ಲಂಗುಲಗಾಮಿಲ್ಲದ ನಗರಸಭೆ ಆಡಳಿತಕ್ಕೆ ಕಡಿವಾಣ-ಶಾಸಕ ಟಿ.ರಘುಮೂರ್ತಿ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಇಲ್ಲಿನ ನಗರಸಭೆಯ ಪ್ರಗತಿಪರಿಶೀಲನಾ ಜೊತೆಗೆ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಕ್ಷೇತ್ರದ ಶಾಸಕ
, ಸಣ್ಣ ಕೈಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಸಭೆ ನಡೆಸಿದ್ದು, ಸುಮಾರು ಮೂರು ಗಂಟೆಗಳ ಕಾಲ ಅಧಿಕಾರಿಗಳು, ಸಿಬ್ಬಂದಿ ಜೊತೆಗೆ ಸಭೆ ನಡೆಸಿ ನಗರಸಭೆ ಆಡಳಿತದ ಮೇಲೆ ಲಗಾಮು ಹಾಕುವಲ್ಲಿ ಶಾಸಕರು ಸ್ವಲ್ಪಮಟ್ಟಿನ ಯಶಕಂಡರು.

ವಿಶೇಷವೆಂದರೆ ನಗರಸಭೆ ಆಡಳಿತ ಆಡಳಿತ ಪಕ್ಷ ಕಾಂಗ್ರೆಸ್ ಪಕ್ಷದ ವಶದಲ್ಲಿದ್ದರೂ ಸಹ ಅಧಿಕಾರಿ ಹಾಗೂ ಸಿಬ್ಬಂದಿ ನಡುವೆ ಸೌಹಾರ್ದಿತ ಕೊರತೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಿ ಸಮಸ್ಯೆ ಪರಿಹಾರಕ್ಕೆ ಯಾವುದೇ ಪ್ರಯತ್ನ ನಡೆದಿಲ್ಲ. ಕಳೆದ ನಾಲ್ಕು ತಿಂಗಳ ಹಿಂದೆ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಜಿ.ಎಚ್.ಜಗರೆಡ್ಡಿ ಸಹ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗವನ್ನು ಆಡಳಿತ ದೃಷ್ಠಿಯಿಂದ ನಿಯಂತ್ರಿಸುವಲ್ಲಿ ಸಾಧ್ಯವಾಗಿಲ್ಲ.

ಒಂದು ಹಂತದಲ್ಲಿ ಪೌರಾಯುಕ್ತರೇ ಶಾಸಕರೆದುರು ಸಿಬ್ಬಂದಿ ನನ್ನ ಮಾತು ಕೇಳುತ್ತಿಲ್ಲವೆಂದು ಸಹಾಯಕತೆ ತೋಡಿಕೊಂಡರು.  ಕಂದಾಯಾಧಿಕಾರಿ ಸತೀಶ್ ಸಹ ಇ-ಸ್ವತ್ತು ದಾಖಲಾತಿ ವಿಲೇಯಲ್ಲಿ ವಿಳಂಬದ ಬಗ್ಗೆ ಪ್ರಶ್ನಿಸಿದಾ ಅವರೂ ಸಹ ತಮ್ಮ ಸಿಬ್ಬಂದಿ ಕಡೆ ಬೊಟ್ಟುಮಾಡಿ ತೋರಿಸಿದರು. ಬಾಕಿ ಉಳಿದಿರುವ ಎಲ್ಲಾ ಇ-ಸ್ವತ್ತುಗಳ ದಾಖಲಾತಿಯನ್ನು ೧೫ದಿನಗಳ ಒಳಗೆ ಸಂಬಂಧಪಟ್ಟವರಿಗೆ ನೀಡಬೇಕೆಂದು ಸೂಚಿಸಿದರು. 

ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಪರಿಶಿಷ್ಟ ಪಂಗಡ ವ್ಯಾಪ್ತಿಯಲ್ಲಿದ್ದು, ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳಿಗೆ ೨೦೨೧ರಿಂದ೨೪ರವರೆಗೂ ಒಟ್ಟು ೧೮೦ ಲಕ್ಷ ವಿದ್ಯಾರ್ಥಿವೇತನ ವಿತರಣೆ ಯಾಗಬೇಕಿದ್ದು, ಕೇವಲ ೩೦ ಲಕ್ಷ ವೆಚ್ಚ ಮಾಡಿ ಉಳಿದ ಹಣವನ್ನು ಹಾಗೇ ಇಡಲಾಗಿದೆ. ಮೂರು ವರ್ಷಗಳಿಂದ ವಿದ್ಯಾರ್ಥಿವೇತನ ನೀಡದ ಬಗ್ಗೆ ಖಾರವಾಗಿ ಪ್ರಶ್ನಿಸಿದ ಶಾಸಕರು ಸಂಬಂಧಪಟ್ಟ ಸಿಬ್ಬಂದಿ ಗುರುಪ್ರಸಾದ್‌ನನ್ನು ತರಾಟೆಗೆ ತೆಗೆದುಕೊಂಡರು. ನಂತರ ಸಮುದಾಯ ಅಧಿಕಾರಿ ಭೂತಣ್ಣನವರಿಗೆ ೧೫ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವೇತನ ಹಣ ಪಾವತಿಸುವ ವ್ಯವಸ್ಥೆ ಮಾಡಿ ಎಂದರು.

ನಗರದ ಖಾಸಗಿ ಬಸ್ಟಾಂಡ್ ಪೂರ್ಣಗೊಳಿಸಲು ಸರ್ಕಾರದಿಂದ ಅನುದಾನ ಬಾಕಿ ಇದ್ದು ಪ್ರಸ್ತುತ ಈಗ ಅನುದಾನದಲ್ಲಿ ಮೇಲ್ಭಾಗದಲ್ಲಿ ಹೋಟೆಲ್, ಮೂರನೇ ಹಂತದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಮಾಡಿ ವ್ಯವಸ್ಥೆ ಕಲ್ಪಿಸುವಂತೆ ಪೌರಾಯುಕ್ತರಿಗೆ ಸೂಚಿಸಿದರು. ನಗರಸಭೆ ಹಳೇ ಕಟ್ಟಡ ರಿಪೇರಿಗೆ ಇರುವ ಹಣವನ್ನು ವೆಚ್ಚಮಾಡಿ ಕಟ್ಟಡವನ್ನು ಪೂರ್ಣಗೊಳಿಸಬೇಕೆಂದು ಎಇಇ ವಿನಯ್‌ಗೆ ಸೂಚಿಸಿದರು.

ಇಂದಿರಾ ಶಾಪಿಂಕ್ ಕಾಂಪ್ಲೆಕ್ಸ್‌ನ ಬಹುತೇಕ ಮಳಿಗೆಗಳು ಶಿಥಿಲಗೊಂಡಿದ್ದು ಯಾವುದೇ ಸಂದರ್ಭದಲ್ಲೂ ಬೀಳುವ ಸಂಭವವಿದೆ. ಇತ್ತೀಚೆಗೆ ಮಳೆ ಹೆಚ್ಚಾಗಿ ಇನ್ನೂ ಕೆಲವು ಕೊಠಡಿಗಳು ಹಾಳಾಗಿದ್ದು, ಈಗ ಹಾಲಿ ಕಟ್ಟಡದಲ್ಲಿರುವ ಬಾಡಿಗೆದಾರರನ್ನು ಬಿಡಿಸಿ ಮಳಿಗಳನ್ನು ತುರ್ತು ರಿಪೇರಿಗೊಳಿಸುವಂತೆ ಸೂಚಿಸಿದರು. ನಗರಸಭೆ ಆಡಳಿತ ಕೆಲವೊಂದು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಎಲ್ಲಾ ಚುನಾಯಿತ ಸದಸ್ಯರು ಪಕ್ಷಬೇದ ಮರೆತು ಅಧಿಕಾರಿಗಳಿಗೆ ಸಹಕಾರ ನೀಡುವಂತೆ ತಿಳಿಸಿದರು.

ನಗರ ಪ್ರದೇಶದ ದಿನದಿಂದ ದಿನಕ್ಕೆ ಅಭಿವೃದ್ದಿಯಾಗುತ್ತಿದೆ. ಈಗ ಹಾಲಿ ಇರುವ ೯೩ ಪೌರಕಾರ್ಮಿಕರ ಜೊತೆಗೆ ಹೆಚ್ಚುವರಿಯಾಗಿ ೨೨ ಪೌರಕಾರ್ಮಿಕರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳುವಂತೆ ನೈರ್ಮಲ್ಯ ಇಂಜಿನಿಯರ್ ನರೇಂದ್ರಬಾಬುಗೆ ಸೂಚಿಸಿದರು. ಅನೇಕ ಸದಸ್ಯರು ಕಳೆದ ಆರುತಿಂಗಳಿನಿಂದ ಚರಂಡಿಗಳಿಗೆ ಬ್ಲಿಚಿಂಗ್ ಪೌಂಡರ್ ಸಿಂಪಡಿಸಿವೆಂದು ಆರೋಪಿಸಿದಾಗ ಖರೀದಿಸಿ ಎಲ್ಲಾ ಚರಂಡಿಗಳಿಗೆ ಬ್ಲಿಚಿಂಗ್ ಪೌಂಡರ್ ಸಿಂಪಡೆ ಮಾಡುವಂತೆ ಸೂಚಿಸಿದರು. ನಗರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೆ ಗುತ್ತಿಗೆದಾರರು ಅನಗತ್ಯವಾಗಿ ಹಣವನ್ನು ನೀಡದೇ ಇರುವ ಬಗ್ಗೆ ಪ್ರಶ್ನಿಸಿದ ಶಾಸಕರು, ಪೌರಕಾರ್ಮಿಕರ ವೇತನದಲ್ಲಿ ಕಡಿತಗೊಂಡ ಹಣ ವಾಪಸ್ ಪೌರಕಾರ್ಮಿಕರಿಗೆ ಕೊಡಿಸುವಂತೆ ನಿರ್ದೇಶನ ನೀಡಿದರು.

ನಗರ ಪ್ರದೇಶದಲ್ಲಿ ಸ್ಮಶಾನ ಒತ್ತುವರಿ ಮಾಡಿಕೊಂಡ ಬಗ್ಗೆ ಆರೋಪಿಸಿದಾಗ, ಕೂಡಲೇ ಸರ್ವೆ ಅಧಿಕಾರಿ ಬಾಬುರೆಡ್ಡಿಗೆ ಸೂಚಿಸಿದ ಶಾಸಕರು ಸರ್ವೆ ಮಾಡಿ ಒತ್ತುವರಿಯನ್ನು ಗುರುತಿಸುವಂತೆ ನಿರ್ದೇಶನ ನೀಡಿದರು. ನಗರ ಪ್ರದೇಶದ ಸ್ಮಶಾನಗಳಲ್ಲಿ ಜಾಲಿ, ಗಿಡಗಂಟೆಗಳು ಬೆಳೆದಿದ್ದು ಅವುಗಳನ್ನು ತೆಗೆಸಬೇಕೆಂದರು. ನಗರದ ಕೆಲವು ಪ್ರದೇಶಗಳಲ್ಲಿ ಬೀದಿನಾಯಿ ಮತ್ತು ಬೀಡಾಡಿದನಗಳ ಕಾಟ ಹೆಚ್ಚಾಗಿದ್ದು ನಿಯಂತ್ರಿಸುವಂತೆ ಸೂಚಿಸಿದರು.

ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಟಿ.ಮಲ್ಲಿಕಾರ್ಜುನ್, ಕವಿತಾಬೋರಯ್ಯ, ಟಿ.ಶಿವಕುಮಾರ್, ಪ್ರಮೋದ್, ಸುಮಾ, ಜಿ.ಗೋವಿಂದ, ಎಂ.ನಾಗಮಣಿ, ಸುಮಕ್ಕ, ನಿರ್ಮಲ, ಎಂ.ಜೆ.ರಾಘವೇಂದ್ರ, ತಿಪ್ಪಮ್ಮ, ಮಂಜುಳಾ, ಸಿ.ಬಿ.ಜಯಲಕ್ಷ್ಮಿ, ವಿರೂಪಾಕ್ಷಿ, ಚಳ್ಳಕೆರೆಯಪ್ಪ, ಸಿ.ಶ್ರೀನಿವಾಸ್, ಬಿ.ಟಿ.ರಮೇಶ್‌ಗೌಡ, ಕೆ.ವೀರಭದ್ರಯ್ಯ, ಶಿಲ್ಪ, ವ್ಯವಸ್ಥಾಪಕ ಲಿಂಗರಾಜು, ಲೆಕ್ಕಾಧಿಕಾರಿ ಹರೀಶ್, ಆರೋಗ್ಯ ನಿರೀಕ್ಷಕರಾದ ಗಣೇಶ್, ಗೀತಾಕುಮಾರಿ, ಸುನೀಲ್, ರುದ್ರಮುನಿ ಮುಂತಾದವರು ಉಪಸ್ಥಿತರಿದ್ದರು.

 

 

 

Share This Article
error: Content is protected !!
";