ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಪಿಸಿಸಿ ಅಧ್ಯಕ್ಷರ ವಿಚಾರದಲ್ಲಿ ಹೈಕಮಾಂಡ್ ನಾಯಕರೇ ಗೊಂದಲವನ್ನುಂಟು ಮಾಡಿದ್ದು ಅವರೇ ಗೊಂದಲ ನಿವಾರಿಸಲಿ ಸಹಕಾರ ಸಚಿವ ಕೆಎನ್ ರಾಜಣ್ಣ ಆಗ್ರಹ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಆರು ತಿಂಗಳ ಹಿಂದೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಷಯ ಪ್ರಸ್ತಾಪಗೊಂಡಾಗ ಲೋಕಸಭಾ ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವುದಾಗಿ ಹೈಕಮಾಂಡ್ ತಿಳಿಸಿತ್ತು.
ಲೋಕಸಭಾ ಚುನಾವಣೆ ನಡೆದು 6 ತಿಂಗಳು ಕಳೆದಿದೆ. ಮುಂಬರುವ ವಿಧಾನಸಭಾ ಚುನಾವಣೆವರೆಗೂ ಡಿಕೆ ಶಿವಕುಮಾರ್ ಅವರೇ, ಪೂರ್ಣ ಪ್ರಮಾಣದ ಅಧ್ಯಕ್ಷರಾಗಿ ಮುಂದುವರೆಯಲಿ. ಆದರೆ, ಈ ಬಗ್ಗೆ ಸ್ಪಷ್ಟವಾಗಿ ಹೈ ಕಮಾಂಡ್ ತಿಳಿಸಬೇಕು ಎಂದು ರಾಜಣ್ಣ ಮನವಿ ಮಾಡಿದರು.
ಒಂದು ವೇಳೆ ಹೈ ಕಮಾಂಡ್ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಲು ಮುಂದಾದರೆ ಜಾರಕಿಹೊಳಿ ಅವರು ನಮ್ಮ ಪಕ್ಷದ ಹಿರಿಯ ಪ್ರಭಾವಿ ನಾಯಕರು. ಅವರು ಹೇಳಿದ್ದರಲ್ಲಿ ತಪ್ಪು ಹುಡುಕಬಾರದು. ಸತೀಶ್ ಜಾರಕಿಹೊಳಿ ಅಧ್ಯಕ್ಷರಾದರೆ, ಸಂತೋಷ ಪಡುವವರಲ್ಲಿ ನಾನು ಮೊದಲಿಗ. ಅವರು ಜನಪರ ಕೆಲಸ ಮಾಡಿದ್ದಾರೆ.
ಎಲ್ಲರಿಗೂ ಸಿಗುತ್ತಾರೆ. ಎಲ್ಲರಿಗೂ ಗೌರವ ಕೊಡ್ತಾರೆ. ಅವರು ಅಧ್ಯಕ್ಷ ಆದರೆ ನಾನು ಸ್ವಾಗತ ಮಾಡುತ್ತೇನೆ ಎಂದು ರಾಜಣ್ಣ ತಿಳಿಸಿದರು.