ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಮಾಲಿ
—————-
ಆಡುವ ಓಡುವಾಗಿನಿಂದಲೂ
ನನಗೂ ನಿನಗೂ ಅದೆಂತಹ ನಂಟು
ನಿನ್ನ ನೋಡ ನೋಡುತ್ತಲೇ
ದಶಕಗಳ ಕಳೆದಿದ್ದೇನೆ
ತುತ್ತಿಗಾಗಿ ನಿನ್ನೊಂದಿಗೆ
ಬೆಸೆದೇ ಬೆಳೆದಿದ್ದೇನೆ
ಅಂದಿನ ಬುಜದ ಗತ್ತಲಿ
ಗಟ್ಟಿ ಮೂಟೆ ಎಂಬುದು ಮಾಮೂಲಿ
ಸೂರ್ಯನೇರುವ ಹೊತ್ತಿಗೆ
ಹೊರುವ ಕಾಯಕ ತಪ್ಪಿದ್ದಲ್ಲ
ಬೆವರಿಗೆ ಬಂದ ಹಣ
ವ್ಯರ್ಥಕ್ಕೆ ಬಸಿದು ಬಸಿದು
ಗೂಡು ಸೇರುವ ಹೊತ್ತಿಗೆ ಖಾಲಿ
ಶ್ರಮಕೆ ಮತ್ತೊಂದು ಹೆಸರು
ದುಡಿದದ್ದೇ ದುಡಿದದ್ದು ಸಮರೋಪಾದಿಯಲಿ
ಗುಲಾಮಿ ಪುಟಗಳಲಿ
ಜೀತದ ಸಂತೆಯೊಳು
ನಡು ಕಟ್ಟಿ ನಿಂತ ಹೋರಿಗಳು
ಬೆವರಲಿ ಕರಗಿದವರೆಷ್ಟೋ
ರಟ್ಟೆ ಮೂಟೆಯ ಗುದ್ದಾಟದಲಿ
ಸವೆದು ಸವಕಲಾದವರೆಷ್ಟೋ
ಹಣ್ಣಾದ ದೇಹಗಳು
ತಾಕತ್ತಿಲ್ಲದ ನಾಯಿಗಳು
ನಮಗೇಕೆಂದವರೆಷ್ಟೋ
ಬದುಕಿಲ್ಲದ ನನ್ನೆಷ್ಟೋ ಜನ
ಮಾಂಸದಂಗಡಿಗೆ ಕಟ್ಟಿದ ದನಗಳಾದರು
ರಸ್ತೆಗಳಲಿ ತುತ್ತು ಕೂಳಿಗೆ ಬಿಕರಿಯಾದರು
ತುಚ್ಛ ಪದಗಳಿಗೆ ವಸ್ತುವಾದರು
ದಣಿಯ ಪುಡಿಗಾಸಿಗೆ
ಹೆಗಲೇರದಂತ ಶವಗಳು
ದುಡಿದ ಮಳಿಗೆಗಳಲ್ಲೇ
ಕೈಚಾಚಿಸಿ ತಳ್ಳಿಸಿಕೊಂಡರು
ಬೇರಾರು ಅಲ್ಲ
ತಳ್ಳಿದವರು ನಾವೇ
ಮುಂದೊಂದು ದಿನ
ನನ್ನ ದೂಡಲು
ನಮ್ಮವರಲ್ಲೊಬ್ಬ
ಕವಿತೆ: ಕುಮಾರ್ ಬಡಪ್ಪ, ಚಿತ್ರದುರ್ಗ.