![](https://www.chandravallinews.com/wp-content/uploads/2024/06/WhatsApp-Image-2024-06-26-at-8.02.31-PM-1-1024x522.jpeg)
i
ಚಿತ್ರದುರ್ಗ ಮುಖ್ಯ ರಸ್ತೆ ಅಗಲೀಕರಣಕ್ಕೆ ಹೆಚ್ಚಿದ ಒತ್ತಡ..
ತಡೆಯಾಜ್ಞೆ ತೆರವುಗೊಳಿಸಿ ನಿಯಮಾನುಸಾರ ಅಗಲೀಕರಣ ಮಾಡಿ-ಸಚಿವ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಮುಖ್ಯ ರಸ್ತೆ ಅಗಲೀಕರಣಕ್ಕೆ ಇಡೀ ಕೆಡಿಪಿ ಸಭೆಯಲ್ಲಿ ಒತ್ತಡ ಹೆಚ್ಚಿದ್ದು ತಡೆಯಾಜ್ಞೆ ತೆರವುಗೊಳಿಸಿ ಅಗಲೀಕರಣಕ್ಕೆ ಕಾರ್ಯೋನ್ಮುಖರಾಗುವಂತೆ ಜಿಲ್ಲಾಡಳಿತಕ್ಕೆ ಸಚಿವ ಡಿ.ಸುಧಾಕರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತ್ರೈ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಸ್ತೆ ಅಗಲೀಕರಣ ಮಾಡಲು ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.
ಯಾರೋ ಒಂದಿಬ್ಬರು 15-20 ವರ್ಷಗಳಿಂದೆ ರಸ್ತೆ ಅಗಲೀಕರಣಕ್ಕೆ ತಡೆಯಾಜ್ಞೆ ತಂದಿದ್ದಾರೆಂದು ನೆಪ ಹೇಳಿಕೊಂಡು ಕೂರುವುದು ಬೇಡ, ತಡೆಯಾಜ್ಞೆ ತೆರವು ಮಾಡಲು ನರಸಭೆ ಮತ್ತು ಜಿಲ್ಲಾಡಳಿತ ಯಾವ ಪ್ರಯತ್ನ ಮಾಡಿದೆ. ಯಾವುದೇ ವಿಷಯಕ್ಕೂ ತಡೆಯಾಜ್ಞೆ ನೀಡಲಾಗುತ್ತದೆ. ತಡೆಯಾಜ್ಞೆ ನೆಪ ಹೇಳುತ್ತಿರುವುದರಿಂದ ಜಿಲ್ಲಾ ಕೇಂದ್ರದ ಮುಖ್ಯ ರಸ್ತೆಯಲ್ಲಿ ಜನರು, ವಾಹನಗಳು ಓಡಾಡುವಂತಿಲ್ಲ. ನಿರ್ದಿಷ್ಟ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಜನರ ಬದುಕು ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹೆದ್ದಾರಿ ಮಾರ್ಗಸೂಚಿಯಲ್ಲಿ ಯಾವ ಮಾನದಂಡಗಳಿವೆಯೋ ಆ ಪ್ರಕಾರ ಕಾನೂನು ಅಡಿಯಲ್ಲಿ ಪ್ರಮುಖ ರಸ್ತೆ ಅಗಲೀಕರಣ ಮಾಡಬೇಕು. ನಗರದ ಚಳ್ಳಕೆರೆ ಟೋಲ್ ಗೇಟ್ ನಿಂದ ಕನಕ ವೃತ್ತದವರೆಗೆ ಒಂದೇ ಮಾದರಿಯಲ್ಲಿ ರಸ್ತೆ ಅಗಲೀಕರಣ ಮಾಡಬೇಕು ಎಂದು ಸಚಿವ ಸುಧಾಕರ್ ತಾಕೀತು ಮಾಡಿದರು.
ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ ತಾಲೂಕು ಕೇಂದ್ರಗಳಲ್ಲಿ ರಸ್ತೆ ಅಗಲೀಕರಣ ಮಾಡಲಾಗಿದೆ. ಅಲ್ಲಿನವರಿಗೆ ತಡೆಯಾಜ್ಞೆ ಸಮಸ್ಯೆ ಇಲ್ಲ, ಆದರೆ ಜಿಲ್ಲಾ ಕೇಂದ್ರದಲ್ಲಿ ಏಕೆ ತಡೆಯಾಜ್ಞೆ ಸಮಸ್ಯೆ ಎಂದು ಸಚಿವರು ಖಾರವಾಗಿ ಪ್ರಶ್ನಿಸಿದರು.
ಶಾಸಕರಾದ ಎಂ.ಚಂದ್ರಪ್ಪ ನಗರಸಭೆ ಮತ್ತು ಜಿಲ್ಲಾಡಳಿತದ ವಿರುದ್ಧ ಕೆಡ ಕಾರಿ, ಜಿಲ್ಲಾ ಕೇಂದ್ರದ ಸಮಸ್ಯೆ ಅರಿವಿದೆಯಾ, ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದವರೆ ಏಕೆ ಕನಕ ವೃತ್ತದವರೆಗೆ ಯಾರೊಬ್ಬರೂ ಸುಗಮವಾಗಿ ಸಂಚರಿಸುವತ್ತಿಲ್ಲ. ನಗರ ವ್ಯಾಪ್ತಿ ತಡೆಯಬೇಕಾದರೆ ಅರ್ಧ ಗಂಟೆ ಬೇಕು, ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಸೆಂಟರ್ ಪಾಯಿಂಟ್ ನಿಂದ 120 ಅಡಿಗಳಂತೆ ಅಳತೆ ಮಾಡಿ ಮುಲಾಜಿಲ್ಲದೆ ರಸ್ತೆ ಅಗಲೀಕರಣ ಮಾಡಿ. ಒತ್ತುವರಿ ಮಾಡಿದ್ದರೆ ಪರಿಹಾರ ನೀಡಬೇಡಿ, ಒತ್ತುವರಿ ಮಾಡದಿದ್ದರೆ ಅಗತ್ಯ ಪರಿಹಾರ ನೀಡಿ ರಸ್ತೆ ಅಗಲೀಕರಣ ಮಾಡಿ ಎಂದು ತಾಕೀತು ಮಾಡಿದರು. ಇದಕ್ಕೆ ಶಾಸಕ ರಘುಮೂರ್ತಿ ದ್ವನಿಗೂಡಿಸಿದರು.
ನಗರಸಭೆಯವರು ಯಾರದೋ ಮಾತು ಕೇಳಿ ರಸ್ತೆ ಅಗಲೀಕರಣದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದ್ದೀರಿ. 120 ಅಡಿ ಅಗಲ ರಸ್ತೆ ನಿರ್ಮಾಣದ ಸುತ್ತೋಲೆಯನ್ನೇ ಸುಟ್ಟು ಹಾಕಿದ್ದಾರೆ. ಇಂತಹವರಿಂದ ಜಿಲ್ಲೆ ಅಭಿವೃದ್ಧಿ ಆಗುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕೆಂಡಕಾರಿದರು. ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗದಂತೆ ಅಗಲೀಕರಣ ಮಾಡಿಸರ್ಕಾರಿ ವಿಜ್ಞಾನ ಕಾಲೇಜು ಮುಂದಿರುವ ವಿಶಾಲವಾದ ರಸ್ತೆಯಷ್ಟೇ ಕನಕ ವೃತ್ತ, ಮುರುಘಾ ಮಠದ ವರೆಗೂ ರಸ್ತೆ ಅಗಲೀಕರಣ ಮಾಡಬೇಕು ಎಂದು ಸೂಚನೆ ನೀಡಿದರು.