![](https://www.chandravallinews.com/wp-content/uploads/2024/06/Poli-1.jpeg)
i
ಯುವಕನನ್ನು ಹೆದರಿಸಿ ಹಣ ಹಾಕಿಸಿಕೊಂಡಿದ್ದ ಮೂವರು ಸೆರೆ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ನಾವು ಚಿಕ್ಕಮಗಳೂರು ಪೊಲೀಸರು, ನೀವು ಮಹಿಳೆಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದು, ಅವರು ದೂರು ನೀಡಿದ್ದಾರೆ ನೀವು ಠಾಣೆಗೆ ಬರುವಂತೆ ಹೇಳಿ ಹೆದರಿಸಿ, ಯುವಕನಿಂದ ಪೋನ್ ಪೇ ಮುಖಾಂತರ ಒಟ್ಟು ೨೩ ಸಾವಿರ ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ ಬೆಂಗಳೂರಿನ ಮೂವರು ಶಿವಮೊಗ್ಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬನಶಂಕರಿಯ ಇಬ್ರಾಹಿಂ ಬಾದಷಾ ಅಲಿಯಾಸ್ ರಿಷಿಕ್ ಸ್ಯಾಮ್ ಅಲಿಯಾಸ್ ರಿಷಿಕ್ (೨೬) ಕುಮಾರಸ್ವಾಮಿ ಲೇ ಔಟ್ನ ಜನಾರ್ದನ (೨೧) ಮತ್ತು ಹನುಮಂತ (೩೮) ಬಂಧಿತರು.
ನಗರದ ಹೊರವಲಯದ ಕೋಟೆಗಂಗೂರು ಗ್ರಾಮದ ಪ್ರದೀಪ್ (೨೩) ಅವರ ಮೊಬೈಲ್ ನಂಬರ್ಗೆ ಈ ವ್ಯಕ್ತಿಗಳು ಕರೆ ಮಾಡಿ ಹೆದರಿಸಿ ಹಣ ವರ್ಗಾಯಿಸಿಕೊಂಡಿದ್ದರು. ಈ ಸಂಬಂಧ ಪ್ರದೀಪ್ ನೀಡಿದ ದೂರಿನ ಮೇರೆಗೆ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆ ನಡೆಸಿದಾಗ ಕರೆಗಳು ಬೆಂಗಳೂರಿನಿಂದ ಬಂದಿದ್ದೆಂದು ಗೊತ್ತಾಗಿತ್ತು. ಆರೋಪಿತರ ಪತ್ತೆಗಾಗಿ ಎಸ್ ಪಿ ಮಿಥುನ್ಕುಮಾರ್ ಅವರು ಜಯನಗರ ಸಿಪಿಐ ಸಿದ್ದೇಗೌಡ ಹೆಚ್.ಎಂ, ಸಿಇಎನ್ ಎಸ್ಐ ಬಸವರಾಜ ಬಿರಾದಾರ ನೇತೃತ್ವದಲ್ಲಿ ಎಎಸ್ಐ ವಿರೂಪಾಕ್ಷಪ್ಪ , ಹೆಚ್.ಸಿ ಅವಿನಾಶ್, ಧರ್ಮಾ ನಾಯ್ಕ, ಪಿಸಿ ಸಚಿನ್ ಒಳಗೊಂಡ ತನಿಖಾ ತಂಡವನ್ನು ರಚಿಸಿ ಬೆಂಗಳೂರಿಗೆ ಕಳುಹಿಸಿದ್ದರು.
ತಂಡವು ಆರೋಪಿತರಾದ ಇವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ರೂ ೧೫೦೦ ನಗದು ಹಣ ಹಾಗೂ ಮೊಬೈಲ್ ಫೋನ್ನ್ನು ವಶಪಡಿಸಿಕೊಂಡಿದ್ದಾರೆ.
ತನಿಖಾ ತಂಡದ ಉತ್ತಮ ಕಾರ್ಯವನ್ನು ಎಸ್ ಪಿ ಪ್ರಶಂಸಿಸಿ ಅಭಿನಂದಿಸಿದ್ದಾರೆ.