i
ಪಾಲಿಕೆ ನಿದ್ದೆ ಮಾಡುತ್ತಿದೆ: ಮಾಜಿ ಶಾಸಕರ ಆರೋಪ
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಪಾಲಿಕೆ ನಿದ್ರಿಸುತ್ತಿದೆ, ಜನರ ಹಿತ ಮರೆತಿದೆ, ಅಧಿಕಾರಿಗಳು ಕರ್ತವ್ಯ ಶೂನ್ಯರಾಗಿದ್ದಾರೆ ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆ ಈಗ ಅಧಿಕಾರಿಗಳ ಕೈಯಲ್ಲಿದೆ. ಆದರೆ ಈ ಅಧಿಕಾರಿಗಳು ನಗರದ ಅಭಿವೃದ್ಧಿಯನ್ನೇ ಮರೆತಿದ್ದಾರೆ. ಇಡೀ ನಗರದಲ್ಲಿ ಸ್ವಚ್ಛತೆಯಿಲ್ಲದೆ, ಕಸದ ರಾಶಿ ಎಲ್ಲಡೆ ಕಂಡು ಬರುತ್ತಿದೆ.
ಅವ್ಯವಸ್ಥೆಯ ಆಗರವಾಗಿದೆ. ಸೊಳ್ಳೆ ನಿಯಂತ್ರಣ ಇಲ್ಲವೇ ಇಲ್ಲ. ಪರಿಣಾಮ ನಗರದಲ್ಲೆಡೆ ಡೆಂಗ್ಯೂ ಜ್ವರ ಸೇರಿದಂತೆ ಇತರ ಸಾಮಾನ್ಯ ಜ್ವರಗಳು ಕಾಣಿಸಿಕೊಳ್ಳ ತೊಡಗಿವೆ. ಸಣ್ಣ ಸಣ್ಣ ಗಲ್ಲಿಯ ಆಸ್ಪತ್ರೆಗಳಲ್ಲೂ ಸಾರ್ವಜನಿಕರು ಚಿಕಿತ್ಸೆಗಾಗಿ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಜೊತೆಗೆ ಹಂದಿ, ನಾಯಿಗಳ ಕಾಟ ಬೇರೆ, ಒಟ್ಟಾರೆ ಇಡೀ ನಗರದ ಚಿತ್ರಣವೇ ಬದಲಾಗಿದೆ ಎಂದರು.
ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲ, 24*7 ನೀರಿನ ಯೋಜನೆ ನೆನೆಗುದಿಗೆ ಬಿದ್ದಿದೆ. ಸ್ವಲ್ಪ ಮಳೆ ಬಂದರು ಸಾಕು, ತಗ್ಗಿನ ಪ್ರದೇಶಗಳಲ್ಲಿ ನೀರು ನುಗ್ಗುತ್ತದೆ. ರಾಜಕಾಲುವೆ ಸೇರಿದಂತೆ ಚರಂಡಿ, ಹೂಳು ತುಂಬಿದೆ. ಪರಿಣಾಮ ಕೊಳಚೆ ನೀರು, ರಸ್ತೆಗಳಲ್ಲಿ ಹರಿಯುತ್ತಿದೆ. ಕೆಲವು ಕಡೆ ಕುಡಿಯುವ ನೀರಿನ ನಳಗಳಿಗೂ ಹೋಗುತ್ತಿದೆ ಎಂದು ದೂರಿದರು.