ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉದ್ಯಮಿ ನಂಬಿಸಿ 2 ಕೋಟಿ ರೂ. ಹಣ ಪಡೆದು ಡಿಜಿಟಲ್ ಕರೆನ್ಸಿಯಾಗಿ ಬದಲಾವಣೆ ಮಾಡಿಕೊಡುವುದಾಗಿ ಹೇಳಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಜರುಗಿದೆ.
ಅಪರಿಚಿತ ವ್ಯಕ್ತಿಗಳು ಉದ್ಯಮಿಗೆ ನಂಬಿಸಿ ದರೋಡೆ ಮಾಡಿದ್ದಾರೆಂದು ಸುಳ್ಳು ದೂರು ನೀಡಿದ್ದ ವ್ಯಕ್ತಿ ಸೇರಿ ಒಟ್ಟು 15 ಮಂದಿ ಆರೋಪಿಗಳನ್ನು ವಿದ್ಯಾರಣಪುರ ಠಾಣೆ ಪೊಲೀಸರು ಬಂಧಿಸಿದ್ಧಾರೆ.
ಪ್ರಕರಣದ ದೂರುದಾರರಾಗಿರುವ ಹರ್ಷ, ಸಹಚರರಾದ ರಕ್ಷಿತ್, ಚಂದ್ರಶೇಖರ, ರಾಕೇಶ್, ಬೆಂಜಮಿನ್ ಹರ್ಷ ಸೇರಿದಂತೆ ಒಟ್ಟು 15 ಮಂದಿ ಆರೋಪಿಗಳನ್ನ ಬಂಧಿಸಿ 1.11 ಕೋಟಿ ರೂ. ನಗದು, ಕೃತ್ಯಕ್ಕೆ ಬಳಸಿದ್ದ 4 ಕಾರುಗಳು, 4 ದ್ವಿಚಕ್ರ ವಾಹನಗಳು, 2 ಆಟೋಗಳು, 8 ಮೊಬೈಲ್ ಫೋನ್ ಹಾಗೂ ಒಂದು ಲಾಂಗ್, ಮಚ್ಚನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇನ್ನೂ ನಾಲ್ವರು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ. ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಚಿಕ್ಕಪೇಟೆಯ ಎಲೆಕ್ಟ್ರಿಕ್ ಉದ್ಯಮಿಯಿಂದ 2 ಕೋಟಿ ರೂ. ಪಡೆದು ಈ ಹಣವನ್ನ ಡಿಜಿಟಲ್ ಕರೆನ್ಸಿಯಾಗಿ ಪರಿವರ್ತಿಸಿ, ಆರ್ಟಿಜಿಎಸ್ ಮೂಲಕ ಹಣ ದ್ವಿಗುಣಗೊಳಿಸುವುದಾಗಿ ಆರೋಪಿ ಶ್ರೀಹರ್ಷ ನಂಬಿಸಿದ್ದ. ಇದರಂತೆ ಹಣ ಪಡೆದು ಜೂನ್ 25 ರಂದು ವಿದ್ಯಾರಣ್ಯಪುರದ ಎಂ.ಎಸ್. ಪಾಳ್ಯ ಬಳಿಯ ಅಂಗಡಿಯಲ್ಲಿರುವಾಗ ಪೂರ್ವ ಸಂಚಿನಂತೆ ಹಣ ದರೋಡೆ ಮಾಡಿಸಿದ್ದ. ಬಳಿಕ ಅಪರಿಚಿತ ವ್ಯಕ್ತಿಗಳಿಂದ 2 ಕೋಟಿ ದರೋಡೆಯಾಗಿದೆ ಎಂದು ಸುಳ್ಳು ದೂರನ್ನು ಪೊಲೀಸರಿಗೆ ನೀಡಿದ್ದ ಎನ್ನಲಾಗಿದೆ.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆರೋಪಿಯೊಂದಿಗೆ ದೂರುದಾರ ಶ್ರೀಹರ್ಷನ ಪಾತ್ರವಿರುವುದು ಕಂಡುಬಂದಿತ್ತು. ವ್ಯವಸ್ಥಿತ ಸಂಚು ರೂಪಿಸಿ ಕೆಲ ಆರೋಪಿಗಳಿಂದ ದರೋಡೆ ಮಾಡಿಸಿದ್ದ.
ಮೇಲ್ನೋಟಕ್ಕೆ ನೈಜವಾಗಿ ದರೋಡೆ ಆಗಿರುವುದಾಗಿ ಎಲ್ಲರನ್ನ ನಂಬಿಸಿದ್ದ. ಬಳಿಕ ತೀವ್ರ ತನಿಖೆ ನಡೆಸಿದಾಗ ದೂರುದಾರ ವ್ಯಕ್ತಿಯೇ ದರೋಡೆ ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡುಬಂದಿತ್ತು. ಬಳಿಕ ಹಂತ ಹಂತವಾಗಿ ಒಟ್ಟು 15 ಮಂದಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.