![](https://www.chandravallinews.com/wp-content/uploads/2022/11/WhatsApp-Image-2022-11-04-at-7.07.37-AM.jpeg)
i
ಚಳ್ಳಕೆರೆ ಕ್ಷೇತ್ರಕ್ಕೆ ಶಶಿಕುಮಾರ್ ಎಂಟ್ರಿ, ಬಿಜೆಪಿ ತಂತ್ರಗಾರಿಕೆ ಫಲಿಸುತ್ತಾ…?
ವರದಿ-ಎಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ವಿಧಾನಸಭಾ ಚುನಾವಣೆ ಕೇವಲ ಆರು ತಿಂಗಳಲ್ಲಿ ಬರಲಿದ್ದು ಎಲ್ಲಾ ಪಕ್ಷಗಳು ತಮ್ಮ ಗೆಲುವಿಗಾಗಿ ಕಸರತ್ತು ಪ್ರಾರಂಭಿಸಿವೆ. ಒಂದೆಡೆ ಕಾಂಗ್ರೆಸ್ ರಾಹುಲ್ ಗಾಂಧಿ ಜೊತೆಗೂಡಿ ಭಾರತ್ ಜೋಡೋ ಯಾತ್ರೆ ಮಾಡಿದರೆ ಇನ್ನೊಂದೆಡೆ ಜೆಡಿಎಸ್ ಪಂಚರತ್ನ ರಥಯಾತ್ರೆ ಮಾಡುತ್ತಿದ್ದರೆ ಬಿಜೆಪಿ ಇತರೆ ಪಕ್ಷಗಳ ನಾಯಕರಿಗೆ ಗಾಳ ಹಾಕಿ ಸಮಾವೇಶಗಳ ಪಕ್ಷ ಸಂಘಟನೆ ಸಜ್ಜಾಗಿದೆ. ಕಾಂಗ್ರೆಸ್ ಪಕ್ಷ ಹಿಂದುಳಿದ ದಲಿತ ಮತಗಳ ಮೇಲೆ ಕಣ್ಣಿದೆ. ಇದರ ಜೊತೆಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದು ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಬದಲಾವಣೆ ತರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ದಲಿತ ನಾಯಕ ಖರ್ಗೆ ಅವರನ್ನು ಉನ್ನತ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಿರುವುದರಿಂದ ಬಿಜೆಪಿ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಇದಕ್ಕೆ ಸಡ್ಡು ಹೊಡೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಗೆಲ್ಲುವಂತ ಸಾಮರ್ಥ್ಯ ಇರುವ ಕ್ಷೇತ್ರಗಳಿಗೆ ಬಲಿಷ್ಠ ಅಭ್ಯರ್ಥಿಗಳನ್ನು ಹಾಕಲು ಬಿಜೆಪಿ ಸಿದ್ಧತೆ ಮಾಡಿಕೊಂಡು ಅನ್ಯ ಪಕ್ಷಗಳ ನಾಯಕರನ್ನ ತನ್ನತ್ತ ಸೆಳೆದು ಟಿಕೆಟ್ ಕೊಟ್ಟು ಗೆಲ್ಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.
ಚುನಾವಣೆಗೆ ಆರು ತಿಂಗಳ ಮೊದಲೇ ಕೇಂದ್ರದ ಬಿಜೆಪಿ ನಾಯಕರು ಗುಟ್ಟಾಗಿ ಟಿಕೆಟ್ ಫೈನಲ್ ಮಾಡುವ ಪ್ರಕ್ರಿಯೆ ಪ್ರಾರಂಭಿಸಿದ್ದು ಅದರ ಅಂಗವಾಗಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ತೀವ್ರ ಸ್ಪರ್ಧೆಯೊಡ್ಡುವಂತ ಅಭ್ಯರ್ಥಿಗೆ ಗಾಳ ಹಾಕಿ ಮಾಜಿ ಸಂಸದ, ಚಿತ್ರ ನಟ ಶಶಿಕುಮಾರ್ ಅವರನ್ನು ಮುಖ್ಯಮಂತ್ರಿ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ – ಕೇಂದ್ರ ಗೃಹ ಸಚಿವ ಅಮಿತ್ ಶಾ ಜೋಡಿ ಕೇಂದ್ರದಲ್ಲಿ ಬಂದ ಮೇಲೆ ಯಾರ ಮಾತಿಗೂ ಮನ್ನಣೆ ನೀಡದೆ ಆನೆ ನಡೆದದ್ದೇ ದಾರಿ ಎಂಬಂತೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಶಶಿಕುಮಾರ್ ಅವರನ್ನ ಬಿಜೆಪಿ ಸೇರಿಸಿಕೊಂಡಿದೆ ಎನ್ನಲಾಗುತ್ತಿದೆ.
ಇದೀಗ ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ರಣತಂತ್ರ ಮಾಡುತ್ತಿದೆ. ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಬಹುತೇಕ ತಯಾರಿ ಮಾಡಿಕೊಂಡಿದೆ. ಕೇಂದ್ರದಿಂದ ರಹಸ್ಯ ತಂಡವೊಂದು ಇತ್ತೀಚಿಗಷ್ಟೇ ಬೆಂಗಳೂರಿಗೆ ಆಗಮಿಸಿ ಹೊಸ ಅಭ್ಯರ್ಥಿಗಳ ಶೋಧ ಕಾರ್ಯ ನಡೆಸಿದ್ದರ ಫಲವಾಗಿ ಕಾಂಗ್ರೆಸ್-ಜೆಡಿಎಸ್ ಮುಖಂಡರು ಹಾಗೂ ರಾಜ್ಯ ಸರ್ಕಾರದ ಉನ್ನತ ಹುದ್ದೆಯಿಂದ ನಿವೃತ್ತಯಾದವರಿಗೆ ಮಣೆ ಹಾಕಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ.
ಶಶಿಕುಮಾರ್ ಶಕ್ತಿ: ದೇವೇಗೌಡ ಮತ್ತು ರಾಮಕೃಷ್ಣ ಹೆಗಡೆ ಅವರು ಎರಡು ಬಣಗಳಾಗಿ ಜನತಾಪರಿವಾರ ವಿಭಜನೆಯಾಗಿತ್ತು. ರಾಮಕೃಷ್ಣ ಹೆಗಡೆ ಜೆಡಿ(ಯು), ದೇವೇಗೌಡ (ಜೆಡಿಎಸ್)ಗಳಾಗಿದ್ದವು. ಕಾಂಗ್ರೆಸ್ ಪಕ್ಷದಿಂದ ಸಿ.ಪಿ.ಮೂಡಲಗಿರಿಯಪ್ಪ, ಜೆಡಿಎಸ್ ಪಕ್ಷದಿಂದ ಟಿ.ಜೆ.ಮರಿಯಪ್ಪ, ಜೆಡಿಯು ಪಕ್ಷದಿಂದ ಚಿತ್ರ ನಟ ಶಶಿಕುಮಾರ್ ಅವರಿಗೆ ಟಿಕೆಟ್ ನೀಡಲಾಗಿತ್ತು.
1999-2004ರ ಅವಧಿಗೆ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚಿತ್ರನಟ ಶಶಿಕುಮಾರ್ ಅಭಿನಯದ ಹಾಲಪ್ಪ ಚಿತ್ರದ ಚಿತ್ರೀಕರಣ ನಡೆದಿತ್ತು. ಆ ಸಂದರ್ಭದಲ್ಲಿ ಜೆಡಿ(ಯು) ಪಕ್ಷಕ್ಕೆ ಯಾರೂ ಅಭ್ಯರ್ಥಿ ಸಿಕ್ಕಿರಲಿಲ್ಲ, ಕೊನೆ ಗಳಿಗೆಯಲ್ಲಿ ಶಶಿಕುಮಾರ್ ಅವರನ್ನ ಕಣಕ್ಕೆ ಇಳಿಸಲಾಗಿತ್ತು. ಶಶಿಕುಮಾರ್ ಅವರು 3,70,793 ಮತಗಳನ್ನು ಪಡೆದು ಸಿ.ಪಿ.ಮೂಡಲಗಿರಿಯಪ್ಪ(3,59,615) ಇವರನ್ನ 11178 ಮತಗಳ ಅಂತರದಲ್ಲಿ ಸೋಲಿಸಿದರು. ಸಂಸದರಾಗಿ ಅಷ್ಟೇನು ಉತ್ತಮ ಕೆಲಸ ಮಾಡದ ಹಿನ್ನೆಲೆಯಲ್ಲಿ 2004ರ ಲೋಕಸಭಾ ಚುನಾವಣೆಗೆ ಶಶಿಕುಮಾರ್ ಸ್ಪರ್ಧಿಸಲಿಲ್ಲ. ಕೊಟ್ಟ ಅಧಿಕಾರವನ್ನು ಸರಿಯಾಗಿ ನಿಭಾಯಿಸಲಿಲ್ಲ ಎನ್ನುವ ಆರೋಪ ಶಶಿಕುಮಾರ್ ಮೇಲಿದೆ. 2009ರಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರಿಂದ ಆ ಚುನಾವಣೆಯಲ್ಲೂ ಶಶಿಕುಮಾರ್ ಸ್ಪರ್ಧಿಸಲಿಲ್ಲ.
ಆದರೆ 2008ರಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಪಂಗಡ(ಎಸ್ ಟಿ)ಕ್ಕೆ ಮೀಸಲಾಗಿದ್ದರಿಂದ ಕಾಂಗ್ರೆಸ್ ಪಕ್ಷವು ಶಶಿಕುಮಾರ್ ಅವರಿಗೆ ಟಿಕೆಟ್ ನೀಡಿತ್ತು.
ಆ ಚುನಾವಣೆಯಲ್ಲಿ ಬಿಜೆಪಿ ಪಾರ್ಟಿಯ ತಿಪ್ಪೇಸ್ವಾಮಿ ಅವರು 42591 ಮತಗಳನ್ನು ಪಡೆದು ಆಯ್ಕೆಯಾದರು. ಶಶಿಕುಮಾರ್ 42,302 ಮತಗಳನ್ನು ಪಡೆದು ಸೋಲು ಕಂಡರು. ಅಂದರೆ ಕೇವಲ 289 ಮತಗಳ ಅಂತರದಲ್ಲಿ ಸೋಲು ಕಾಣಬೇಕಾಯಿತು.
ಚಿತ್ರ ನಟರಾಗಿ, ಸಂಸದರಾಗಿ ಪ್ರತಿಯೊಬ್ಬರಿಗೂ ಪರಿಚಯ ಇರುವ ಶಶಿಕುಮಾರ್ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಾರ್ಟಿಯಿಂದ ಸ್ಪರ್ಧಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿ ಬಾಳೆಕಾಯಿ ರಾಮದಾಸ್, ಜಯಪಾಲಯ್ಯ ಸೇರಿದಂತೆ ಮತ್ತಿತರರ ಹೆಸರು ಕೇಳಿ ಬಂದರೂ ಅವರು ಕಾಂಗ್ರೆಸ್ ಪಕ್ಷ ಹಾಲಿ ಶಾಸಕ ಟಿ.ರಘುಮೂರ್ತಿ ಅವರಿಗೆ ಪೈಪೋಟಿ ನೀಡುವಷ್ಟು ಬಲಿಷ್ಠ ಅಭ್ಯರ್ಥಿಗಳಲ್ಲ. ಜೆಡಿಎಸ್ ಪಕ್ಷದಿಂದ ರವೀಶ್ ಸ್ಪರ್ಧಿಸುವುದು ನಿಶ್ಚಿತವಾಗಿದೆ. ಒಂದು ವೇಳೆ ಶಶಿಕುಮಾರ್ ಸ್ಪರ್ಧಿಸಿದರೆ ಕಾಂಗ್ರೆಸ್-ಜೆಡಿಎಸ್-ಬಿಜೆಪಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಬಲಿಷ್ಠ ನಾಯಕಃ ಹಾಲಿ ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದಿದ್ದಾರೆ. ಇವರು 2013ರ ವಿಧಾನಸಭಾ ಚುನಾವಣೆಯಲ್ಲಿ 60197 ಮತಗಳನ್ನು ಪಡೆದಿದ್ದರೆ 2018ರ ಚುನಾವಣೆಯಲ್ಲಿ 72874 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯ ಮಾಡಿರುವ ಶಾಸಕರು ಹೆಮ್ಮರವಾಗಿ ಬೆಳೆದಿದ್ದಾರೆ. ಅವರು ಪಕ್ಷಾತೀತವಾಗಿ ಎಲ್ಲರನ್ನು ನೋಡುತ್ತಿರುವುದಲ್ಲದೆ ಗೆದ್ದ ನಂತರ ಪಕ್ಷ ರಾಜಕಾರಣ ಮಾಡಿಲ್ಲ. ಕಳೆದ ಎರಡು ಚುನಾವಣೆಗಿಂತ ಬಲಿಷ್ಠವಾಗಿದ್ದು 2023ರ ಚುನಾವಣೆಯನ್ನು ರಘುಮೂರ್ತಿ ಅತ್ಯಂತ ಭಿನ್ನವಾಗಿ ಆಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅವರನ್ನು ಮಣಿಸುವುದು ಅಷ್ಟು ಸುಲಭದ ಕೆಲಸವಲ್ಲ. ಚಿತ್ರ ನಟ ಶಶಿಕುಮಾರ್ ಅವರನ್ನು ಎಳೆದು ತಂದಿರುವ ಬಿಜೆಪಿ ತಂತ್ರಗಾರಿಕೆ ಫಲಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.