಗ್ಗಿಸುವಂತೆ
ಮಡುಗಟ್ಟಿದ ನಿನ್ನಳತೆಯ
ಗಡಿ ದಾಟಿ ಬಾ
ನಮ್ಮ ತುಳಿದವರ
ಉಂಡೆಲೆಯಂತೆ ಎಸೆದವರ
ನೆತ್ತರು ಹರಿಸಿದವರ ಮೆಟ್ಟಿ ಬಾ
ಸುತ್ತ ಕಟ್ಟಿದ ಕಪ್ಪು ಕೋಟೆಯ
ಸಿಡಿಸಿ ಬಯಲಾಗಿಸಿ
ಅವರ ಅಂತರಗಳ ಬೆತ್ತಲಾಗಿಸಿ
ತೃಶೆಗಾಗಿ ಹಬ್ಬ ಆಚರಿಸಿದವರ
ಒದ್ದು ಬಾ
ನಾನು ನನ್ನವರಿಗಾಗಿ ಸಿಡಿಯುವ ಯುದ್ಧದಲ್ಲಿ
ಸ್ಪೂರ್ತಿಯಾಗು ಬಾ
ಬಾ ಗೆಳತಿ
ಒಟ್ಟೊಟ್ಟಿಗೆ ಸೂರ್ಯನೆಡೆಗೆ
ಸರಿಯೋಣ
ನವ ಭಾರತಕ್ಕೆ
ಮುನ್ನುಡಿಯಾಗೋಣ ಬಾ
ಕವಿತೆ: ಕುಮಾರ್ ಬಡಪ್ಪ