ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶಿವಮೊಗ್ಗಕ್ಕೆ ವಂದೇ ಭಾರತ್ ಎಕ್ಸ್ಪ್ರೆಸ್ ಸೇರಿ 7 ಹೊಸ ರೈಲುಗಳ ಸೇವೆ ಲಭ್ಯವಾಗಲಿದ್ದು, ರಾಜ್ಯದ 4ನೇ ರೈಲ್ವೆ ಕೋಚಿಂಗ್ ಡಿಪೋ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗ-ತಿರುಪತಿ ಹಾಗೂ ಶಿವಮೊಗ್ಗ-ಬೆಂಗಳೂರು ನಡುವೆ ವಂದೇ ಭಾರತ್ ರೈಲುಗಳು ಸಂಚರಿಸಲಿವೆ. ಅಲ್ಲದೆ, ಶಿವಮೊಗ್ಗದಿಂದ ಕೇರಳ, ಬಿಹಾರ, ಜಾರ್ಖಂಡ್, ಚಂಡೀಗಢ, ಮತ್ತು ಗೌಹಾಟಿಗೂ ರೈಲು ಸೇವೆಗಳು ಆರಂಭವಾಗಲಿವೆ ಎಂದು ಅವರು ತಿಳಿಸಿದ್ದಾರೆ.
ಹೊಸ ರೈಲು ಮಾರ್ಗಗಳ ಸರ್ವೇ ಆರಂಭ-
ತಾಳಗುಪ್ಪದಿಂದ ಹುಬ್ಬಳ್ಳಿ ಸಂಪರ್ಕಕ್ಕೆ ಸಿದ್ದಾಪುರ, ಶಿರಸಿ, ಮುಂಡಗೋಡು ತಡಸ ನಡುವೆ 150 ಕಿ.ಮೀ. ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ಸರ್ವೆ ಆಗಿದೆ. ಈ ಮಾರ್ಗದಲ್ಲಿ195 ಹೆಕ್ಟೆರ್ ಖುಷ್ಕಿ ಭೂಮಿ, 317 ಹೆಕ್ಟೆರ್ ನೀರಾವರಿ, 190 ಹೆಕ್ಟೆರ್ ಅರಣ್ಯ ಭೂಮಿ ಬರುತ್ತದೆ. ಅರಣ್ಯ ಭೂಮಿಗೆ ಬದಲಿ ಭೂಮಿ ಕೊಡುವ ಕಾರ್ಯ ಆರಂಭವಾಗಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.
ತಾಳಗುಪ್ಪ- ಹೊನ್ನಾವರ ರೈಲು ಮಾರ್ಗದ ಸರ್ವೆ ಸಹ ಆಗಿದೆ. ಇಲ್ಲಿ ಶೇ.73ರಷ್ಟು ಅರಣ್ಯ ಬರುವುದರಿಂದ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಚಿಕ್ಕಮಗಳೂರು ಬೇಲೂರು ಹಾಸನ ನೂತನ ಮಾರ್ಗಕ್ಕೆ ಸರ್ವೆ ಆರಂಭವಾಗಿದೆ.
ಬೀರೂರು ಶಿವಮೊಗ್ಗ ಡಬ್ಲಿಂಗ್ಗೆ 1900 ಕೋಟಿ ರೂ. ಅನುಮೋದನೆ ನೀಡಲಾಗಿದ್ದು ಈ ವರ್ಷಾಂತ್ಯದೊಳಗೆ ಕಾಮಗಾರಿ ಆರಂಭವಾಗಲಿದೆ.
ಭದ್ರಾವತಿ ಚಿಕ್ಕಜಾಜೂರು ನಡುವೆ 73 ಕಿ.ಮೀ. ರೈಲು ಮಾರ್ಗ ಸರ್ವೆಗೆ ಟೆಂಡರ್ ಆಗಿದೆ. ಇದು ವಿಐಎಸ್ಎಲ್ಗೆ ಅದಿರು ಸಾಗಿಸಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.