ಚಂದ್ರವಳ್ಳಿ ನ್ಯೂಸ್, ಆನೇಕಲ್:
ಆನೇಕಲ್ ತಾಲೂಕಿನ ವಣಕನಹಳ್ಳಿ ಹಾಗೂ ಕಾಳನಾಯಕನ ಹಳ್ಳಿ ಗ್ರಾಮದ ಸುತ್ತಮುತ್ತ ಸುಮಾರು 11 ಆನೆಗಳು ಬೀಡುಬಿಟ್ಟಿರುವುದಲ್ಲದೆ ಸುತ್ತಮುತ್ತಲ ಗ್ರಾಮಗಳಲ್ಲಿ ರೈತರು ಬೆಳೆದಿರುವ ಬೆಳೆ ನಾಶ ಮಾಡಿ ಸಾಕಷ್ಟು ತೊಂದರೆ ನೀಡುತ್ತಿವ ಕುರಿತು ರೈತರು ಅಳಲು ತೋಡಿಕೊಂಡಿದ್ದಾರೆ.
ಹೀಗಾಗಿ, ಬೆಳಗಿನಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆನೆಗಳನ್ನು ಕಾಡಿಗೆ ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಆದರೂ ಸಹ ಪಟ್ಟು ಬಿಡದ ಆನೆಗಳ ಹಿಂಡು ಗ್ರಾಮದ ಪಕ್ಕದಲ್ಲಿಯೇ ಉಳಿದುಕೊಂಡಿವೆ. ಆದ್ದರಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಫುಲ್ ಅಲರ್ಟ್ ಘೋಷಿಸಿದ್ದು ರಾತ್ರಿ ವೇಳೆ ಯಾವೊಬ್ಬ ಗ್ರಾಮಸ್ಥರೂ ಹೊರಬರಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಆನೆಗಳ ಹಿಂಡು ರೈತರ ಹೊಲಗಳಿಗೆ ಲಗ್ಗೆ ಇಟ್ಟು ದಾಂಧಲೆ ಮಾಡುವ ಸಾಧ್ಯತೆ ಇದ್ದು ರೈತರು ಹಾಗೂ ಸ್ಥಳೀಯರು ಕಂಗಾಲಾಗಿದ್ದಾರೆ.
ಈ ನಡುವೆ ಯುವಕರು ಆನೆಗಳನ್ನು ಓಡಿಸುವ ಭರದಲ್ಲಿ ಅವುಗಳನ್ನು ಕೆಣಕುತ್ತಿದ್ದರಿಂದ ಕಾಡಾನೆಯೊಂದು ಮರವನ್ನೇ ಗುದ್ದಿ ಹೆದರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯಕ್ಕೆ ಆನೆ ಓಡಿಸುವ ಕಾರ್ಯಾಚರಣೆ ನಿಂತಿದೆ. ಮತ್ತೆ ಆನೆ ಓಡಿಸುವ ಕೆಲಸಕ್ಕೆ ಸಿಬ್ಬಂದಿ ಮುಂದಾಗಲಿದ್ದಾರೆ ಎನ್ನಲಾಗುತ್ತಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜಲ್ ಪಾಟೀಲ್ ಆನೆಗಳ ದಾಳಿ ಕುರಿತು ಪ್ರತಿಕ್ರಿಯಿಸಿ, ಆನೆಗಳು ಗ್ರಾಮಗಳತ್ತ ಬರದಂತೆ ಸಾಕಷ್ಟು ತಡೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ರೈಲ್ವೆ ಬ್ಯಾರಿಕೇಡ್ ಗೇಟುಗಳನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಅಳವಡಿಸಲಿದ್ದೇವೆ. ಜೊತೆಗೆ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

