ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸೇರಿಗೆ ಸವಾಸೇರು; ಕಾಂಗ್ರೆಸ್ ಪಕ್ಷದಲ್ಲಿ ನಿಲ್ಲದ ಅಧಿಕಾರ ಹಂಚಿಕೆ ತಕರಾರು
ಅಧಿಕಾರ ಹಂಚಿಕೆ ಬಗ್ಗೆ ತಮ್ಮ ಹಾಗೂ ಸಿಎಂ ಸಿದ್ದರಾಮಯ್ಯಅವರ ನಡುವೆ ಒಪ್ಪಂದ ಆಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಹೇಳಿಕೆ ಕೊಟ್ಟಾಗಿನಿಂದ ಕರ್ನಾಟಕ ಕಾಂಗ್ರೆಸ್ ನಾಯಕರು ಸೇರಿಗೆ ಸವಾಸೇರು ಎಂದು ಪರಸ್ಪರ ಸವಾಲ್ ಎಸೆಯುವ ಬೀದಿ ಕಾಳಗ ನಿಲ್ಲುತ್ತಲೇ ಇಲ್ಲ ಎಂದು ಜೆಡಿಎಸ್ ದೂರಿದೆ.
ಸಿಎಂ ಸಿದ್ದರಾಮಯ್ಯನವರು ಅಂತಹ ಯಾವುದೇ ಒಪ್ಪಂದ ಆಗಿಲ್ಲ ಎಂದಿರುವ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಗಳು ಹೇಳಿದ ಮೇಲೆ ಅದೇ ಫೈನಲ್ ಎಂದು ಮಾರ್ಮಿಕವಾಗಿ ಮಾತಾಡಿದರು.
ಇತ್ತ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಅವರಿಬ್ಬರ ನಡುವೆ ಒಪ್ಪಂದ ಆಗಿದ್ದರೆ ನಾವೆಲ್ಲ ಯಾಕೆ ಎಂದು ಅಸಮಾಧಾನ ಹೊರಹಾಕಿದರು. ಈಗ ಮತ್ತೊಬ್ಬ ಹಿರಿಯ ದಲಿತ ನಾಯಕರು ಮತ್ತು ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರು ಅಧಿಕಾರ ಹಂಚಿಕೆ ಒಪ್ಪಂದ ಆಗಿರುವುದು ನಿಜ ಎಂದು ಡಿ.ಕೆ.ಶಿವಕುಮಾರ್ ಅವರ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಅಧಿಕಾರ ಹಂಚಿಕೆ ಒಪ್ಪಂದ ಆಗಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿರುವುದು ಮಾತ್ರ ಸತ್ಯ ಎಂದು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಹರಿಹಾಯ್ದಿದೆ.