![](https://www.chandravallinews.com/wp-content/uploads/2024/06/ms.jpg)
i
ಡ್ರಾಪ್ ಔಟ್ ಆದ ಮಕ್ಕಳು ಮದುವೆ ಆಗುತ್ತಿವೆಯಾ-ಸುಧಾಕರ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶಾಲೆಯಿಂದ ಹೊರಗುಳಿದ(ಡ್ರಾಪ್ ಔಟ್) ಮಕ್ಕಳು ಎಷ್ಟು, ಶಾಲೆಯಿಂದ ಹೊಗುಳಿದ ಮಕ್ಕಳು ಮುಂದೆ ಏನು ಮಾಡುತ್ತಾರೆ, ಜಿಲ್ಲೆಯಲ್ಲಿರುವ ತಾಲೂಕುಗಳ ಸಂಖ್ಯೆ ಎಷ್ಟು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್ ಅವರನ್ನು
ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದರು. ಭಾರತಿ ಅವರಿಂದ ಸಮರ್ಪಕ ಉತ್ತರ ಬಾರದಿದ್ದಾಗ ತೀವ್ರ ಆಕ್ರೋಶ ಭರಿತರಾದ ಸುಧಾಕರ್, ಭಾರತಿ ಬಣಕಾರ್ ನೀವು ಯಾವುದೇ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡುತ್ತಿಲ್ಲ, ತಾಲೂಕು ಕೇಂದ್ರಗಳಿಗೆ ಭೇಟಿ ನೀಡುತ್ತಿಲ್ಲ, ಅಂಗನವಾಡಿ ಮಕ್ಕಳಿಗೆ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ. ನೀವು ಗಮನ ನೀಡುತ್ತಿಲ್ಲ ಎಂದು ಭಾರತಿ ವಿರುದ್ಧ ಸಚಿವ ಸುಧಾಕರ್ ತರಾಟೆ ತೆಗೆದುಕೊಂಡು ಅಮಾನತು ಆಗುತ್ತಿಯಾ ಹುಷಾರ್ ಆಗಿ ಇರುವಂತೆ ಎಚ್ಚರಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತ್ರೈ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಅವರು, ಜಿಲ್ಲೆಯಲ್ಲಿ ಸಾಕಷ್ಟು ಮಕ್ಕಳು ಡ್ರಾಪ್ ಔಟ್ ಆಗುತ್ತಿದ್ದಾರೆ. ಇದಕ್ಕೆ ಕಾರಣ ಏನು, ಅಪ್ರಾಪ್ತ ಮಕ್ಕಳನ್ನು ಮದುವೆ ಮಾಡಿಕೊಡಲಾಗುತ್ತಿದೆ. ನಿಮ್ಮ ಬಳಿ ಡ್ರಾಪ್ ಔಟ್ ಆದ ಮಕ್ಕಳ ಮಾಹಿತಿ ಇಲ್ಲವಲ್ಲ, ಅಂಗನವಾಡಿ ಕೇಂದ್ರಗಳು ಸಾಕಷ್ಟಿವೆ. ಅವರ ಮೂಲಕ ನೀವು ಸಂಗ್ರಹ ಮಾಡಬಹುದಿತ್ತಲ್ಲವೇ ಏಕೆ ಮಾಹಿತಿ ಸಂಗ್ರಹ ಮಾಡುತ್ತಿಲ್ಲ, ಪೋಷಕರು ಮದುವೆ ಮಾಡಿಕೊಟ್ಟಿದ್ದರೆ ಹೆಣ್ಣಿನ ತಂದೆ ತಾಯಿ, ಕಲ್ಯಾಣ ಮಂಟಪ, ಅಡಿಗೆಯವರು, ಶಾಮಿಯಾನದವರು ಎಲ್ಲರ ಮೇಲೆ ಪೋಕ್ಸೋ ಪ್ರಕರಣದಡಿ ಪ್ರಕರಣ ದಾಖಲು ಮಾಡಿದ್ದರೆ ಮುಂದೆ ಇಂತಹ ಬಾಲ್ಯ ವಿವಾಹಗಳು ಆಗುವುದಿಲ್ಲ ಎಂದು ಸಚಿವ ಸುಧಾಕರ್ ತಿಳಿಸಿದರು.
11 ರಿಂದ 18 ವರ್ಷದ ಒಳಗಿನ 154 ಹೆಣ್ಣು ಮಕ್ಕಳು ಪ್ರಸಕ್ತ ಸಾಲಿನಲ್ಲಿ ಡ್ರಾಪ್ ಔಟ್ ಆಗಿದ್ದಾರೆ. ಇವರಲ್ಲಿ ಬಹುತೇಕರು ಮದುವೆಯಾಗಿರುವ ಸಾಧ್ಯತೆ ಇದೆ. ಇಂತಹ ಬಾಲ್ಯ ವಿವಾಹ ತಡೆಯಲು ಅಗತ್ಯ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಸಚಿವರು ಸೂಚನೆ ನೀಡಿದರು.
ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಕಳಪೆ ಆಹಾರ ಪೂರೈಸುತ್ತಿರುವ ದೂರುಗಳು ಬಂದಿವೆ. ಕಳಪೆ ಆಹಾರ ಬದಲಾಯಿಸಿಕೊಡಿ ಎಂದು ಹೇಳಿ ಬದಲಾಯಿಸಿ ಗುಣಮಟ್ಟದ ಆಹಾರ ನೀಡಿದ್ದೇವೆಂದು ಭಾರತಿ ಅವರು ಉತ್ತರ ನೀಡುತ್ತಿದ್ದಂತೆ ಮತ್ತೊಷ್ಟು ಕೆಂಡವಾದ ಸುಧಾಕರ್ ಆಹಾರ ಬದಲಾಯಿಸಿಕೊಡಲು ನೀವ್ಯಾರು, ಪೂರೈಕೆ ಮಾಡುತ್ತಿರುವ ಏಜೆನ್ಸಿ ಅವರನ್ನು ಬ್ಲಾಕ್ ಲೀಸ್ಚ್ ನಲ್ಲಿಡಬೇಕಿತ್ತು. ಆ ಕೆಲಸ ಏಕೆ ಮಾಡಲಿಲ್ಲ, ಸಮಯಕ್ಕೆ ಸರಿಯಾಗಿ ಅಂಗನವಾಡಿಗಳಿಗೆ ಆಹಾರ ಪೂರೈಕೆ ಆಗುತ್ತಿಲ್ಲ ಎಂಬ ದೂರುಗಳು ಸಾಕಷ್ಟಿವೆ. ಆದರೂ ನೀವು ಗಮನ ನೀಡುತ್ತಿಲ್ಲ ಎಂದು ಉಪ ನಿರ್ದೇಶಕಿ ಭಾರತಿ ಬಣಕಾರ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಇದೇ ಪರಿಸ್ಥಿತಿ ನಿರ್ಮಾಣವಾದರೆ ಅಮಾನತು ಆಗುತ್ತೀರಾ ಭಾರತಿ ಎಂದು ಸುಧಾಕರ್ ಎಚ್ಚರಿಸಿದರು.