ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೈಸೂರು ದಸರೆಯ ಇತಿಹಾಸ ಮತ್ತು ವೈಭವ ನಾಡಹಬ್ಬವೆಂದು ಪ್ರಸಿದ್ಧಿ ಪಡೆದ ಮೈಸೂರು ದಸರಾ ಉತ್ಸವವು ತನ್ನ ವೈಭವ ಮತ್ತು ಸಂಸ್ಕೃತಿಯ ಬೇರುಗಳನ್ನು ಉತ್ತರ ಕರ್ನಾಟಕದ ಪುರಾತನ ಕ್ಷೇತ್ರವಾದ ಕೊಪ್ಪಳ ಜಿಲ್ಲೆಯ ಕುಮಟಾ (ಹೆಮಗುಡ್ಡ)ದ ದುರ್ಗಾ ಹಾಗೂ ಕುಮಾರ ರಾಮನ ಪೌರಾಣಿಕ–ಐತಿಹಾಸಿಕ ಪರಂಪರೆಯಿಂದ ಪಡೆದಿದೆ. ಸಾವಿರಾರು ವರ್ಷಗಳ ಹಿಂದೆ ರೂಪುಗೊಂಡ ಈ ಸಂಸ್ಕೃತಿ, ಇಂದಿಗೂ ಮೈಸೂರು ಅರಮನೆಯ ಭವ್ಯ ಜಂಬೂಸಾವರಿಯ ಮೂಲಕ ಜಗತ್ತಿನ ಗಮನ ಸೆಳೆಯುತ್ತಿದೆ.
ಇತಿಹಾಸದಲ್ಲಿ ಗಂಡುಗಲಿ ಕುಮಾರ ರಾಮನ ಪೀಳಿಗೆಯನ್ನು ಕ್ರಿ.ಶ. 1290 ರಿಂದ 1320ರವರೆಗೆ ಗುರುತಿಸಲಾಗಿದೆ. ಕುಮಟಾ (ಹೆಮಗುಡ್ಡ) ದುರ್ಗಾ ಕ್ಷೇತ್ರವನ್ನು ಆರಿಸಿಕೊಂಡು “ಕಂಪಿಲದ ರಾಜಕುಮಾರ” ಎಂಬ ಹೆಸರಿನಿಂದ ಪ್ರಸಿದ್ಧನಾಗಿದ್ದ ಕುಮಾರ ರಾಮನು ಧೈರ್ಯ, ಧರ್ಮನಿಷ್ಠೆ ಮತ್ತು ಶ್ರದ್ಧಾಪರತೆಗಾಗಿ ಗೌರವಿಸಲ್ಪಟ್ಟನು.
ಅವನ ಧೈರ್ಯಮಯ ಸ್ವಭಾವ ಮತ್ತು ಧಾರ್ಮಿಕ ನಿಷ್ಠೆ ದಸರಾ ಉತ್ಸವದ ಆಧ್ಯಾತ್ಮಿಕ ಆಧಾರದ ಮೂಲವಾದವು. ವಿಜಯನಗರ ಕಾಲದಲ್ಲಿ ಅವನ ಪೌರಾಣಿಕ ಹಾಗೂ ಆಧ್ಯಾತ್ಮಿಕ ಪ್ರಭಾವ ಮೈಸೂರು ವಾಡಿಯಾರ್ ವಂಶದ ಮೇಲೆ ಬಿದ್ದು, ದಸರಾ ಹಬ್ಬದ ಆಚರಣೆಗಳಿಗೆ ಬಲವಾದ ನೆಲೆ ಒದಗಿಸಿತು.
ಮೈಸೂರು ಒಡೆಯರ್ ವಂಶದ ಸ್ಥಾಪನೆ ಕ್ರಿ.ಶ. 1399ರಲ್ಲಿ ಯದುರಾಯ ಒಡೆಯರ್ ಮೂಲಕ ನಡೆಯಿತು. ಅವರು ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿ 1423ರವರೆಗೆ ಆಡಳಿತ ನಡೆಸಿ, ನಂತರ ಒಡೆಯರ್ ವಂಶದ ರಾಜರು 1947ರವರೆಗೆ ಮೈಸೂರನ್ನು ಆಳಿದ್ದಾರೆ. ಈ ವಂಶದ ಆಡಳಿತದಲ್ಲಿ ದಸರಾ ಹಬ್ಬವು ಶಕ್ತಿ, ಕಲೆ, ಸಂಸ್ಕೃತಿ ಮತ್ತು ಧರ್ಮಗಳ ಸಿಂಧುವಾಗಿ ಬೆಳೆದಿತು. ಈ ಇತಿಹಾಸದ ಮಾಹಿತಿಯನ್ನು ಸಂಶೋಧಕ ಡಾ. ಮಾರುತೇಶ್ ಅವರು ಪತ್ರಿಕಾ ವರದಿದಾರರಿಗೆ ಹಂಚಿಕೊಂಡರು.

