ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಂದಿನಿ ಬ್ರ್ಯಾಂಡ್ ಹೆಸರನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಮೇಲೆ ನಂದಿನಿ ಬ್ರ್ಯಾಂಡ್ ಅನ್ನು ಸರ್ವನಾಶ ಮಾಡಲು ಹೊರಟಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಒಂದು ಕಡೆ ಹಾಲು ಉತ್ಪಾದಕರಿಗೆ ನೂರಾರು ಕೋಟಿ ಬಾಕಿ ಉಳಿಸಿಕೊಂಡಿದೆ. ಮತ್ತೊಂದು ಕಡೆ ಅತ್ಯಂತ ಬೇಡಿಕೆ ಇರುವ ರೆಡಿ ಮೇಡ್ ಇಡ್ಲಿ, ದೋಸೆ ಹಿಟ್ಟು, ವೇ ಪ್ರೋಟೀನ್ ಸೇರಿದಂತೆ ಅನೇಕ ಹೊಸ ಉತ್ಪನ್ನಗಳ ಮೂಲಕ ನಂದಿನಿ ಬ್ರ್ಯಾಂಡ್ ನ ಮಾರುಕಟ್ಟೆ ವಿಸ್ತರಿಸಲು ಅತ್ಯಂತ ಉತ್ಸಾಹ ಮತ್ತು ಬದ್ಧತೆ ತೋರಿದ್ದ ದಕ್ಷ ಅಧಿಕಾರಿ ಕೆಎಂಎಫ್ ಎಂಡಿ ಎಂ.ಕೆ.ಜಗದೀಶ್ ಅವರನ್ನ ದಿಢೀರನೆ ವರ್ಗಾವಣೆ ಮಾಡಿತ್ತು.
ಈಗ ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಡೈರಿ ಮಳಿಗೆಗಳನ್ನು ಸ್ಥಾಪಿಸಲು ಕರೆದಿದ್ದ ಟೆಂಡರ್ ನಲ್ಲಿ ಭಾಗವಹಿಸಲೂ ಆಸಕ್ತಿ ತೋರಿಲ್ಲ ಎಂದು ಅಶೋಕ್ ಕಿಡಿ ಕಾರಿದ್ದಾರೆ.
ನಮ್ಮ ನಾಡಿನ ರೈತರು, ನಿಷ್ಠಾವಂತ ಗ್ರಾಹಕರು ಕಷ್ಟಪಟ್ಟು ಕಟ್ಟಿರುವ ನಂದಿನಿ ಬ್ರ್ಯಾಂಡ್ ಅನ್ನ ಸರ್ವನಾಶ ಮಾಡಲು ಸಿಎಂ ಸಿದ್ದರಾಮಯ್ಯ ಅವರು ಶಪಥ ಮಾಡಿದಂತಿದೆ ಎಂದು ಅಶೋಕ್ ದೂರಿದ್ದಾರೆ.