![](https://www.chandravallinews.com/wp-content/uploads/2024/06/WhatsApp-Image-2024-06-26-at-8.02.31-PM-1024x475.jpeg)
i
ಲೋಕೋಪಯೋಗಿ ಇಲಾಖೆ ಇಇ ಮಲ್ಲಿಕಾರ್ಜುನ ಅವರಿಗೆ ಸಚಿವರಿಂದ ತರಾಟೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ವಿವಿಧ ರಸ್ತೆಗಳಲ್ಲಿ ನಿರ್ಮಿಸಲಾಗಿರುವ ಡಿವೈಡರ್ ಗಳಲ್ಲಿ ಯಾವ ಡಿವೈಡರ್ ಗಳು ಅಗತ್ಯವಿಲ್ಲವೋ ಅಂತಹ ಕಡೆಗಳಲ್ಲಿ ಡಿವೈಡರ್ ಗಳನ್ನು ತೆಗೆದು ಹಾಕಲು 6 ತಿಂಗಳ ಹಿಂದೆಯೇ ತೀರ್ಮಾನ ಆಗಿದ್ದರೂ ಇಲ್ಲಿಯ ತನಕ ಏಕೆ ಡಿವೈಡರ್ ತೆರವುಗೊಳಿಸಿಲ್ಲ. ನೀವು ಕಾರ್ಯಪಾಲಕ ಇಂಜಿನಿಯರ್ ಅಲ್ವಾ, ನಿಮ್ಮ ದುಡ್ಡಿನಲ್ಲಿ ರಸ್ತೆ ನಿರ್ಮಾಣ ಮಾಡಿದ್ದೀರಾ, ನಿಮ್ಮ ಉದ್ದೇಶ ಏನು ಹೇಳಿ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ತೀವ್ರ ತರಾಟೆ ತೆಗೆದುಕೊಂಡರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತ್ರೈ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಅವರು, ಚಳ್ಳಕೆರೆ ಟೋಲ್ ಗೇಟ್ ಸಮೀಪ ನಾಲ್ಕು ದಿಕ್ಕುಗಳಿಂದ ವಾಹನಗಳು ಬರುತ್ತವೆ, ಸಾಕಷ್ಟು ಸಂಚಾರದ ಒತ್ತಡ ಇದೆ, ಇಲ್ಲಿ ಒಂದು ವೃತ್ತ ನಿರ್ಮಿಸಲು ಸೂಚಿಸಲಾಗಿತ್ತು. ಏಕೆ ಇಂತಹ ವಿಷಯಗಳು ನಿಮಗೆ ತಿಳಿಯುವುದಿಲ್ಲವೇ, ನಿಮ್ಮ ದುಡ್ಡಲ್ಲಿ ವೃತ್ತ ನಿರ್ಮಿಸಿಕೊಡುತ್ತೀರಾ ಎಂದು ಸಚಿವರು ಇಇ ಮಲ್ಲಿಕಾರ್ಜುನ್ ವಿರುದ್ಧ ಗರಂ ಆದರು.
ಅಗತ್ಯ ಇಲ್ಲದ ಕಡೆ ಏಕ ಮುಖ ಸಂಚಾರ ರಸ್ತೆಯಲ್ಲಿನ ಅವೈಜ್ಞಾನಿಕವಾಗಿರುವ ಡಿವೈಡರ್ ಗಳನ್ನು ತೆರವುಗೊಳಿಸಬೇಕು. ಅಗತ್ಯ ಇರುವ ಕಡೆಗಳಲ್ಲಿ ಡಿವೈಡರ್ ತೆರವುಗೊಳಿಸಿ ಸೂಕ್ತ ವೃತ್ತ ನಿರ್ಮಾಣ ಮಾಡಿ ಟ್ರಾಫಿಕ್ ಸಮಸ್ಯೆ ತಪ್ಪಿಸಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಇಇಗೆ ಸೂಚನೆ ನೀಡಿದರು.ಈ ಕಾರ್ಯ ನೀವು ಮಾಡದಿದ್ದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಎಚ್ಚರಿಕೆ ನೀಡಿದರು.
ನಗರ ಅಭಿವೃದ್ದಿ ಮಾಡುವ ಜವಾಬ್ದಾರಿ ಅಧಿಕಾರಿಗಳ ಮೇಲಿದ್ದು ಯಾವುದೇ ರಸ್ತೆ ಮಾಡಬೇಕಾದರೆ ಮೊದಲು ರೂಪರೇಷೆ ತಯಾರಿಸಿಕೊಳ್ಳಬೇಕು. ಆದರೆ ಜಿಲ್ಲಾ ಕೇಂದ್ರದಲ್ಲಿ ಇದ್ಯಾವುದನ್ನು ಮಾಡದೆ, ಕಾನೂನಿನ ಸುತ್ತೋಲೆಗಳನ್ನು ಗಾಳಿಗೆ ತೂರಿ ಮನಬಂದಂತೆ ಡಿವೈಡರ್, ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ಮಲ್ಲಿಕಾರ್ಜುನ್ ವಿರುದ್ಧ ಸಚಿವರು ಕಿಡಿಕಾರಿದರು.ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಮಾತನಾಡಿ ರಸ್ತೆ ಮಧ್ಯ ಭಾಗದಲ್ಲಿ ಹಾಕಲಾಗಿರುವ ಅವೈಜ್ಞಾನಿಕವಾದ ಡಿವೈಡರ್ ಗಳನ್ನು ತೆರವುಗೊಳಿಸಿ ಎಂದು ಹೇಳಿ ಸಾಕಷ್ಟು ಸಮಯ ನೀಡಿದ್ದರೂ ಮಾಡಿಲ್ಲ, ಒಂದು ಕಡೆ ಮಾತ್ರ ಡಿವೈಡರ್ ಹೊಡೆದು ಹಲವೆಡೆ ಹಾಗೆಯೇ ಬಿಟ್ಟಿರುವ ಉದ್ದೇಶ ಹೇಳಿ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್ ವಿರುದ್ಧ ತೀವ್ರ ತರಾಟೆಗೆ ತೆಗೆದುಕೊಂಡರು.
ತುಂಗಭದ್ರಾ ಹಿನ್ನೀರು-ಶಾಸಕ ಟಿ.ರಘುಮೂರ್ತಿ ಮಾತನಾಡಿ ಚಳ್ಳಕೆರೆ, ಕೂಡ್ಲಿಗಿ, ಮೊಳಕಾಲ್ಮೂರು, ಪಾವಗಡ, ತುರುವನೂರು ಹೋಬಳಿಗೆ ತುಂಗಭದ್ರಾ ಹಿನ್ನೀರು ಯೋಜನೆಯಲ್ಲಿ ನೀರು ಪೂರೈಕೆ ಮಾಡುವ ಕಾಮಗಾರಿ ವಿಳಂಬ ಆಗುತ್ತಿದೆ, ಕಾಮಗಾರಿ ಪೂರ್ಣಗೊಂಡಿಲ್ಲದಿದ್ದರೂ ಪೂರ್ಣಗೊಂಡಿದೆ ಎಂದು ವರದಿ ನೀಡಲಾಗಿದೆ, ನೀವು ಸ್ಥಳ ಪರಿಶೀಲನೆ ಮಾಡಿದ್ದೀರಾ, ಆ ರೀತಿಯ ವರದಿಯನ್ನು ಏಕೆ ನೀಡಿದ್ದೀರಿ ಎಂದು ಶಾಸಕ ರಘುಮೂರ್ತಿ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಪಾಟೀಲ್ ವಿರುದ್ಧ ಹರಿಹಾಯ್ದರು.
ಚಳ್ಳಕೆರೆ ಮೂಲಕ ಪಾವಗಡಕ್ಕೆ ನೀರು ಹೋಗಬೇಕಲ್ಲವೇ, ಹಾಗಾದರೆ ಪಾವಗಡದವರಿಗೆ ಎಲ್ಲಿಂದ ನೀರು ಪೂರೈಕೆ ಮಾಡಲಾಗಿದೆ. ಪೈಪ್ ಲೈನ್ ಟ್ರಯಲ್ ಮಾಡಿದ್ದೀರಾ, ಏನು ಮಾಡದೆ ಹೇಗೆ ನೀರು ಪೂರೈಕೆ ಆಗುತ್ತದೆ ಎಂದು ರಘುಮೂರ್ತಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕಿದರು.
ಜಲ ಜೀವನ್ ಮಿಷನ್ ಕಳಪೆ ಕಾಮಗಾರಿ- ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಗ್ರಾಮೀಣ ಜನವತಿಗಳಿಗೆ ನೀರು ಕೊಡುವ ಯಾವುದೇ ಗ್ಯಾರಂಟಿ ಇಲ್ಲ. ಏಕೆಂದರೆ ಜಲ ಜೀವನ್ ಮಿಷನ್ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ. ಪೈಪ್ ಗಳಲ್ಲಿ ನೀರು ಬರುವ ಗ್ಯಾರಂಟಿಯೇ ಇಲ್ಲ ಎಂದು ಶಾಸಕ ರಘುಮೂರ್ತಿ ತೀವ್ರ ತರಾಟೆ ತೆಗೆದುಕೊಂಡರು.
ಜಲ ಜೀವನ್ ಮಿಷನ್ ಯೋಜನೆ ಅಡಿ ಪೈಪ್ ಲೈನ್ ಅಳವಡಿಕೆ ಮಾಡಲು ಸಿಸಿ ರಸ್ತೆ ಸೇರಿದಂತೆ ಇತರೆ ರಸ್ತೆಗಳನ್ನು ಅಗೆಯಲಾಗಿದೆ. ಆದರೆ ಎಲ್ಲೂ ಅಗೆದ ರಸ್ತೆಗಳನ್ನು ದುರಸ್ತಿ ಮಾಡಿಲ್ಲ. ಇದು ಕೇವಲ ತುರುವನೂರು, ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿನ ಅವ್ಯವಸ್ಥೆಯಲ್ಲ, ಇಡೀ ಜಿಲ್ಲೆ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲೂ ಅಗೆದ ರಸ್ತೆ ದುರಸ್ತಿ ಮಾಡಲಾಗಿಲ್ಲ ಎಂದು ರಘುಮೂರ್ತಿ ತೀವ್ರ ತರಾಟೆ ತೆಗೆದುಕೊಂಡರು.
ಸಚಿವ ಡಿ.ಸುಧಾಕರ್, ಶಾಸಕರಾದ ಬಿ.ಜಿ.ಗೋವಿಂದಪ್ಪ, ಎಂ.ಚಂದ್ರಪ್ಪ, ಎನ್.ವೈ.ಗೋಪಾಲಕೃಷ್ಣ, ವಿಧಾನ ಪರಿಷತ್ ಶಾಸಕರಾದ ಕೆ.ಎಸ್.ನವೀನ್, ಡಿ.ಟಿ.ಶ್ರೀನಿವಾಸ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಪಂ ಸಿಇಓ ಸೋಮಶೇಖರ್, ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಸೇರಿದಂತೆ ಮತ್ತಿತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.