ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಡತನ ನಿರ್ಮೂಲನೆ, ಭೂ ಸುಧಾರಣೆ, ಸಾಮಾಜಿಕ ನ್ಯಾಯಕ್ಕಾಗಿ ಹಗಲಿರಲು ಶ್ರಮಿಸಿದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರದು, ರಾಜ್ಯ ರಾಜಕಾರಣದಲ್ಲಿ ಧೀಮಂತ ವ್ಯಕ್ತಿತ್ವ ಎಂದು ಕನ್ನಡ ವಾಗ್ಮೀ ಹಾಗೂ ಸಾಹಿತಿ ಹಿರೇಮಗಳೂರು ಕಣ್ಣನ್ ಬಣ್ಣಿಸಿದರು.
ನಗರದ ಚಳ್ಳಕೆರೆ ರಸ್ತೆಯ ಎಸ್.ಜೆ.ಕಲ್ಯಾಣ ಮಂಟಪದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಸಾಮಾಜಿಕ ಕ್ರಾಂತಿಯ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಂಚಿತ ಸಮುದಾಯಗಳಿಗೆ ಡಿ.ದೇವರಾಜ ಅರಸು ಅವಕಾಶಗಳ ಬಾಗಿಲು ತೆರದರು. ಉತ್ತಮ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ದೇವರಾಜ ಅರಸು ಬಡತನ ನಿರ್ಮೂಲನೆ ಪ್ರಯತ್ನಿಸಿದರು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಡಿದ ಭಾಷಣಗಳ ಸಂಗ್ರಹವನ್ನು 13 ಸಂಪುಟಗಳಲ್ಲಿ ಹೊರತರಲಾಗಿದೆ. ಯುವ ಜನತೆ ಅರಸು ಭಾಷಣಗಳ ತಪ್ಪದೇ ಅಧ್ಯಯನ ಮಾಡಬೇಕು ಎಂದು ಹಿರೇಮಗಳೂರು ಕಣ್ಣನ್ ಕರೆ ನೀಡಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನದ ಸಂದರ್ಭಲ್ಲಿ 4 ವರ್ಷ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿದ್ದು ವ್ಯಾಸಾಂಗ ಮಾಡಿದ್ದೇನೆ. ಕುಗ್ರಾಮದಲ್ಲಿ ಜನಿಸಿದ ನಾನು ಪಿ.ಯು.ಸಿ ವ್ಯಾಸಾಂಗದ ವೇಳೆ ಕಡೂರಿನಲ್ಲಿ, ಟಿ.ಸಿ.ಹೆಚ್ ತರಬೇತಿ ವೇಳೆ ಚಿಕ್ಕಮಗಳೂರಿನ ಒಬಿಸಿ ಹಾಸ್ಟೆಲ್ನಲ್ಲಿದ್ದೆ. ದೇವರಾಜ ಅರಸು ಅವರು ಮಾಡಿದ ಸಾಮಾಜಿಕ ಸುಧಾರಣೆಯ ಫಲವಾಗಿ ನನ್ನಂತಹ ಲಕ್ಷಾಂತರ ಜನರು ಶಿಕ್ಷಣ ಪಡೆದು ಉನ್ನತ ಹಂತಕ್ಕೆ ಏರಲು ಸಾಧ್ಯವಾಗಿದೆ ಎಂದರು.
1969 ರಿಂದ 1979 ವರೆಗಿನ ಕಾಲವನ್ನು ಅರಸು ಯುಗ ಎಂದೇ ಕರೆಯಲಾಗುತ್ತದೆ. ಮೈಸೂರು ರಾಜ್ಯಕ್ಕೆ ಕರ್ನಾಟಕ ನಾಮಕರಣ, ಉಳುವವನೇ ಭೂಮಿಯ ಒಡೆಯ ಘೋಷಣೆಯೊಂದಿಗೆ ಭೂ ಸುಧಾರಣೆ, ಕನಿಷ್ಠ ಕೂಲಿ ನಿಗದಿ, ಋಣ ಪರಿಹಾರ, ಜೀತ ವಿಮುಕ್ತಿ, ಎಲ್.ಜಿ.ಹಾವನೂರು ಆಯೋಗದ ವರದಿ ಅನುಷ್ಠಾನ ಮಾಡಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೆಚ್ಚಿಸಿದ್ದು, ವೃದ್ಧಾಪ್ಯ ವೇತನ ಹೀಗೆ ನಾನಾ ರೀತಿಯ ಚಾರಿತ್ರಿಕ ಅಭಿವೃದ್ಧಿ ಕೆಲಸಗಳು ಅರಸು ಯುಗದಲ್ಲಿ ಜಾರಿಗೆ ಬಂದವು.
ಶಿವರಾಮ ಕಾರಂತರ ‘ಚೋಮನ ದುಡಿ’ ಕಾದಂಬರಿಲ್ಲಿ ಭೂಮಿ ಉಳುಮೆ ಮಾಡಬೇಕು ಎಂಬ ಚೋಮನ ಕನಸು ಕನಸಾಗಿಯೇ ಉಳಿಯುತ್ತದೆ. ಆದರೆ ಅರಸು ಅವರು ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದು ಗೇಣಿದಾರರಾಗಿ ಭೂಮಿ ಉಳುಮೆ ಮಾಡುತ್ತಿದ್ದ ಬಡವರ ಭೂ ಒಡೆತನದ ಕನಸು ನನಸು ಮಾಡಿದರು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
*ವಿದ್ಯಾರ್ಥಿಗಳಿಗೆ ಸನ್ಮಾನ*
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಲತಾ ಭಾವಿಮಠ ಪ್ರಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಹೆಚ್.ಆನಂದ್ ಕುಮಾರ್ ಡಿ.ದೇವರಾಜ ಅರಸುರವರ ತತ್ವ ಮತ್ತು ಚಿಂತನೆಗಳ ಕುರಿತು ಉಪನ್ಯಾಸ ನೀಡಿದರು. ಜಯಂತಿ ಅಂಗವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದಲ್ಲಿದ್ದು ಪ್ರಸಕ್ತ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು. ವಾರ್ಷಿಕ ಪರೀಕ್ಷೆ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳು, ಪಿ.ಹೆಚ್.ಡಿ ಪದವಿ ಪಡೆದ ಸೇರಿದಂತೆ ಇತರೆ ಶೈಕ್ಷಣಿಕ ಸಾಧನೆ ತೋರಿದ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಹಾಗೂ ಬಿಸಿಎಂ ಇಲಾಖೆ ವಿವಿಧ ವಿದ್ಯಾರ್ಥಿ ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಡುಗೆಯವರಿಗೆ ಸನ್ಮಾನಿಸಲಾಯಿತು.
*ಚ್ಯವನ ಪ್ರಾಶ ವಿತರಣೆ*
ಆಯುμï ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಚ್ಯವನ ಪ್ರಾಶ ವಿತರಿಸಲಾಯಿತು.
ಚ್ಯವನಪ್ರಾಶ ಮಕ್ಕಳ ತೂಕವನ್ನು ಹೆಚ್ಚು ಮಾಡುವಲ್ಲಿ ಬಹಳ ಸಹಕಾರಿ ಹಾಗೂ ದೇಹಕ್ಕೆ ಪೂರಕವಾದ ಪೋಷಕಾಂಶಗಳನ್ನು ನೀಡುತ್ತದೆ. ಇದರಿಂದ ಮಕ್ಕಳ ಅಮೂಲಾಗ್ರ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಆಯುμï ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ತಿಳಿಸಿದರು.
ಡಿ.ಓ.ಮೋರಾರ್ಜಿ ಕಲಾತಂಡದವರು ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಆಕಾಶವಾಣಿಯ ಡಾ.ನವೀನ್ ಮಸ್ಕಲ್ ಕಾರ್ಯಕ್ರಮ ನಿರೂಪಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಕೆ.ಡಿ.ಪಿ ಸದಸ್ಯ ವಿಜಯ್ಕುಮಾರ್, ಜಿ.ಪಂ. ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಜಿ.ಪಂ.ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಆಹಾರ ಇಲಾಕೆ ಜಂಟಿ ನಿರ್ದೇಶಕ ಸಿದ್ದರಾಮ ಮಾರಿಹಾಳ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯ್ಕುಮಾರ್,
ಪಿ.ಯು.ಉಪನಿರ್ದೇಶಕ ಕೆ.ತಿಮ್ಮಪ್ಪ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್, ಅಲೆಮಾರಿ ಮತ್ತು ಅರೆ ಅಲೆಮಾರಿ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಯಾದವ, ಪ್ರತಾಪ್ ಜೋಗಿ, ರಾಮುಗೋಸಾಯಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

