ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
50 ಕೋಟಿ ರೂ.ಗೆ ದುಬಾರಿ ಶ್ವಾನಗಳ ಖರೀದಿ ಮಾಡಿರುವುದಾಗಿ ಹೇಳಿದ್ದ ಬೆಂಗಳೂರು ಮೂಲದ ಶ್ವಾನಪ್ರೇಮಿ ಸತೀಶ್ ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಾಕ್ ನೀಡಿದ್ದು, ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
50 ಕೋಟಿ ರೂಪಾಯಿ ಕೊಟ್ಟು ವಿಶ್ವದಲ್ಲೇ ದುಬಾರಿಯಾಗಿರುವ ಶ್ವಾನ ನಾಯಿಯೊಂದನ್ನು ಖರೀದಿ ಮಾಡಿದ್ದೇನೆ ಎಂದು ಹೇಳುತ್ತಿದ್ದ ಬೆಂಗಳೂರಿನ ಶ್ವಾನಪ್ರೇಮಿ ಸತೀಶ್ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜೆಪಿ ನಗರದ ಮೂರನೇ ಹಂತದಲ್ಲಿರುವ ಸತೀಶ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಶ್ವಾನ ಖರೀದಿ ಸುಳ್ಳು?–
ಅಧಿಕಾರಿಗಳ ಪರಿಶೀಲನೆ ವೇಳೆ ಸತೀಶ್ 50 ಕೋಟಿ ರೂಗೆ ನಾಯಿ ಖರೀದಿ ಮಾಡಿದ್ದಾರೆ ಎಂಬುದು ಸುಳ್ಳು ಎಂಬುದು ತಿಳಿದುಬಂದಿದೆ. ಸದ್ಯ ಇಡಿ ಅಧಿಕಾರಿಗಳು ಸತೀಶ್ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. 50 ಕೋಟಿ ರೂ ಮೌಲ್ಯದ ನಾಯಿ ಖರೀದಿಸಿದ್ದೇನೆ ಎಂದು ಸತೀಶ್ ಹೇಳಿದ್ದರು.
ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಇದೇ ಸತೀಶ್, 49 ಕೋಟಿ (4.4 ಮಿಲಿಯನ್ ಪೌಂಡ್ಗಳು) ರೂ.ಗೆ ಅತ್ಯಂತ ಅಪರೂಪದ ತೋಳ ನಾಯಿಯನ್ನು (ವುಲ್ಫ್ ಡಾಗ್) ಖರೀದಿಸಿದ್ದೇನೆ ಎಂದು ಹೇಳಿಕೊಂಡಿದ್ದರು.
ಕಾಡು ತೋಳ ಮತ್ತು ಕಾಕೇಶಿಯನ್ ಶೆಫರ್ಡ್ ತಳಿಗಳ ಮಿಶ್ರಣವಾಗಿದ್ದ ಕಡಬಾಮ್ ಒಕಾಮಿ ಎಂದು ಕರೆಯಲ್ಪಡುವ ಈ ಅಪರೂಪದ ನಾಯಿಯನ್ನು ಖರೀದಿಸಲು ಸುಮಾರು ರೂ.50 ಕೋಟಿ ಖರ್ಚು ಮಾಡಿದ್ದಾಗಿ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ 50 ಕೋಟಿ ರೂ,ಗೆ ಒಂದು ನಾಯಿ ಖರೀದಿ ಮಾಡಿದ್ದೇನೆ ಎಂದು ಸತೀಶ್ ಹೇಳಿಕೊಂಡಿರುವುದು ಸುಳ್ಳು ಎಂದು ಕೆಲವರು ಟೀಕಿಸಿದ್ದರು.
ಈ 50 ಕೋಟಿ ರೂ ಮೌಲ್ಯದ ನಾಯಿ ಖರೀದಿ ವಿಚಾರವೇ ಇಡಿ ಅಧಿಕಾರಿಗಳು ಅವನತ್ತ ತಿರುಗುವಂತೆ ಮಾಡಿತ್ತು. ಇದೇ ವಿಚಾರವಾಗಿ ಸತೀಶ್ ವಿರುದ್ಧ ಇಡಿ ಪ್ರಕರಣವನ್ನೂ ಕೂಡ ದಾಖಲಿಸಿಕೊಂಡಿತ್ತು. ಆದರೆ ಇದೀಗ ಇಡಿ ಸತೀಶ್ ಮನೆ ಮೇಲೆ ದಾಳಿ ಮಾಡಿದೆ.
ಶ್ವಾನಪ್ರಿಯ ಸತೀಶ್ಬೆಂಗಳೂರಿನವರು. ಇವರು ಹಲವು ಶ್ವಾನ ತಳಿ ಸಂಘಗಳನ್ನು ಮುನ್ನಡೆಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆಯೇ ನಾಯಿ ಸಾಕುವುದನ್ನು ಬಿಟ್ಟಿದ್ದರೂ ಆಗಾಗ್ಗೆ ಅಪರೂಪದ ನಾಯಿಗಳೊಂದಿಗೆ ಪ್ರದರ್ಶನದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅಲ್ಲದೇ ಸತೀಶ್ಯಾವುದೇ ಕಾರ್ಯಕ್ರಮಕ್ಕೆ ತಮ್ಮ ಅಪರೂಪದ ಶ್ವಾನದೊಂದಿಗೆ ಹೋದ್ರೆ ಅದಕ್ಕೆ ನಿರ್ದಿಷ್ಟ ಮೊತ್ತವನ್ನು ಪಡೆಯುವುದಾಗಿ ಎಂದು ಈ ಹಿಂದೆ ಹೇಳಿಕೊಂಡಿದ್ದರು.
ಇಡಿ ಅಧಿಕಾರಿಗಳ ಪ್ರಕಾರ, ಸತೀಶ್ ಇತರ ತಳಿಗಾರರಿಂದ ನಾಯಿಗಳನ್ನು ಬಾಡಿಗೆಗೆ ಪಡೆಯುತ್ತಿದ್ದ ಮತ್ತು ವೈರಲ್ ವೀಡಿಯೊಗಳನ್ನು ಸೃಷ್ಟಿಸುತ್ತಿದ್ದ, ಕೋಟ್ಯಂತರ ರೂಪಾಯಿಗಳಿಗೆ ವಿದೇಶಿ ತಳಿಗಳನ್ನು ಖರೀದಿಸಿದ್ದೇನೆ ಎಂದು ಸುಳ್ಳು ಹೇಳಿಕೊಳ್ಳುತ್ತಿದ್ದ. ಇಡಿ ಅವರ ಹಣಕಾಸು, ಆದಾಯ ಮೂಲಗಳು ಮತ್ತು ಜಿಎಸ್ಟಿ ದಾಖಲೆಗಳನ್ನು ತನಿಖೆ ಮಾಡಲು ಪ್ರಾರಂಭಿಸಿತು. ಅಂತಿಮವಾಗಿ ಬೆಂಗಳೂರಿನಲ್ಲಿರುವ ಅವರ ವಿಶಾಲವಾದ ಬಂಗಲೆಯ ಮೇಲೆ ದಾಳಿ ನಡೆಸಿತು. ಆತನ ವ್ಯವಹಾರ, ಆದಾಯ ತೆರಿಗೆ ಮತ್ತು ಜಿಎಸ್ಟಿ ಬಗ್ಗೆ ಮಾಹಿತಿ ಪಡೆಯಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಂದಾಗಿದ್ದಾಗ ಇಡೀ ವ್ಯವಹಾರ ಬಯಲಾಗಿದ್ದು ಈಗ ಸತೀಶ್ ಸಂಕಷ್ಟಕ್ಕೆ ಸಿಲುಕಿದ್ದಾರೆ.