ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸೈಬರ್ ವಂಚಕರು ಹಿರಿಯ ಸಂಶೋಧಕನನ್ನು ಡಿಜಿಟಲ್ ಅರೆಸ್ಟ್ ಮಾಡಿ 4.91 ಕೋಟಿ ದೋಚಿರುವ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ.
ಹಣ ಕಳೆದುಕೊಂಡಿರುವ 94 ವರ್ಷದ ಸಂಶೋಧಕ ಮಾರ್ಚ್ 8ರಂದು ದೂರು ನೀಡಿದ್ದು, ಕೇಂದ್ರ ವಿಭಾಗದ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಎರಡು ತಿಂಗಳಲ್ಲಿ ಬೆಂಗಳೂರಿನಲ್ಲಿ ಈ ರೀತಿ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ವಂಚಿಸಿರುವ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ-
ಬೆಂಗಳೂರಿನ ಅಶೋಕ ನಗರ ಠಾಣಾ ವ್ಯಾಪ್ತಿಯ ವಿಕ್ಟೋರಿಯಾ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ವೊಂದರಲ್ಲಿ ಪತ್ನಿಯೊಂದಿಗೆ ದೂರುದಾರರು ನೆಲೆಸಿದ್ದರು. ಕಳೆದ ಡಿಸೆಂಬರ್ 2ರಂದು ದೂರುದಾರರ ಮನೆಯ ಲ್ಯಾಂಡ್ ಲೈನ್ ಫೋನ್ಗೆ ಕರೆ ಮಾಡಿದ್ದ ವಂಚಕ, ನಿಮ್ಮ ವಿರುದ್ಧ ಬಳ್ಳಾರಿ ಪೊಲೀಸ್ ಠಾಣೆಯಲ್ಲಿ ಮಾನವ ಕಳ್ಳ ಸಾಗಣೆ ಸಂಬಂಧ ಪ್ರಕರಣ ದಾಖಲಾಗಿದ್ದು, ಇನ್ಸ್ಪೆಕ್ಟರ್ ಕರೆ ಮಾಡುತ್ತಾರೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದ. ನಂತರ, ಸಂದೀಪ್ ರಾವ್ ಹೆಸರಿನ ಮತ್ತೋರ್ವ ವ್ಯಕ್ತಿ, ದೂರುದಾರರಿಗೆ ಕರೆ ಮಾಡಿ, ‘ನಾನು ಸಿಬಿಐ ಅಧಿಕಾರಿ’ ಎಂದು ಪರಿಚಯಿಸಿಕೊಂಡು ಆಧಾರ್ ಕಾರ್ಡ್ ಪ್ರತಿಯನ್ನು ವಾಟ್ಸ್ಆ್ಯಪ್ನಲ್ಲಿ ಕಳುಹಿಸುವಂತೆ ಸೂಚಿಸಿದ್ದ.
ಇದಾದ ಬಳಿಕ ಪ್ರಕರಣ ದಾಖಲಾಗಿರುವಂತೆ ನಕಲಿ ಎಫ್ಐಆರ್ ಪ್ರತಿ ಕಳುಹಿಸಿದ್ದ ವಂಚಕರು ಬೇರೆ ಬೇರೆ ಮೊಬೈಲ್ ಸಂಖ್ಯೆಗಳಿಂದ ವಿಡಿಯೋ ಕರೆ ಮಾಡಿದ್ದಾರೆ.
2025ರ ಡಿಸೆಂಬರ್ 17 ರಿಂದ 2026ರ ಫೆಬ್ರವರಿ 23ರ ನಡುವೆ ವಿಚಾರಣೆ ಸೋಗಿನಲ್ಲಿ ಹಂತ ಹಂತವಾಗಿ 4.91 ಕೋಟಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅದಾದ ಮೇಲೂ ವಂಚಕರು ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆಯಿಡಲಾರಂಭಿಸಿದಾಗ ಅನುಮಾನಗೊಂಡ ದೂರುದಾರರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ದೂರುದಾರರು ಆರ್ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಹಣ ವರ್ಗಾವಣೆ ಆಗಿರುವ ಖಾತೆಗಳು ನಕಲಿ (ಮ್ಯೂಲ್ ಅಕೌಂಟ್) ಎಂಬುದು ಪತ್ತೆಯಾಗಿದೆ. ಖಾತೆಗಳ ವಾರಸುದಾರರನ್ನ ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

