![](https://www.chandravallinews.com/wp-content/uploads/2024/06/WhatsApp-Image-2024-06-30-at-10.41.13-PM-1024x779.jpeg)
i
ಶಿಕ್ಷಕರ ವಲಯ ವರ್ಗಾವಣೆ ಮಾಡಲು ಆಗ್ರಹಿಸಿದ ಶಿಕ್ಷಕರು..
ಚಂದ್ರವಳ್ಳಿ ನ್ಯೂಸ್, ಸೊರಬ:
ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ರಾಜ್ಯ ಸಂಘದ ಕಾರ್ಯಕಾರಣಿ ಸಭೆ ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಯಿತು.
ಸಭೆಯಲ್ಲಿ ವಲಯ ವರ್ಗಾವಣೆಯನ್ನು ಪ್ರಮುಖವಾಗಿ ಚರ್ಚಿಸಿ ನಂತರ ಶಿಕ್ಷಣ ಸಚಿವ ಮಧು ಬಂಗಾರಪ್ಪ ನವರಿಗೆ ಮನವಿಸಲ್ಲಿಸಿದರು.
ಕರ್ನಾಟಕ ಶಿಕ್ಷಕರ ವರ್ಗಾವಣೆ ಮತ್ತು ನಿಯಂತ್ರಣ ಕಾಯ್ದೆ 2007 ತಿದ್ದುಪಡಿ ಅಧಿನಿಯಮ 2022 ಒಂದು ವರ್ಷ ಹೆಚ್ಚುವರಿ ವರ್ಗಾವಣೆ ನಂತರದ ವರ್ಷ ವಲಯ ವರ್ಗಾವಣೆ ನಡೆಸುವುದು ಎಂದು ಹೇಳುತ್ತದೆ. ಕಳೆದ ವರ್ಷ ಹೆಚ್ಚುವರಿ ವರ್ಗಾವಣೆ ಮಾಡಿರುವುದರಿಂದ ಈ ವರ್ಷ ವಲಯ ವರ್ಗಾವಣೆ ಮಾಡಬೇಕು ಆದರೆ ಈ ವರ್ಷದ ವರ್ಗಾವಣೆಯಲ್ಲಿ ವಲಯ ವರ್ಗಾವಣೆ ಕೈಬಿಟ್ಟಿರುವುದು ದುರದೃಷ್ಟಕರ.
ಕಳೆದ ವರ್ಷ ಹೆಚ್ಚುವರಿ ವರ್ಗಾವಣೆಯೂ ಕೂಡ ಶೈಕ್ಷಣಿಕ ವರ್ಷದ ಮಧ್ಯದಲ್ಲಿಯೇ ನಿಯಮಾನುಸಾರ ಮಾಡಿದ ಅಧಿಕಾರಿಗಳು ಈ ವರ್ಷ ವಲಯ ವರ್ಗಾವಣೆಗೆ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಬೇಡ ಎಂದು ಹೇಳುತ್ತಿರುವುದು ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರ ನೋವಿಗೆ ಕಾರಣವಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮನೆ ಬಾಡಿಗೆ ಭತ್ಯೆ ಕಡಿಮೆ ಹಾಗೂ ಗ್ರಾಮೀಣ ಪರಿಹಾರ ಭತ್ಯೆ ಕೂಡ ಇಲ್ಲ ಹೀಗಾಗಿ ನಗರ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ಗ್ರಾಮೀಣ ಪ್ರದೇಶಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ನಮ್ಮ ಸಂಘದ ವತಿಯಿಂದ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಗ್ರಾಮೀಣ ಪರಿಹಾರ ಭತ್ಯೆ ನೀಡಲು ನಿರಂತರ ಹಕ್ಕೊತ್ತಾಯ ಮಾಡಿದರೂ ಸರ್ಕಾರ ನಮ್ಮ ಕಡೆ ತಿರುಗಿಯೂ ನೋಡುತ್ತಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ಇಲ್ಲದೆ ಗ್ರಾಮೀಣ ಪ್ರದೇಶದ ಶಿಕ್ಷಕರು ಅನ್ಯಾಯಕ್ಕೆ ಒಳಗಾಗಿದ್ದಾರೆ.
ಕರ್ನಾಟಕ ಶಿಕ್ಷಕರ ವರ್ಗಾವಣೆ ಮತ್ತು ನಿಯಂತ್ರಣ ಕಾಯ್ದೆಯ ನಿಯಮಗಳನ್ನು ಗಾಳಿಗೆ ತೂರಿ ವಲಯ ವರ್ಗಾವಣೆ ಬಿಟ್ಟು ಕೇವಲ ಸಾಮಾನ್ಯವರ್ಗಾವಣೆ ಮಾಡುತ್ತಿರುವುದು ಗ್ರಾಮೀಣ ಶಿಕ್ಷಕರ ಮೇಲೆ ಗದಾ ಪ್ರಹಾರ ಮಾಡಿದ ಹಾಗೆ ಅಗುತ್ತಿದೆ.
ಆದ್ದರಿಂದ ನಿಯಮಾನುಸಾರ ಈ ವರ್ಷ ವಲಯ ವರ್ಗಾವಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯಾಧ್ಯಕ್ಷ ಶರಣಪ್ಪ ಗೌಡ , ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಲೇಶ್ ನವುಲೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಐ.ಎಂ ಲಕ್ಕಮ್ಮನವರ ಶ್ರೀನಿವಾಸ, ಷಣ್ಮುಖ , ಹೆಚ್.ಮೇಟಿ, ಮಲ್ಲಿಕಾರ್ಜುನ ಉಪ್ಪಿನ, ಜಿ.ಕೆ ಜುಜಾರೆ ಬಂಡ್ಡಿವಡ್ಡರ್, ಸಿದ್ದಣ್ಣ ಉಕ್ಕಲಿ, ನಾರಾಯಣ ಸ್ವಾಮಿ , ಸುರೇಶ್, ರಫೀ ಹೊನ್ನಾಳಿ, ಎಸ್.ಎಫ್ ಪಾಟೀಲ್,ಧರ್ಮಣ್ಣ ಭಜಂತ್ರಿ, ಸೋಮಶೇಖರ, ಎ.ಜಿ ಬಿಸೆರೊಟ್ಟಿ, ಮಲ್ಲಿಕಾರ್ಜುನ ಬೆಂಗಳೂರು ಸೇರಿದಂತೆ ಶಿಕ್ಷಕರು, ರಾಜ್ಯ ಪದಾಧಿಕಾರಿಗಳಿದ್ದರು.
“ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಗ್ರಾಮೀಣ ಪರಿಹಾರ ಭತ್ಯೆ ನೀಡಲು ನಿರಂತರ ಹಕ್ಕೊತ್ತಾಯ ಮಾಡಿದರೂ ಸರ್ಕಾರ ನಮ್ಮ ಕಡೆ ತಿರುಗಿಯೂ ನೋಡುತ್ತಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ಇಲ್ಲದೆ ಗ್ರಾಮೀಣ ಪ್ರದೇಶದ ಶಿಕ್ಷಕರು ಅನ್ಯಾಯಕ್ಕೆ ಒಳಗಾಗಿದ್ದಾರೆ*
– ಶರಣಪ್ಪ ಗೌಡ, ರಾಜ್ಯಾಧ್ಯಕ್ಷ, ಕ.ಸ.ಗ್ರಾಪ್ರಾ ಶಾಲಾ ಶಿಕ್ಷಕರ ಸಂಘ.
“ಕಳೆದ ವರ್ಷ ಹೆಚ್ಚುವರಿ ವರ್ಗಾವಣೆ ಮಾಡಿರುವುದರಿಂದ ಈ ವರ್ಷ ವಲಯ ವರ್ಗಾವಣೆ ಮಾಡಬೇಕು ಆದರೆ ಈ ವರ್ಷದ ವರ್ಗಾವಣೆಯಲ್ಲಿ ವಲಯ ವರ್ಗಾವಣೆ ಕೈಬಿಟ್ಟಿರುವುದು ದುರದೃಷ್ಟಕರ.
– ಹಾಲೇಶ್ ನವುಲೆ, ರಾಜ್ಯ ಪ್ರಧಾನ ಕಾರ್ಯದರ್ಶಿ,