![](https://www.chandravallinews.com/wp-content/uploads/2024/06/WhatsApp-Image-2024-06-30-at-6.57.00-AM-1.jpeg)
i
ಸ್ಪರ್ಧಾತ್ಮಕ ಪರೀಕ್ಷೆ ಬರೆದು ಜ್ಞಾನ ಗಳಿಸಿ: ಎಸ್ಪಿ ಮಿಥುನ್ಕುಮಾರ್
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಜೀವನ ನಡೆಸಲು ಪ್ರಾಪಂಚಿಕ ಜ್ಞಾನ ಮುಖ್ಯವಾಗಿದ್ದು, ಒಂದು ಬಾರಿಯಾದರೂ ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ದೇ ಆದರೆ ಸಾಮಾನ್ಯ ಜ್ಞಾನವು ನಿಮಗೆ ಜೀವನದುದ್ದಕ್ಕೂ ಉಪಯೋಗಕ್ಕೆ ಬರಲಿದೆ. ಕೇಂದ್ರ ಮತ್ತು ರಾಜ್ಯ ಲೋಕ ಸೇವ ಆಯೋಗವು ನಡೆಸುವ ಪರೀಕ್ಷೆಯಲ್ಲಿ ಕೃಷಿ ವಿಜ್ಞಾನ ವಿಧ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಜಿ ಕೆ ಮಿಥುನ್ಕುಮಾರ್ ಹೇಳಿದರು.
ಅವರು ಸಾಗರ ತಾಲೂಕು ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನದ ವಿಶ್ವವಿದ್ಯಾಲಯದಲ್ಲಿ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಪ್ರಚಲಿತ ವಿದ್ಯಮಾನಗಳು, ಸರ್ಕಾರದ ಆಡಳಿತ ವೈಖರಿ, ಸುತ್ತೋಲೆ, ಆದೇಶಗಳ ಬಗ್ಗೆ, ಆರ್ಥಿಕತೆ, ರಾಜಕೀಯ, ಭೌಗೋಳಿಕ ವಿಷಯದಲ್ಲಿ ಜ್ಞಾನ ಪಡೆದುಕೊಳ್ಳಬೇಕು. ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇದರಿಂದ ಸುಲಭವಾಗಿ ಯಶಸ್ಸು ಕಾಣಲು ಸಾಧ್ಯವಿದೆ ಎಂದ ಅವರು, ಸ್ಪರ್ಧಾತ್ಮಕ ಪರೀಕ್ಷೆಯನ್ನು ಹೆಚ್ಚಿನ ಸಂಖ್ಯೆಯ ಪರೀಕ್ಷಾರ್ಥಿಗಳು ತೆಗೆದುಕೊಳ್ಳುತ್ತಾರಾದರೂ ಸಂಪೂರ್ಣವಾಗಿ ತಯಾರಿ ನಡೆಸಿದವರಿಗೆ ಮಾತ್ರ ಯಶಸ್ಸು ದೊರೆಯಲಿದೆ. ಸತತ ಪ್ರಯತ್ನಕ್ಕೆ ಖಚಿತವಾಗಿ ಫಲ ದೊರೆಯುತ್ತದೆ ಎಂದರು.
ಪ್ರಸ್ತುತ ಆನ್ ಲೈನ್ ಮುಖಾಂತರ ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವಭಾವಿ ತಯಾರಿ ನಡೆಸಲು ಸಹಾಯವಾಗುವ ಮಾಹಿತಿ ಕೂಡ ಸುಲಭವಾಗಿ ದೊರೆಯಲಿದೆ. ಇದನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಕಾಣಬೇಕೆಂದು ಕರೆ ನೀಡಿದರು.