![](https://www.chandravallinews.com/wp-content/uploads/2024/06/WhatsApp-Image-2024-06-27-at-6.22.19-PM-2.jpeg)
i
ಡಿಸಿಸಿ ಬ್ಯಾಂಕ್ ಚುನಾವಣೆ ಗೆಲ್ಲಲು ಬಿಜೆಪಿಯಿಂದ ಹಣದ ಹೊಳೆ
ಚಂದ್ರವಳ್ಳಿ ನ್ಯೂಸ್, ಶಿಕಾರಿಪುರ :
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ನಿಯೋಜಿತ ಅಭ್ಯರ್ಥಿಗಳು ಹಣದ ಹೊಳೆಯನ್ನೇ ಹರಿಸಿ ವಾಮ ಮಾರ್ಗದಲ್ಲಿ ಚುನಾವಣೆ ಗೆಲ್ಲಲು ಹುನ್ನಾರ ನಡೆಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್. ಪಿ. ನಾಗರಾಜ್ ಗೌಡ ಆರೋಪಿಸಿದರು.
ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಬಾರಿ ಚುನಾವಣೆಯಲ್ಲಿಯೂ ಸಂಸದರ ರಾಘವೇಂದ್ರ ಅವರು ಅವರ ಸಂಸ್ಥೆಗಳಲ್ಲಿ , ಸಹಕಾರಿ ಸಂಸ್ಥೆಯಿಂದ ಡೆಲಿಗೇಶನ್ ಪಡೆದ ಮತದಾರರನ್ನು ಒಟ್ಟಿಗೆ ಸೇರಿಸಿ ಹಣದ ಆಮಿಷವನ್ನು ಒಡ್ಡಿದ್ದು ಅಲ್ಲದೆ ಆಮಿಶಕ್ಕೆ ಒಳಗಾಗದವರನ್ನು ಬೆದರಿಸಿ ಮತವನ್ನು ಪಡೆಯಲು ಯಶಸ್ವಿ ಆಗಿದ್ದರು. ಈ ಬಾರಿಯೂ ಸಹ ಸಂಸದ ಬಿ. ವೈ.ರಾಘವೇಂದ್ರ ಹಾಗೂ ಶಾಸಕ ಬಿ. ವೈ. ವಿಜಯೇಂದ್ರ ಅವರು ತಮಗೆ ಸೇರಿದ ಸಂಸ್ಥೆಗಳಲ್ಲಿ ಮತದಾರರನ್ನು ಕೂರಿಸಿ ಬೃಹತ್ ಆಮಿಷವನ್ನು ಒಡ್ಡಿ ವಾಮ ಮಾರ್ಗದಲ್ಲಿ ಮತವನ್ನು ಪಡೆದು ಚುನಾವಣೆ ಗೆಲ್ಲುವ ಹುನ್ನಾರ ನಡೆಸಿದ್ದಾರೆ ಎಂದರು.
ಪ್ರತಿ ಐದು ಮತದಾರರಿಗೆ ಒಬ್ಬ ಬಿಜೆಪಿ ಮುಖಂಡನನ್ನು ಉಸ್ತುವಾರಿಯಾಗಿ ನೇಮಕ ಮಾಡಿ, ಈ ಉಸ್ತುವಾರಿಯಾಗಿ ನೇಮಕವಾದವರು ಪ್ರತಿ ಐದು ಜನರನ್ನು ಕರೆದುಕೊಂಡು ಬಂದು ಜವಾಬ್ದಾರಿಯಿಂದ ಮತ ದಾನ ಮಾಡಿಸುವ ಜವಾಬ್ದಾರಿ ಅವರದ್ದಾಗಿರುತ್ತದೆ ಈ ಹಂತದಲ್ಲಿ ಹಣ ಅಥವಾ ಬೆದರಿಸುವ ತಂತ್ರಗಳು ನಡೆಯಲಿದೆ ಎಂದರು.
ಆಮಿಷ ಹಾಗೂ ಭಯ ಮುಕ್ತವಾಗಿ ನಿರ್ಭೀತವಾಗಿ ಚುನಾವಣೆಗಳು ನಡೆದಾಗ ಮಾತ್ರ ಪ್ರಜಾತಂತ್ರ ವ್ಯವಸ್ಥೆ ಯಲ್ಲಿ ಮತದಾನಕ್ಕೆ ಗೌರವವಿರುತ್ತದೆ ಮತ್ತು ಸಂಸ್ಥೆಗಳು ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗುತ್ತದೆ , ಚುನಾವಣೆಯಲ್ಲಿ ಹಣದ ಹೊಳೆಯನ್ನೇ ಹರಿಸಿ ಗೆದ್ದ ನಿರ್ದೇಶಕರಗಳು ಸಂಸ್ಥೆ ಉದ್ಧಾರಕ್ಕೆ ಯಾವ ರೀತಿ ಕ್ರಮವನ್ನು ಕೈಗೊಳ್ಳಬಹುದು ಎಂದು ಯೋಚಿಸಬೇಕಾಗಿದೆ ಎಂದರು.
ಈ ಕುರಿತು ಮುಕ್ತ ಹಾಗೂ ನ್ಯಾಯಯುತ ಮತದಾನಕ್ಕಾಗಿ ನ್ಯಾಯ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಡಿಸಿಸಿ ಬ್ಯಾಂಕ್ ಚುನಾವಣ ಅಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಶಿವರಾಂ , ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರನಗೌಡ , ತಾಲೂಕು ಕೆಡಿಪಿ ಸದಸ್ಯ ಮಾರವಳ್ಳಿ ಉಮೇಶ್ , ಮುಖಂಡ ಅಶ್ವಿನ್ ಪಾಟೀಲ್ ಮುಂತಾದವರು ಪಾಲ್ಗೊಂಡಿದ್ದರು.