![](https://www.chandravallinews.com/wp-content/uploads/2024/06/IMG-20240627-WA0120-1024x576.jpg)
i
ಒತ್ತುವರಿ ಮಾಡಿದ್ದ ಸರ್ಕಾರಿ ಜಾಗ ತೆರವು
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಗೋಪಾಲಗೌಡ ಬಡಾವಣೆಯಲ್ಲಿ ಗೋಪಾಳ ಸರ್ವೆ ನಂ ೩೧/೩ ರಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಜಾಗವನ್ನು ಅಕ್ರಮವಾಗಿ ಅಕ್ರಮಿಸಿ ತಂತಿ ಬೇಲಿ ಹಾಕಿದ ಜಾಗವನ್ನು ಗುರುವಾರ ಪಾಲಿಕೆ ಅಧಿಕಾರಿಗಳ ತಂಡ ಸ್ಥಳಿಯರ ದೂರಿನ ಹಿನ್ನೆಲೆಯಲ್ಲಿ ಜೆಸಿಬಿ ತಂದು ತೆರವುಗೊಳಿಸಿದರು.
ಪಾಲಿಕೆಯ ಈ ಜಾಗ ಸುಮಾರು ೧೫ ಎಕರೆಗೂ ಹೆಚ್ಚು ಇದ್ದು, ಕೆಲವು ಜಾಗವನ್ನು ಮಂಡಕ್ಕಿ ಬಟ್ಟಿಯವರಿಗೆ ವಿತರಣೆ ಮಾಡಲಾಗಿತ್ತು. ಉಳಿದ ಜಾಗ ಪಾಲಿಕೆಯ ಕಸದ ವಾಹನಗಳನ್ನು ನಿಲ್ಲಿಸಲು ಕಾಂಪೌಂಡ್ ಹಾಕಿ ನಿರ್ಮಾಣ ಮಾಡಲಾಗಿದೆ. ಕಾಂಪೌಂಡ್ ಪಕ್ಕದ ಜಾಗಕ್ಕೆ ಪಾಲಿಕೆಯವರು ಬೇಲಿ ಹಾಕಿ ಬಂದೋಬಸ್ತ್ ಮಾಡದೇ ಇರುವ ಕಾರಣ ಕೆಲವರು ಬೇಲಿ ಹಾಕಿ ನಕಲಿ ಖಾತೆ ಮಾಡಿಸಿಕೊಂಡು ಮಾರಾಟ ಮಾಡಲು ಯತ್ನಿಸಿ ದಿಢೀರ್ ಬೇಲಿ ಹಾಕಿದ್ದರು.
ಈ ಜಾಗ ಕೋಟಿಗೂ ಹೆಚ್ಚು ಬೆಲೆ ಬಾಳುವುದರಿಂದ ಕೆಲವು ಭೂಗಳ್ಳ ರಾಜಕಾರಣಿಗಳ ಕಣ್ಣು ಅದರ ಮೇಲೆ ಬಿದ್ದು ತಮ್ಮ ಹೆಸರಿಗೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು.
ಸ್ಥಳಿಯ ಮತ್ತು ಅಕ್ಕಪಕ್ಕದ ನಿವಾಸಿಗಳು ಇದನ್ನು ನೋಡಿ ಜಿಲ್ಲಾಧಿಕಾರಿಗೆ ಮತ್ತು ಜಿಲ್ಲಾ ರಕ್ಷಣಾಧಿಕಾರಿಗೆ ದೂರು ನೀಡಿ ಪಾಲಿಕೆ ಜಾಗವನ್ನು ಆಕ್ರಮಿಸಿದ ಜಾಗವನ್ನು ಕೂಡಲೇ ತೆರವುಗೊಳಿಸಲು ಒತ್ತಾಯಿಸಿದ್ದರು. ಜಿಲ್ಲಾಧಿಕಾರಿಗೆ ಬುಧವಾರ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳ ತಂಡ ಇಂಜಿನಿಯರ್ ಜಗದೀಶ್, ವೇಣುಗೋಪಾಲ್, ಪಾಲಿಕೆ ಸರ್ವೆಯರ್ ಹಾಗೂ ರೆವಿನ್ಯೂ ಆಫೀಸರ್ ವಿಜಯಲಕ್ಷ್ಮಿ ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರ ನಿರ್ದೆಶನದ ಮೇರೆಗೆ ಜೆಸಿಬಿ ತಂದು ಜಾಗವನ್ನು ಕ್ಲಿಯರ್ ಮಾಡಿದ್ದಾರೆ. ಬೇಲಿಕಂಬಗಳನ್ನು ಕಿತ್ತು ಸಾಗಿಸಿದ್ದಾರೆ.