i
ಪರಿಷತ್ ನಲ್ಲಿ ಕಾಂಗ್ರೆಸ್ ಬಲ ಹೆಚ್ಚಿಸಲು ಶ್ರೀನಿವಾಸ್ ಗೆಲುವು ಅಗತ್ಯ-ರಘುಮೂರ್ತಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಮತಗಳನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರಿಗೆ ನೀಡುವ ಮೂಲಕ ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಬಲ ಹೆಚ್ಚಿಸಿದರೆ ಶಿಕ್ಷಕರ ಪರವಾಗಿ ಕೆಲಸ ಮಾಡಲು ಹೆಚ್ಚಿನ ಅನುಕೂಲವಾಗುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ದುರ್ಗದ ಸಿರಿ ಹೋಟೆಲ್ ನಲ್ಲಿ ತುರುವನೂರು ಹೋಬಳಿಯ ಪ್ರೌಢಶಾಲಾ ಶಿಕ್ಷಕರ ಸಭೆಯಲ್ಲಿ ಡಿ.ಟಿ.ಶ್ರೀನಿವಾಸ್ ಪರ ಮತಯಾಚನೆ ಮಾಡಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದ್ದು ಶಿಕ್ಷಕರ ಪರವಾದ ತಿರ್ಮಾನಗಳನ್ನು ತೆಗೆದುಕೊಳ್ಳಲು ನಾವು ಬದ್ದವಾಗಿದ್ದೇವೆ. ವಿಧಾನ ಸಭೆ ಜೊತೆಗೆ ವಿಧಾನ ಪರಿಷತ್ ಸಹ ನಮ್ಮ ಬಹುಮತ ಬಂದರೆ ಕಾಯ್ದೆ ಕಾನೂನು ಜಾರಿ ಮಾಡಲು ಅನುಕೂಲವಾಗುತ್ತದೆ ಎಂದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರು ಕ್ರಿಯಾಶೀಲ ವ್ಯಕ್ತಿಯಾಗಿದ್ದು ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡುವುದರಲ್ಲಿ ಅನುಮಾನವಿಲ್ಲ, ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅನುಭವವಿದ್ದು ಶಿಕ್ಷಕರ ಪರ ವಿಧಾನ ಪರಿಷತ್ ನಲ್ಲಿ ಮಾತನಾಡಿ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಕೆಲಸ ಮಾಡುತ್ತಾರೆ. ಈ ಬಾರಿ ಅತ್ಯಧಿಕ ಮತಗಳನ್ನು ಡಿ.ಟಿ.ಶ್ರೀನಿವಾಸ್ ಆಯ್ಕೆ ಮಾಡಿದರೇ ನಮ್ಮ ಸರ್ಕಾರ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲು ಸಹಕಾರಿಯಾಗುತ್ತದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಉತ್ತಮ ಆಡಳಿತ ಮೂಲಕ ಜನರಿಗೆ ಕೊಟ್ಟ ಮಾತಿನಂತೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ್ದಾರೆ. ಜನರು ನೆಮ್ಮದಿಯಿಂದ ಇದ್ದು ಬಿಜೆಪಿ ನಾಯಕರು ಮಾತ್ರ ನಿರಾಸೆಯಿಂದ ಸರ್ಕಾರದ ಮೇಲೆ ಹುರುಳಿಲ್ಲದ ಆರೋಪ ಮಾಡಿಕೊಂಡು ಕಾಲಕಳೆಯುತ್ತಿದ್ದು ವಿಧಾನ ಪರಿಷತ್ ಆರು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕ ರಘುಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಅಧ್ಯಕ್ಷ ರವಿಕುಮಾರ್, ಮಾಜಿ ಜಿಪಂ ಸದಸ್ಯರಾದ ಬಾಬುರೆಡ್ಡಿ, ಪ್ರಕಾಶ್ ಮೂರ್ತಿ ಮತ್ತು ಶಿಕ್ಷಕರು ಭಾಗವಹಿಸಿದ್ದರು.