ಯುಗಾದಿ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚುಮು ಚುಮು ಚಳಿ ಹೆಜ್ಜೆಲೀ
ಸರಿದ ಮುದ ಇಬ್ಬನಿ ತಂಪಿಗೆ
ಬಿರು ಬೆಂದ ಸುಡು ಬಿಸಿಲು ಕಾವಿಟ್ಟಿದೆ
ಮಳೆ ಮೋಡ ಅಲ್ಲಲ್ಲಿ ಕೆನೆ ಕಟ್ಟಿದೆ
ಚೆಂದ ಮಾಸಕೆ ಬಂದ ವಸಂತ
ಪ್ರಕೃತಿ ಸಂಕುಲಕೆ ಉಲ್ಲಾಸವೂ
ಉಡುಪು ಒಡವೆ,ವನ ಮುಡಿಗೆ
ಚಿಗುರೆಲೆ ಗಿಡಮರ,ಹೂಬಳ್ಳಿ ತೋರಣ
ನೆಲ ದಿಗಂತಕೆ,ನತ್ತು ಬಿನ್ನಾಣ
ಹಚ್ಚ ಪಚ್ಚೆ,ಮುದವಿಟ್ಟ ಹಸಿರು
ಕಾಡು ಮೇಡು ಬೆಸುಗೆ ಉಸಿರಲಿ
ಹಾಲೆಜ್ಜೆ ಬಸಿರು,ಚೈತ್ರದ ತೇರು
ಸಿಂಗಾರ ಹಾಸಿಗೆ ಸಿರಿ ಒಲುಮೆಗೆ
ತಿಳಿಕೊಳ,ತೆಳುಝರಿ,ತುಂಬು ತಂಗಾಳಿ
ಚಿಟ್ಟೆ ದುಂಬಿ ಜೇನು ಜೀರುಂಡೆ
ಮಧು ಮತ್ತ ಝೇಂಕಾರ
ಕಣ್ಮನ ತುಂಬಿ,ರಮ್ಯ ಮನೋಹರ
ಗುಬ್ಬಿ,ಕಾಡಕ್ಕಿ,ಗಿಳಿ,ನವಿಲು ಕೋಗಿಲೆ
ಕಲರವ ಕಂಪು,ಕಚಗುಳಿ ಇಂಪು
ಮಧುರ ಶೃತಿ,ಸ್ವರ ಸ್ವಾದ ಇಂಚರ
ದೈವ ಸೊಬಗು,ಸುಮಧುರ
ಆಚರಿಸು ಅರಿವೇ ನಿನಗೂ ಅನ್ವಯ
ನೋವು ನಲಿವು,ನಿಯಮ ಕಾಣ
ಏಳು ಬೀಳು,ಬೆಲ್ಲ ಬೇವಿನ ಹೂರಣ
ಸಮಪಾಲು,ಸಮ ಬಾಳ್ವೆ,ಬೆಸೆಯೋಣ
ಜಗದ ಬೀದಿ ಯುಗದ ಆದಿಗೆ
ಕಾಲನ ಉಡುಗೊರೆ ಸ್ಮರಿಸೋಣ
ಯುಗಯುಗಕೂ ನಮ್ಮೆಲ್ಲರಲಿ
ಅರಳಿಸು ಬಾ ಮರಳಿಸು ಬಾ
ಮಮತೆ ಪ್ರೀತಿ ಕರುಣೆ ವಾತ್ಸಲ್ಯದಿ ಬಾ
ಯುಗದ ಆದಿ ಯುಗ ಯುಗಾದಿ
ಕವಿತೆ:ಕುಮಾರ್ ಬಡಪ್ಪ, ಚಿತ್ರದುರ್ಗ.

