ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕನ್ನಡ ಸಾಹಿತ್ಯ ಲೋಕದ ಭಾವಜನಲ ಬತ್ತಿಹೋಗಿದ್ದು, ಸ್ನೇಹ ಎನ್ನುವುದು ಬಳಸಿ ಬಿಸಾಡುವ ವಸ್ತುವಾಗಿದೆ ಎಂದು ಕವಿ, ಕಾದಂಬರಿಕಾರ ಡಾ. ಜಿ.ಬಿ.ಹರೀಶ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಮಂಗಳವಿದ್ಯಾ ಮಂದಿರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ಅಭಾಸಾಪ) ಬೆಂಗಳೂರು ಮಹಾನಗರ (ಗ್ರಾಮಾಂತರ ಜಿಲ್ಲೆ) ವತಿಯಿಂದ ಆಯೋಜಿಸಿಲಾದ .ನಾಕುತಂತಿ ಷಷ್ಟಿಪೂರ್ತಿ‘ ಸರಣಿಯ ‘ನಾದ-2′ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಾತ್ಮಿಕನೆಲೆಯಲ್ಲಷ್ಟೆ ಅಲ್ಲದೇ ಸಾಮಾಜಿಕ ನೆಲೆಯಲ್ಲೂ.ದಾ. ರಾ. ಬೇಂದ್ರೆ ಕಾವ್ಯ ಪ್ರಮುಖವಾಗುತ್ತದೆ. ವಿವಿಧ ನಂಬಿಕೆಗಳ, ಸಂಪ್ರದಾಯಗಳವರು ಅವರಪಾಡಿಗೆ ಅವರಿದ್ದರೆ ಎಲ್ಲರೂ ಒಂದಾಗುವುದು ಯಾವಾಗ? ನಾನು,ನೀನು, ಆನು, ತಾನು ಎನ್ನುವುದನ್ನೇ ಈ ದೃಷ್ಟಿಯಿಂದ ಓದಿದರೆ ಅದರಲ್ಲಿ ಸಾಮರಸ್ಯದ ಸಂದೇಶ ದೊರಕುತ್ತದೆ.
ಬೇಂದ್ರೆ ಕಾವ್ಯದಲ್ಲಿ ಅಧ್ಯಾತ್ಮಜಿಜ್ಞಾಸುಗಳಿಗೆ ಅಧ್ಯಾತ್ಮ ದಂತೆ, ಪ್ರೇಮಿಗಳಿಗೆ ಪ್ರೇಮ ಕವಿತೆಯಂತೆ ಕಾಣುತ್ತದೆ. ಒಂದೇ ಕವನದಲ್ಲಿ ಒಂದೇ ವಿಷಯವನ್ನು ಇರಿಸಿಕೊಂಡು ಬರೆಯುವುದಿಲ್ಲ.
ಜಗತ್ತಿನ ಸರ್ವ ಸಾಹಿತ್ಯಕ್ಕೆ ಬೇಕಾದ ಎಲ್ಲ ಅಂಶಗಳೂ ಕನ್ನಡ ಸಾಹಿತ್ಯ ದಲ್ಲಿದೆ, ಎಲ್ಲಭಾಷೆಗಳಿಗೂ ಕೊಡ ಬಲ್ಲಷ್ಟು ಸಂಪತ್ತು ನಮ್ಮ ಭಾಷೆಯಲ್ಲಿದೆ ಎಂದರು.
ಬೇಂದ್ರೆಯವರು ತತ್ತ್ವಜ್ಞಾನಿಯಾಗಿ ಲೋಕವನ್ನು ನೋಡುತ್ತಾರೆ. ಇತಿಹಾಸವನ್ನು ಅವರು ಕೇವಲ ಪುಸ್ತಕ, ಸಾಹಿತಿಗಳ ಆಧಾರದಲ್ಲಿ ನೋಡದೆ ಬುದ್ಧನ ಹಿನ್ನೆಲೆಯಾಗಿಟ್ಟುಕೊಂಡು ಮಾತನಾಡುತ್ತಾರೆ.
ಇಷ್ಟೆಲ್ಲ ವೈವಿಧ್ಯತೆ ಹೊಂದಿದ್ದ ದಾ ರಾ ಬೇಂದ್ರೆ ಯು, ಜೀವನದಲ್ಲಿ ಬಡವ ರಾಗಿದ್ದರೂ ಸ್ನೇಹದಲ್ಲಿ ಶ್ರೀಮಂತರು. ಎಂದಿಗೂ ಶುದ್ಧ ಸ್ನೇಹಕ್ಕಾಗಿಯೇ ಸ್ನೇಹಿತರೊಂದಿಗೆ ಒಡನಾಡಿದವರು. ದೇವುಡು, ಗೋವಿಂದ ಪೈ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬೆಳಗೆರೆ ಜಾನಕಮ್ಮ ನವರೆಗೆ ಅನೇಕರು ನಿಧನರಾದ ಕವಿತೆಗಳನ್ನು ಬೇಂದ್ರೆ ಬರೆದಿದ್ದಾರೆ. ಅವರಿಗೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬ ಯಾವ ಭೇದವೂ ಇರಲಿಲ್ಲ. ಆದರೆ ಇಂದು ಪರಿಸ್ಥಿತಿ ವಿಭಿನ್ನವಾಗಿದೆ.
ಯು.ಆರ್. ಅನಂತಮೂರ್ತಿ, ಡಿ.ಆರ್. ನಾಗರಾಜ್, ಲಂಕೇಶ್, ಚೆನ್ನವೀರ ಕಣವಿಯವರು ನಿಧನರಾದಾಗ ಯಾರೂ ಕವಿತೆ ಬರೆದಿದ್ದನ್ನು ನೋಡಿಲ್ಲ. ಇದೆಲ್ಲವನ್ನೂ ನೋಡಿದಾಗ ಕರ್ನಾಟಕ ಸಾಹಿತ್ಯ ಸಂಸ್ಕೃತಿ ಎಲ್ಲೋ ದಾರಿ ತಪ್ಪಿದೆ ಎನ್ನಿಸುತ್ತದೆ. ಭಾವ ಶುದ್ಧತೆ ಶುಷ್ಕ ವಾಗಿದೆ. ಎಲ್ಲ ಕಾಲದ ಕಾವ್ಯ ಪ್ರಕಾರಗಳಲ್ಲೂ ಈ ವ್ಯಾಧಿ ಆವರಿಸಿದೆ. ಸ್ನೇಹವನ್ನು ಎಷ್ಟು ಬೇಕೊಅಷ್ಟಕ್ಕೆ ಬಳಸಿಕೊಂಡು ಬಿಸಾಡುವಂತಾಗಿದೆ. ಸಾಂಸ್ಕೃತಿಕ ಅನಕ್ಷರತೆ ಯಿಂದ ಬಳಲುತ್ತಿದ್ದೇವೆಯೇ ಎಂಬ ಬೇಸರವಾಗುತ್ತದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಖ್ಯಾತ ಹಾಸ್ಯ ಸಾಹಿತಿ ಹಾಗೂ ಅ ಭಾ ಸಾ ಪ ಬೆಂಗಳೂರು ಮಹಾನಗರ ಅಧ್ಯಕ್ಷ ಎಂ.ಎಸ್. ನರಸಿಂಹಮೂರ್ತಿ ಅವರು ಮಾತನಾಡಿ, ಜೀವನದಲ್ಲಿ ಬೇಂದ್ರೆಯವರಷ್ಟು ಕಷ್ಟ ಪಟ್ಟವರು ಬೇರೆ ಯಾವ ಸಾಹಿತಿಯೂ ಇರಲಿಕ್ಕಿಲ್ಲ. ಆದರೆ ನೋವನ್ನೆಲ್ಲಾನುಂಗಿ ಒಳಿತಾದದ್ದನ್ನೇ ಜನರಿಗೆ ತಮ್ಮ ಸಾಹಿತ್ಯದ ಮೂಲಕ ನೀಡಿದರು ಎಂದರು.
ದೊಡ್ಡಬಳ್ಳಾಪುರದ ವಾಣಿಜ್ಯ ತೆರಿಗೆ ಅಧಿಕಾರಿ ಸ್ಮಿತಾ, ಸರ್ಕಾರಿ ಶಾಲಾಕನ್ನಡ ಶಿಕ್ಷಕಿ ಯಶೋಧಾ, ಉಪನ್ಯಾಸಕಿ ಪ್ರಭಾ ಅವರು ಕಾವ್ಯವಾಚನ ಮಾಡಿದರು.
ಈ ಸಂದರ್ಭದಲ್ಲಿ ವೈದ್ಯೆ ಡಾ. ಇಂದಿರಾ . ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಡಿ.ಎಂ.ಘನಶ್ಯಾಂ, ದಕ್ಷಿಣ ಜಿಲ್ಲಾ ಅಧ್ಯಕ್ಷ ಡಾ. ಭಾನು, ಉತ್ತರ ಜಿಲ್ಲಾ ಅಧ್ಯಕ್ಷ ಸದ್ಯೋಜಾತ ಭಟ್ ಶಾಲಾ ಶಿಕ್ಷಕರು ಶಾಲಾ ಮಕ್ಕಳು ಮತ್ತಿತರರು ಹಾಜರಿದ್ದರು.