![](https://www.chandravallinews.com/wp-content/uploads/2024/07/Cong-1024x1024.jpg)
i
ಅತಿ ಹೆಚ್ಚು ಸಂವಿಧಾನ ತಿದ್ದುಪಡಿ ಮಾಡಿದ್ದು ಕಾಂಗ್ರೆಸ್: ಬೊಮ್ಮಾಯಿ
ಚಂದ್ರವಳ್ಳಿ ನ್ಯೂಸ್, ಗದಗ :
ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿಗಾಗಿ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದ್ದಾರೆ ಎಲ್ಲರನ್ನೂ ಒಂದುಗೂಡಿಸಿ ಮುನ್ನಡೆಯುವುದು ಸುಲಭವಾದ ಮಾತಲ್ಲ ಆದರೆ, ನರೇಂದ್ರ ಮೋದಿ ಅವರು ದೃಢಸಂಕಲ್ಪದೊಂದಿಗೆ ದಿಟ್ಟ ಹೆಜ್ಜೆನಿಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ರವಿವಾರ ಭಾರತೀಯ ಜನತಾ ಪಕ್ಷದ ವತಿಯಿಂದ ಗದಗ ಮತಕ್ಷೇತ್ರದ ಜನತೆಗೆ ಹಾಗೂ ಕಾರ್ಯಕರ್ತರಿಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗದಗ ವಿಧಾನಸಭಾ ಕ್ಷೇತ್ರದಿಂದ 16000 ಮತಗಳ ಲೀಡ್ ನೀಡಿ ನನನ್ನು ಸಂಸದನನ್ನಾಗಿಸಿದ ಗದಗ ಜಿಲ್ಲೆಯ ಸಮಸ್ಥ ತಾಯಂದಿರರಿಗೆ, ರೈತರಿಗೆ, ಅಣ್ಣ ತಮ್ಮಂದಿರರಿಗೆ, ಅಕ್ಕ ತಂಗಿಯರಿಗೆ ಯುವಕ ಯುವಕರಿಗೆ ಹಾಗೂ ಮಾದ್ಯಮ ಮಿತ್ರರಿಗೆ ನಮ್ಮ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನೀವು ನೀಡಿದ ಅಮೂಲ್ಯವಾದ ಮತಕ್ಕೆ ಗೌರವ ತರುವ ಕೆಲಸ ಮಾಡುತ್ತೇನೆ ಭರವಸೆ ನೀಡಿದರು.
ಈ ಬಾರಿ ನಡೆದಿರುವ ಚುನಾವಣೆ ದೇಶದ ಅಭಿವೃದ್ಧಿಗಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿಗಾಗಿ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದ್ದಾರೆ ಎಲ್ಲರನ್ನೂ ಒಂದುಗೂಡಿಸಿ ಮುನ್ನಡೆಯುವುದು ಸುಲಭವಾದ ಮಾತಲ್ಲ ಆದರೆ, ನರೇಂದ್ರ ಮೋದಿ ಅವರು ದೃಢಸಂಕಲ್ಪದೊಂದಿಗೆ ದಿಟ್ಟ ಹೆಜ್ಜೆನಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷವು 2014, 2019, 2024 ರ ಲೋಕಸಭೆ ಚುನಾವಣೆ ಸೇರಿದಂತೆ ಮೂರೂ ಚುನಾವಣೆಯಲ್ಲಿ ಗೆಲುವಿನ ಸ್ಥಾನ ಕೂಡಿಸಿದರೆ ಈ ಬಾರಿ ಬಿಜೆಪಿ ಗೆದ್ದಿರುವ ಸ್ಥಾನಗಳಿಗೂ ಸಮನಾಗಿಲ್ಲ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಸ್ಥಾನಗಳನ್ನು ಕಡಿಮೆ ಮಾಡಿಕೊಳ್ಳುತ್ತಾ ಬರುತ್ತಿದೆ. ಸದ್ಯದ ಅವರ ಪರಿಸ್ಥಿತಿ ಹೇಗಿದೆ ಎಂದರೆ. ಪಕ್ಕದ ಮನೆಯವರಿಗೆ ಮಗು ಹುಟ್ಟಿದರೆ ಇವರು ಸಿಹಿ ಹಂಚಿ ಸಂತಸ ಪಡುತ್ತಿದ್ದಾರೆ ಎಂದು ವ್ಯಂಗವಾಡಿದರು.
ಅತಿ ಹೆಚ್ಚು ಸಂವಿಧಾನ ತಿದ್ದುಪಡಿ ಮಾಡಿದ್ದು ಕಾಂಗ್ರೆಸ್
ಭಾರತದ ಸಂವಿಧಾನವನ್ನು ಅತಿ ಹೆಚ್ಚು ಬಾರಿ ತಿದ್ದುಪಡಿ ಮಾಡಿರುವುದು ಕಾಂಗ್ರೆಸ ಪಕ್ಷವಾಗಿದೆ, ವಿಚ್ಚೇಧನದ ನಂತರ ಒಬ್ಬ ಬಡ ಮುಸ್ಲಿಂ ಮಹಿಳೆಯರಿಗೆ ಸಿಗುವ ಜೀವನಾಂಶ ನೀಡುವ ಕೋರ್ಟ್ ಆದೇಶವನ್ನು ರದ್ದು ಮಾಡಲು ದೇಶದ ಸಂವಿಧಾನವನ್ನೇ ತಿದ್ದಿ ನ್ಯಾಯಾಲಯದ ಆದೇಶವನ್ನೆ ತಿರುಚಿದ್ದು ಕಾಂಗ್ರೆಸ್, ರಾಜ್ಯದಲ್ಲಿ ಮೀಸಲಾತಿಯನ್ನು ಹೆಚ್ಚಿಸಿರುವುದು ಬಿಜೆಪಿ ಪಕ್ಷ ಈ ಪಕ್ಷ ಹೇಗೆ ಮೀಸಲಾತಿ ಕಸಿದುಕೊಳ್ಳಲು ಸಾಧ್ಯ, ಸಂವಿದಾನ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಕರ್ನಾಟಕದಲ್ಲಿ ಎಸ್ ಸಿ, ಎಸ್ ಟಿ ಮೀಸಲಾತಿಯನ್ನು ಬಿಜೆಪಿ ಹೆಚ್ಚಿಸಿ ಆ ವರ್ಗದ ಜನರ ಹಿತ ಕಾಪಾಡಿದೆˌ ಈಗ ಬಂದಿರುವ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಘೋಷಣೆ ಮಾಡಿ ಬೆಲೆ ಏರಿಕೆ ಮಾಡುವ ಮೂಲಕ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಿಂದ ಕಸಿದುಕೊಳ್ಳುತ್ತಿದೆ. ಪೆಟ್ರೋಲ್, ಡಿಸೇಲ್, ಬಟ್ಟೆ, ದಿನಸಿ ವಸ್ತುಗಳು ಸೇರಿದಂತೆ ಎಲ್ಲವನ್ನು ಹೆಚ್ಚಿಸಿ ಬಡವರ ಮೇಲೆ ಹೊರೆ ಹಾಕಿದ್ದಾರೆ. ರಾಜ್ಯದಲ್ಲಿ ಬೀಕರ ಬರಗಾಲ ಇದ್ದರೂ ರೈತರಿಗೆ ಪರಿಹಾರ ನೀಡಲಿಲ್ಲ. ಇದರಿಂದ ರೈತರ ಆಕ್ರೋಶಕ್ಕೆ ರಾಜ್ಯ ಸರ್ಕಾರ ಗುರಿಯಾಗಬೇಕಾಯಿತು. ಹಿಂದೆ ಯಡಿಯೂರಪ್ಪ ಸಿಎಂ ಇದ್ದಾಗ ಸೂರು ಕಳೆದುಕೊಂಡವರಿಗೆ ಐದು ಲಕ್ಷ ರೂ. ಪರಿಹಾರ ನೀಡಿದ್ದರು ಎಂದು ಹೇಳಿದರು.
ನೀರಿನ ಸಮಸ್ಯೆ ಪರಹಾರಕ್ಕೆ ಕ್ರಮ
ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಸವಾಲಾಗಿ ತೆಗೆದುಕೊಂಡಿದ್ದು ಮುಂಬರುವ ದಿನಗಳಲ್ಲಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇನೆ ಮತ್ತು ಗದಗ ನಗರವನ್ನು ಔದ್ಯೋಗಿಕ ನಗರವನ್ನು ಮಾಡಲು ಕ್ರಮ ಕೈಗೊಳ್ಳುತ್ತೇನೆ ಮುಂದಿನ ದಿನಗಳಲ್ಲಿ ಕೈಗಾರಿಕಾಗಳನ್ನು ತರಲು ಶ್ರಮಿಸುವೇ ಎಂದು ಹೇಳಿದರು.
ಕಾಂಗ್ರೆಸ್ ನಲ್ಲಿ ಅಧಿಕಾರ ದಾಹ ಬಿಟ್ಟರೆ ಅಭಿವೃದ್ಧಿ ಶೂನ್ಯವಾಗಿದೆ ಯಾರು ಸಿಎಂ ಆಗಬೇಕು ಎಷ್ಟು ದಿನ ಆಗಬೇಕು ಎಂಬ ಚರ್ಚೆ ಜೋರಾಗಿದೆ. ಸರಕಾರದ ವಿರುದ್ಧ ಜನಾಂದೋಲನವನ್ನು ಶೀಘ್ರದಲ್ಲಿ ಆರಂಭವಾಗಲಿದೆ ಅಲ್ಲದೆ ಬರುವ ವರ್ಷದಲ್ಲಿ ವಿಧಾನಸಭೆ ಚುನಾವಣೆ ಬರಲಿದ್ದು ಮತ್ತೆ ಬಿಜೆಪಿ ಬಾವುಟ ಹಾರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನರಗುಂದ ಶಾಸಕ ಸಿ.ಸಿ. ಪಾಟೀಲ ಅವರು ಮಾತನಾಡಿ, ಈ ಚುನಾವಣೆ ನಮಗೆ ನೋವು ನಲಿವು ಎರಡನ್ನು ನೀಡಿದೆ ಬಸವರಾಜ ಬೊಮ್ಮಾಯಿ ಅವರ ಗೆಲುವು ನಲಿವನ್ನು ನೀಡಿದರೆ, ಕೇಂದ್ರದಲ್ಲಿ ನಿರೀಕ್ಷಿಸಿದಷ್ಟು ಸ್ಥಾನಗಳು ಬರೆದಿರುವುದು ನೋವು ತಂದಿದೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗದಗ ಕ್ಷೇತ್ರದ ಮತದಾರರು 16000 ಹೆಚ್ಚು ಅಂತರದ ಮತಗಳನ್ನು ನೀಡಿದ್ದಾರೆ ಗ್ರಾಮೀಣದ ಭಾಗದಲ್ಲಿಯೂ ಉತ್ತಮ ಮತಗಳನ್ನು ಪಡೆದಿದ್ದೇವೆ. ಹಿಂದಿನ ಚುನಾವಣೆಯಲ್ಲಿ ಆದ ತಪ್ಪುಗಳಿಂದಾದ ಅನುಭವದಿಂದ ಇಂತಹ ತಪ್ಪುಗಳು ಮರುಕಳಿಸದಂತೆ ನಿಗಾವಹಿಸಿ ಚುನಾವಣೆಯನ್ನು ಎದುರಿಸಿದ್ದರಿಂದ ಗೆಲುವು ಸಾಧ್ಯವಾಯಿತು. ಅಲ್ಲದೆ ರಾಜ್ಯದ ಇಂಚಿಂಚು ಮಾಹಿತಿಯನ್ನು ಹಿರಿಯರೊಂದಿಗೆ ಬೆರೆತು ಅವರ ಅನುಭವವನ್ನು ಒಂದುಗೂಡಿಸಿ ಕಾರ್ಯಕರ್ತರನ್ನು ಸಂಘಟಿಸಿ ಚುನಾವಣೆ ಎದುರಿಸಿದ್ದು ಫಲ ನೀಡಿದೆ. ಕಳಸ ಬಂಡೂರಿ ಹೋರಾಟದಲ್ಲಿ ಬಸವರಾಜ ಬೊಮ್ಮಾಯಿ ಅವರು ಪಾಲು ಇರುವುದರಿಂದ ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಕಾಂತಿಲಾಲ್ ಬನಸಾಲಿ, ಎಂ. ಎಸ್. ಕರೇಗೌಡರ, ರವಿ ದಂಡಿನ, ಶೇಖರ ಸಜ್ಜನರ, ಶಂಕ್ರಣ್ಣ ಇಂಡಿ, ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ನಿರ್ಮಲ ಕೊಳ್ಳಿ, ಮೋಹನ ಮಾಳಶೆಟ್ಟಿ, ಸಿದ್ದಣ್ಣ ಪಲ್ಲೆದ, ಸಂತೋಷ ಅಕ್ಕಿ, ಅನಿಲ ಅಬ್ಬಿಗೇರಿ, ಎಲ್ಲ ಮಂಡಳಗಳ ಅಧ್ಯಕ್ಷರು-ಕಾರ್ಯಕರ್ತರು, ಮಹಿಳಾ ಮೋರ್ಚಾ ಸದಸ್ಯರು, ಹಿರಿಯರು, ಸಮಾಜ ಪ್ರಮುಖರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.