ಕಾಶ್ಮೀರದಲ್ಲಿ ಸಿಲುಕಿದ್ದ 178 ಮಂದಿ ಸುರಕ್ಷಿತವಾಗಿ ಬಂದ ಕನ್ನಡಿಗರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​​ನಲ್ಲಿ ನಡೆದ ಉಗ್ರ ದಾಳಿಯ ನಂತರ ಕಾಶ್ಮೀರದ ವಿವಿಧೆಡೆ ಸಿಲುಕಿದ್ದ ಸುಮಾರು 178 ಮಂದಿ ಕನ್ನಡಿಗರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆ ತರಲಾಯಿತು.

ಗುರುವಾರ ಮಧ್ಯಾಹ್ನ 12.30 ರ ಸುಮಾರಿಗೆ ಕನ್ನಡಿಗರನ್ನು ಒಳಗೊಂಡ ವಿಮಾನ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.

ದಾಳಿಯ ಮಾಹಿತಿ ದೊರೆಯುತ್ತಿದ್ದಂತೆಯೇ ಕರ್ನಾಟಕ ಸರ್ಕಾರ ಎರಡು ವಿಶೇಷ ತಂಡಗಳನ್ನು ಕಾಶ್ಮೀರಕ್ಕೆ ಕಳುಹಿಸಿಕೊಟ್ಟಿತ್ತು. ಕಾರ್ಮಿಕ ಸಂತೋಷ್ ಅನಿಲ್ ಲಾಡ್ ನೇತೃತ್ವದಲ್ಲಿ ಕನ್ನಡಿಗರನ್ನು ವಾಪಸ್ ಕರೆತರುವ ಕಾರ್ಯಾಚರಣೆ ನಡೆಸಲಾಗಿತ್ತು. ಸಂಸದ ತೇಜಸ್ವಿ ಸೂರ್ಯ ಸಹ ಕಾಶ್ಮೀರದಲ್ಲಿ ರಕ್ಷಣಾ ತಂಡಕ್ಕೆ ಸಾಥ್ ನೀಡಿದ್ದರು. ಕಾಶ್ಮೀರ ಸರ್ಕಾರದ ನೆರವಿನ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿವೆ.

ಕನ್ನಡಿಗರು, ಕಾಶ್ಮೀರಿಗರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸ್ಥಳೀಯ ಕಾಶ್ಮೀರಿಗರು ನಮಗೆ ಅತ್ಯುತ್ತಮ ಆತಿಥ್ಯತ್ಯ ನೀಡಿದರು. ಅದೇ ರೀತಿ ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಮ್ಮನ್ನು ಸುರಕ್ಷಿತವಾಗಿ ಕರೆತರಲು ಎಲ್ಲ ರೀತಿಯ ವ್ಯವಸ್ಥೆ ಮಾಡಿದವು. ಅವರಿಗೆ ಧನ್ಯವಾದಗಳು ಎಂದು ವಾಪಸಾದ ಕನ್ನಡಿಗರು ಹೇಳಿದರು.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಚಿವ ಸಂತೋಷ್​ ಲಾಡ್ ಮಾತನಾಡಿ​, ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಕನ್ನಡಿಗರು ಆಘಾತದಲ್ಲಿದ್ದರು. ಯಾವಾಗ ಏನು ಬೇಕಾದರೂ ಆಗಬಹುದೆಂಬ ಭಯ ಅವರಲ್ಲಿತ್ತು. ನಾನೇ 40ಕ್ಕೂ ಹೆಚ್ಚು ಸ್ಥಳಕ್ಕೆ ಭೇಟಿ ನೀಡಿ ಕನ್ನಡಿಗರ ಭೇಟಿ ಮಾಡಿದೆ. ಮಾಧ್ಯಮಗಳು ಪ್ರಸಾರ ಮಾಡಿದ ಸಹಾಯವಾಣಿ ಸಂಖ್ಯೆ ಹಾಗೂ ಮಾಹಿತಿ ಪಡೆದು ಅನೇಕರು ನಮ್ಮನ್ನು ಸಂಪರ್ಕಿಸಿದರು. ಎಲ್ಲರ ಸಹಕಾರದಿಂದ ಕನ್ನಡಿಗರನ್ನು ಕರೆತರುವುದು ಸಾಧ್ಯವಾಯಿತು ಎಂದು ಲಾಡ್ ತಿಳಿಸಿದರು.

ಪಹಲ್ಗಾಮ್​ನಲ್ಲಿ ನಡೆದಿದ್ದ ಭೀಕರ ದಾಳಿಯಲ್ಲಿ ಕರ್ನಾಟಕದ ಇಬ್ಬರೂ ಸೇರಿದ್ದರು. ಶಿವಮೊಗ್ಗದ ಮಂಜುನಾಥ ಶರ್ಮ ಹಾಗೂ ಬೆಂಗಳೂರಿನ ಭರತ್ ಭೂಷಣ್ ಮೃತಪಟ್ಟಿದ್ದು, ಅವರ ಪಾರ್ಥಿವ ಶರೀರವನ್ನು ಈಗಲೇ ಹುಟ್ಟೂರಿಗೆ ತರಲಾಗಿದೆ. ಅಂತ್ಯಸಂಸ್ಕಾರವೂ ನೆರವೇರಿದೆ ಎಂದು ತಿಳಿಸಿದರು.

Share This Article
error: Content is protected !!
";