![](https://www.chandravallinews.com/wp-content/uploads/2022/11/WhatsApp-Image-2022-11-05-at-8.49.09-PM-1024x472.jpeg)
i
ಯುವತಿಯರು ಆರೋಗ್ಯ ಸುರಕ್ಷತೆ ಕಾಳಜಿ ವಹಿಸಿ-ಡಾ.ಆರ್.ರೂಪ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಿಶೋರಿಯರು ತಮ್ಮ ಆರೋಗ್ಯ ಸುರಕ್ಷತೆಯ ಜೊತೆಗೆ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಯ ಕೋ ಬ್ರಾಂಡೆಡ್ ಕಾರ್ಡ್ ಮಾಡಿಸುವಂತೆ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಆರ್.ರೂಪ ಕರೆ ನೀಡಿದರು.
ಚಿತ್ರದುರ್ಗ ತಾಲ್ಲೂಕಿನ ಮೆದೇಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶನಿವಾರ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸಹಯೋಗದಲ್ಲಿ “ಕಿಶೋರಿಯರಿಗೊಂದು ಕಿವಿ ಮಾತು” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಕಿಶೋರಿಯರಿಗೊಂದು ಕಿವಿ ಮಾತು” ಇದು ಒಂದು ರಾಷ್ಟ್ರೀಯ ಕಿಶೋರಿ ಸ್ವಾಸ್ಥ್ಯ ಕಾರ್ಯಕ್ರಮವಾಗಿದ್ದು, ಹದಿ ಹರೆಯದ ಹೆಣ್ಣುಮಕ್ಕಳು ಋತುಚಕ್ರ ಪ್ರಾರಂಭದಲ್ಲಿ ದೈಹಿಕ ಮಾನಸಿಕವಾಗಿ ಉಂಟಾಗುವ ಪರಿಣಾಮಗಳನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮ. ಹೆಣ್ಣು ಮಕ್ಕಳು ಋತುಮತಿ ರಜಸ್ವಲೆಯಾಗುವುದು ಪ್ರಕೃತಿಯ ಸಹಜ ಕ್ರಿಯೆ. ಮಜುಗರ ಸಂಕೋಜ ಬೇಡ. ವೈಯಕ್ತಿಕ ಸ್ವಚ್ಛತೆ ಪೌಷ್ಟಿಕಾಹಾರದ ಕಡೆ ಗಮನ ಹರಿಸಿ ಎಂದು ಹೇಳಿದರು.
ಕಿಶೋರಿಯರು ತಮ್ಮ ಆರೋಗ್ಯ ಸುರಕ್ಷತೆಯ ಜೊತೆಗೆ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಯ ಕೋ ಬ್ರಾಂಡೆಡ್ ಕಾರ್ಡ್ ಮಾಡಿಸಿ ಉಚಿತವಾಗಿ ಗ್ರಾಮ ಒನ್ ಸೆಂಟರ್ನಲ್ಲಿ ಮಾಡಿಸಿ ಬಿ.ಪಿ.ಎಲ್ ಕುಟುಂಬಕ್ಕೆ ರೂ.5ಲಕ್ಷ ಗಳವರೆಗೆ ಉನ್ನತಮಟ್ಟದ ವೈದ್ಯಕೀಯ ಸೇವಾ ವೆಚ್ಚ, ಎ.ಪಿ.ಎಲ್ ಕುಟುಂಬಕ್ಕೂ ರೂ.1.50ಲಕ್ಷಗಳ ಉನ್ನತ ಮಟ್ಟದ ವೈದ್ಯಕೀಯ ಸೇವಾ ವೆಚ್ಚವನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ ಎಂದರು.
ಸಿ.ಜಿ.ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ್ ಮಾತನಾಡಿ, ಕಿಶೋರಿಯರು ರಜಸ್ವಲೆಯಾಗುವುದು ಈ ವಯಸ್ಸಿನಲ್ಲಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸಂಕೋಚವಿಲ್ಲದೆ ನಿಮ್ಮ ತಾಯಿ ಅಕ್ಕಂದಿರ ಬಳಿ ನಿಮಗಾಗುವ ತೊಂದರೆಯನ್ನು ಹೇಳಿ ವೈದ್ಯರ ಸಲಹೆ ಪಡೆದುಕೊಳ್ಳಿ. ನಿಮ್ಮ ಸೇವೆಗಾಗಿ ಪ್ರತಿ ಗುರುವಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ನೇಹ ಕ್ಲಿನಿಕ್ ತೆರೆದಿರುತ್ತದೆ. ಅಪ್ತ ಸಮಾಲೋಚನೆ ಮಾಡಿಕೊಳ್ಳಿ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಸರ್ಕಾರ ಕಿಶೋರಿಯರಿಗಾಗಿ ರಾಷ್ಟ್ರೀಯ ಕಿಶೋರಿ ಸ್ವಾಸ್ಥ್ಯ ಕಾರ್ಯಕ್ರಮ ಆಯೋಜಿಸಿದ್ದು, ಋತುಸ್ರಾವದ ಸಂದರ್ಭದಲ್ಲಿ ಸ್ಥಿತಿಯನ್ನು ಹೇಗೆ ನಿಭಾಯಿಸಬೇಕು. ಸ್ವಚ್ಚತೆ ಸ್ಯಾನಿಟರಿ ನ್ಯಾಪಕಿನ್ ಬಳಕೆ ವಿಸರ್ಜನೆ ಪೌಷ್ಟಿಕಾಹಾರ ಸೇವನೆ ಮಾನಸಿಕ ಭೌತಿಕ ಬದಲಾವಣೆಗಳನ್ನು ಅರಿಯಲು ಆರೋಗ್ಯ ಶಿಕ್ಷಣ, ವಾರಕೊಮ್ಮೆ ಕಬ್ಬಿಣಾಂಶ ಮಾತ್ರೆ ವಿತರಣೆ, 6 ತಿಂಗಳಿಗೊಮ್ಮೆ ಜಂತು ಮಾತ್ರೆ ವಿತರಣೆ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ತಪಾಸಣೆ ಚಿಕಿತ್ಸೆ ನಿರ್ದೇಶನ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಷಣ್ಮುಖಪ್ಪ, ಸಮುದಾಯ ಆರೋಗ್ಯಾಧಿಕಾರಿ ರಮೇಶ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀಧರ್, ಶಂಕರನಾಯ್ಕ್, ಆರೋಗ್ಯ ಸುರಕ್ಷತಾಧಿಕಾರಿಗಳಾದ ಹನುಮಕ್ಕ, ಕಾತ್ಯಾಣಮ್ಮ ಆಶಾ ಬೋಧಕಿ ಪದ್ಮಜಾ ಆಶಾ ಕಾರ್ಯಕರ್ತೆಯರು, ಕಿಶೋರಿಯರು ಇದ್ದರು.