ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ತಂದೆ ಯಡಿಯೂರಪ್ಪ ಅವರ ಮೇಲೆ ಒಂದೊಲ್ಲೊಂದು ಕಾರಣ ಮುಂದೊಡ್ಡಿ ನಿತ್ಯ ಟೀಕಿ ಮಾಡುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ವಿಜಯೇಂದ್ರ ಪಟ್ಟು ಹಿಡಿದಿರುವ ಸಮಯದಲ್ಲೇ ಅವರ ತಂದೆ ಯಡಿಯೂರಪ್ಪ ತಣ್ಣಗೆ ಗಾಳಿ ಬಿಡುವ ಕೆಲಸ ಮಾಡಿ ಎಲ್ಲರೂ ಒಟ್ಟಿಗೆ ಹೋಗಬೇಕೆಂದು ಹೇಳಿರುವುದು ಅಚ್ಚರಿ ಮೂಡಿಸಿದೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊರಗಿನವರಲ್ಲ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕೆಂಬುದು ನನ್ನ ಅಭಿಪ್ರಾಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಅಪೇಕ್ಷೆ ಸಹ ಅದೇ ಆಗಿದೆ. ಏನೇ ಕೊರತೆಗಳಿದ್ದರೂ ಎದುರು ಕೂತು ಬಗೆಹರಿಸಿಕೊಂಡುಒಟ್ಟಾಗಿ ಹೋಗಬೇಕು ಎನ್ನುವುದು ನನ್ನ ಅಭಿಪ್ರಾಯ. ಅದಕ್ಕೆ ಎಲ್ಲರೂ ಸಹಕರಿಸುತ್ತಾರೆಂದು ನಾನುಭಾವಿಸಿರುವೆ ಎಂದು ತಿಳಿಸಿದರು.
ಅವರು ಏನೇ ಮಾತನಾಡಿದ್ದರೂ ಸಹ ಪಕ್ಷಕ್ಕೆ ಡ್ಯಾಮೇಜ್ ಆಗದ ರೀತಿಯಲ್ಲಿ ಒಟ್ಟಿಗೆ ಹೋಗಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಯಡಿಯೂರಪ್ಪ ತಿಳಿಸಿದರು.
ಇ.ಡಿ ಬಳಿ ಪುರಾವೆ ಇದೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮುಡಾ ಹಗರಣ ಸೇರಿದಂತೆ ಇತರೆ ಹಗರಣಗಳು ಹೊರ ಬರುತ್ತಿವೆ. ಮುಡಾದ ಪೂರ್ಣ ಹಗರಣ ಮಾಧ್ಯಮಗಳಲ್ಲೇ ಭಿತ್ತರವಾಗಿದೆ. ಒಂದು ಸಾರಿಅಪರಾಧ ಮಾಡಿ ಸೈಟ್ ವಾಪಸ್ ಕೊಡೋದು ಬಿಡೋದು ಬೇರೆ ವಿಷಯ. ಕೇವಲ ಅಷ್ಟೇ ಅಲ್ಲ, ಸಾವಿರಾರು ಸೈಟುಗಳನ್ನು ಕಾನೂನು ಬಾಹಿರವಾಗಿ ಹಂಚಿದ್ದಾರೆಂದು ತಿಳಿಸಿದ್ದಾರೆ.
ಇಡಿ ಅವರು ಪುರಾವೆಗಳಿಲ್ಲದೆ ಹೇಳುವುದಿಲ್ಲ. ಏನೇನೂ ಆಗುತ್ತದೆ ನೋಡೋಣ ಎಂದು ಯಡಿಯೂರಪ್ಪ ಮಾರ್ಮಿಕವಾಗಿ ನುಡಿದರು.
ಸದನದಲ್ಲಿ ಹೋರಾಟ:
ಬೆಳಗಾವಿಯಲ್ಲಿ ಇದೇ ತಿಂಗಳು ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಶಾಸಕರೆಲ್ಲರೂ ಸದನದಲ್ಲಿ ಭಾಗವಹಿಸಿ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ಮಾಡಲಿದ್ದಾರೆ ಎಂದು ಹೇಳಿದರು.