ಚಂದ್ರವಳ್ಳಿ ನ್ಯೂಸ್, ತುಮಕೂರು:
ಪೊಲೀಸ್ ಸಬ್ ಇನ್ಸ್ ಪೆಕ್ಟರ್(PSI) ಒಬ್ಬರು ಕೌಟುಂಬಿಕ ಕಹಲದಿಂದ ಮನನೊಂದು ಲಾಡ್ಜ್ ವೊಂದರಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ.
ದಾವಣಗೆರೆ ನಗರದ ಬಡಾವಣೆ PSI ನಾಗರಾಜಪ್ಪ(45) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಜು.1ರಂದು ಬೆಳಿಗ್ಗೆ 7 ಗಂಟೆಗೆ ದ್ವಾರಕಾ ಹೋಟೆಲ್ನ 4ನೇ ಮಹಡಿಯಲ್ಲಿ ರೂಂ ಬಾಡಿಗೆ ಪಡೆದಿದ್ದ ನಾಗರಾಜಪ್ಪ, ರೂಂಗೆ ತೆರಳಿದ್ದಾಗಿನಿಂದ ಅವರು ಹೊರಗೆ ಬಂದಿರಲಿಲ್ಲ. ಲಾಡ್ಜ್ ಸಿಬ್ಬಂದಿ ಕರೆ ಮಾಡಿದ್ರೂ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಲಾಡ್ಜ್ ನಲ್ಲಿ ದುರ್ವಾಸನೆ ಬಂದಾಗ, ಸಿಬ್ಬಂದಿ ಮಾಲೀಕರಿಗೆ ಮಾಹಿತಿ ನೀಡಿದ್ದರು. ಬಾಗಿಲು ತೆರೆದು ನೋಡಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು ತುಮಕೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ನಾಗರಾಜಪ್ಪ ಆತ್ಮಹತ್ಯೆ ಮಾಡಿಕೊಂಡ ರೂಂನಲ್ಲಿ 2 ಪುಟಗಳ ಡೆತ್ ನೋಟ್ ಪತ್ತೆಯಾಗಿದ್ದು ನನ್ನ ಸಾವಿಗೆ ನಾನೇ ಕಾರಣ, ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ. ಜೊತೆಗೆ ಹೋಟೆಲ್ ಮಾಲೀಕರಿಗೂ ಡೆತ್ನೋಟ್ನಲ್ಲಿ ಕ್ಷಮೆ ಕೇಳಿದ್ದಾರೆ.