ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುಳ್ಳಿನ ಬಂಡಿ ಎಂದಿಗೂ ಶಾಶ್ವತವಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ! ಸದನದ ಒಳಗೊಂದು ಮಾಹಿತಿ, ಹೊರಗೆ ಸುಳ್ಳಿನ ಪ್ರದರ್ಶನ. ಇನ್ನೂ ಎಷ್ಟು ದಿನ ಜನರನ್ನು ವಂಚಿಸುವಿರಿ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ದೂರಿದ್ದಾರೆ.
ವಿಧಾನಸಭೆಯಲ್ಲಿ ನಿಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ನೀಡಿದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ನಿಮ್ಮ ಅಧಿಕಾರಾವಧಿಯ 3 ವರ್ಷಗಳಲ್ಲಿ ಪೂರ್ಣಗೊಂಡಿರುವ ಸರ್ಕಾರಿ ನೇಮಕಾತಿ ಕೇವಲ 8,157! ಆದರೆ ನೀವೇ ಜನರ ಮುಂದೆ, 40,000 ಹುದ್ದೆ ಭರ್ತಿ ಮಾಡಿದ್ದೇವೆ ಎಂದು ಹಸಿ ಸುಳ್ಳು ಹೇಳುವುದು ರಾಜ್ಯದ ನಿರುದ್ಯೋಗಿ ಯುವ ಜನತೆಗೆ ಮಾಡುತ್ತಿರುವ ನೇರ ವಂಚನೆಯಲ್ಲವೇ? ಎಂದು ಅವರು ಟೀಕಾಪ್ರಹಾರ ಮಾಡಿದ್ದಾರೆ.
ರಾಜ್ಯದ ಅತಿ ದೀರ್ಘಾವಧಿ ಮುಖ್ಯಮಂತ್ರಿಗಳಾಗಿರುವ ತಾವೇ ಈ ರೀತಿ ರಾಜ್ಯದ ಜನತೆಯ ದಾರಿ ತಪ್ಪಿಸಿದರೆ, ಮದ್ದೇ ಮುಳ್ಳಾದರೆ ಜನರ ಪಾಡೇನು? ದಯವಿಟ್ಟು ಸುಳ್ಳಿನ ಪ್ರಚಾರ ನಿಲ್ಲಿಸಿ, ಯುವಜನರ ಆಕ್ರೋಶ, ನೋವನ್ನು ಅರ್ಥಮಾಡಿಕೊಳ್ಳಿ. ಪರಿಸ್ಥಿತಿ ಕೈಮೀರುವ ಮುನ್ನ ಬಾಕಿ ಇರುವ ನೇಮಕಾತಿ ಪ್ರಕ್ರಿಯೆಗಳನ್ನು ಕೂಡಲೇ ಪೂರ್ಣಗೊಳಿಸಿ, ನಮ್ಮ ಯುವಜನತೆಗೆ ನ್ಯಾಯ ಒದಗಿಸಿ! ಎಂದು ವಿಜಯೇಂದ್ರ ತಾಕೀತು ಮಾಡಿದ್ದಾರೆ.

