ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಯಲ್ಲದಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಗಳಿಕಟ್ಟೆ ಗ್ರಾಮದಲ್ಲಿ ಕಳೆದ ಸುಮಾರು ಎರಡು ತಿಂಗಳಿಂದ ತೀವ್ರ ಕುಡಿಯುವ ನೀರಿನ ಅಭಾವ ತಲೆದೋರಿದ್ದು, ಸಮಸ್ಯೆ ಬಗೆಹರಿಸದ ಆಡಳಿತ ಮಂಡಳಿ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ಥರು ಮಂಗಳವಾರ ಚಂದ್ರವಳ್ಳಿ ನ್ಯೂಸ್ ವರದಿ ಬೆನ್ನಲ್ಲೇ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಪಾತಾಳಕ್ಕೆ ಕುಸಿದಿದ್ದು, ಹಳೆ ಬೋರ್ವೆಲ್ಗಳಲ್ಲಿ ನೀರು ಖಾಲಿಯಾಗಿದೆ. ಹೊಸದಾಗಿ ಯಾವುದೇ ಬೋರ್ವೆಲ್ ಕೊರೆಸಿಲ್ಲ. ಇದರಿಂದಾಗಿ ಚಿಗಳಿಕಟ್ಟೆ ಗ್ರಾಮದ ಜನ ಹಾಗೂ ಜಾನುವಾರುಗಳು ಹನಿ ನೀರಿಗೂ ಪರದಾಡುವಂತಾಗಿದೆ. ಈ ಬಗ್ಗೆ ಹಲವು ಬಾರಿ ಪಿಡಿಒ ಗಮನಕ್ಕೆ ತಂದರೂ "ಕುಡಿಯುವ ನೀರಿಗೆ ಅನುದಾನವಿಲ್ಲ" ಎಂದು ಬೇಜವಾಬ್ದಾರಿತನದ ಉತ್ತರ ನೀಡುತ್ತಾ, ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ತೀವ್ರವಾಗಿ ತೊಳಲಿದರು.
ಆವರಣದಲ್ಲೇ ಅಡುಗೆ ಮಾಡಿ ಆಕ್ರೋಶ!
ಗ್ರಾಮಸ್ಥರ ಅಹವಾಲು ಸ್ವೀಕರಿಸಲು ಪಿಡಿಒ ತಡಮಾಡಿದ ಕಾರಣ ತಾಳ್ಮೆ ಕಳೆದುಕೊಂಡ ಗ್ರಾಮಸ್ಥರು ಪಂಚಾಯತಿ ಕಾರ್ಯಾಲಯದ ಆವರಣದಲ್ಲಿಯೇ ಅಡುಗೆ ತಯಾರಿಸಲು ಮುಂದಾದರು. ಗ್ರಾಮಸ್ಥರ ಈ ತೀವ್ರ ಪ್ರತಿಭಟನೆಗೆ ಮಣಿದ ಪಂಚಾಯತಿ ಸಿಬ್ಬಂದಿ, ತಕ್ಷಣವೇ ಹೊಸದಾಗಿ ಒಂದು ಮೋಟರ್ ತರಿಸಿಕೊಟ್ಟು ಸಮಸ್ಯೆಗೆ ಸದ್ಯಕ್ಕೆ ಪರಿಹಾರ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಣಿಕಂಠ, ಕರೇಗೌಡ, ಗಿರೀಶ್, ರಾಜಪ್ಪ C.R., ಲಕ್ಷ್ಮಿಕಾಂತ್, ಯಶವಂತ್, ಶಿವಾನಂದಣ್ಣ, ಶ್ರೀನಿವಾಸ್, ದಿವಾಕರ್, ಲೋಹಿತ್, ಮುಕುಂದ ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.
"ನಮಗೂ ಜವಾಬ್ದಾರಿ ಇದೆ, ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ" - ತಿಪ್ಪೇಸ್ವಾಮಿ (ಪಿಡಿಒ, ಯಲ್ಲದಕೆರೆ).
"ಮಳೆ ಇಲ್ಲದೆ ಎಲ್ಲಾ ಬೋರ್ವೆಲ್ಗಳಲ್ಲಿ ಅಂತರ್ಜಲ ಕುಸಿದು ನೀರಿನ ಅಭಾವ ಉಂಟಾಗಿದೆ. ಪಂಚಾಯತಿಯಲ್ಲಿ ಅನುದಾನ ಲಭ್ಯವಿಲ್ಲದಿರುವುದರಿಂದ ಹೊಸದಾಗಿ ಬೋರ್ವೆಲ್ ಕೊರೆಸಲು ಸಾಧ್ಯವಾಗುತ್ತಿಲ್ಲ. ಈ ವಿಷಯವನ್ನು ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಸದ್ಯಕ್ಕೆ ತಕ್ಷಣದ ಪರಿಹಾರವಾಗಿ ಹೊಸ ಮೋಟರ್ ತಂದು ಬಿಡುತ್ತಿದ್ದೇವೆ. ನಮಗೂ ಸಾರ್ವಜನಿಕರ ಬಗ್ಗೆ ಜವಾಬ್ದಾರಿ ಇದೆ."



