ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬಂಡವಾಳಶಾಹಿಗಳ ಮುಷ್ಠಿಯಿಂದ ರಾಜಕೀಯ ಕ್ಷೇತ್ರ ಮುಕ್ತಗೊಳಿಸಬೇಕು ಎಂದು ಬಿಬಿಎಂಪಿ ನಿವೃತ್ತ ಉಪ ಆಯುಕ್ತ ಬೇತೂರುಪಾಳ್ಯ ಡಾ.ಜೆ.ರಾಜು ತಿಳಿಸಿದರು.
ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ತಾಲ್ಲೂಕು ಒಕ್ಕಲಿಗ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಒಕ್ಕಲಿಗ ಜನಾಂಗದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
ರಾಜಕೀಯ ಎನ್ನುವುದು ಇಂದು ಸೇವೆಯಾಗಿ ಉಳಿದಿಲ್ಲ, ಬದಲಿಗೆ ಉದ್ಯಮವಾಗಿ ಪರಿವರ್ತನೆಯಾಗಿದೆ. ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿ ನೂರುಪಟ್ಟು ಗಳಿಕೆ ಮಾಡುವ ಉದ್ದೇಶದಿಂದ ರಾಜಕೀಯ ಕ್ಷೇತ್ರಕ್ಕೆ ಬಂಡವಾಳಶಾಹಿಗಳು ಆಗಮಿಸಲಿದ್ದಾರೆಂದು ಡಾ.ಜೆ.ರಾಜು ಹೇಳಿದರು.
ಜನಸಾಮಾನ್ಯರ ಕ್ಷೇತ್ರವನ್ನಾಗಿಸಲು ಮತದಾರರ ಸಹಕಾರ ಅತ್ಯಗತ್ಯ. ರಾಜಕೀಯದಲ್ಲಿ ಪರ- ವಿರೋಧ ಇದ್ದದ್ದೆ. ಆದರೆ, ಯಾರು ಹಣ ಮಾಡಲು ಈ ಕ್ಷೇತ್ರಕ್ಕೆ ಬಂದಿದ್ದಾರೆ, ಯಾರು ಜನರ ಸೇವೆಗೆ ಬಂದಿದ್ದಾರೆ ಎಂಬುದನ್ನು ಮತದಾರರು ಅರಿಯಬೇಕು. ಶಾಸಕ ಅಥವಾ ಸಂಸದನಾಗಲು ಕೇವಲ ಒಂದು ಜಾತಿಯಿಂದ ಸಾಧ್ಯವಿಲ್ಲ. ಎಲ್ಲ ಜಾತಿ-ಧರ್ಮದವರ ಪ್ರೀತಿ-ವಿಶ್ವಾಸ ಗಳಿಸಬೇಕು ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ, ಬಿಬಿಎಂಪಿಯಲ್ಲಿದ್ದಾಗ ಸಾಕಷ್ಟು ಜನರಿಗೆ ಸಹಾಯ ಮಾಡಿರುವ ತೃಪ್ತಿ ಇದೆ. ನನ್ನಲ್ಲಿಗೆ ಬಂದವರು ಕೆಲಸ ಆಗಲಿಲ್ಲ ಎಂದು ಬೇಸರಿಸಿಕೊಂಡು ಹೋದ ನಿದರ್ಶನಗಳಿಲ್ಲ. ಇದಕ್ಕೆ ನಿವೃತ್ತಿಯ ನಂತರ ನಡೆದಿರುವ ಸಭೆಗೆ ಸಾರ್ವಜನಿಕರು ಆಗಮಿಸುತ್ತಿರುವುದೇ ಸಾಕ್ಷಿ. ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಬೇಕೇ? ಬೇಡವೇ? ಎಂಬ ಬಗ್ಗೆ ಅಪ್ತರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇನೆ ಎಂದು ರಾಜು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಅವರು ಜಿಲ್ಲಾ ಒಕ್ಕಲಿಗರ ಸಂಘದ ಕಟ್ಟಡಕ್ಕೆ 20 ಲಕ್ಷ ನೆರವು ನೀಡುವುದಾಗಿ ಘೋಷಿಸಿದರು.
ಎರೆನಾಡು ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಟಿ. ರುದ್ರಮುನಿ ಮಾತನಾಡಿದರು.
ದೊಡ್ಡಗೌಡ, ವರುಣ್ ಗೌಡ, ತಾಲ್ಲೂಕು ಒಕ್ಕಲಿಗರ ನೌಕರರ ಸಂಘದ ಅಧ್ಯಕ್ಷ ಕಾಂತರಾಜು, ಕಾರ್ಯದರ್ಶಿ ಹನುಮಂತ ರೆಡ್ಡಿ, ಕಾರ್ಯದರ್ಶಿ ಏಕಾಂತಪ್ಪ, ನಿವೃತ್ತ ಶಿಕ್ಷಕ ಓಂಕಾರಪ್ಪ, ವಾಣಿ ಮಹಲಿಂಗಪ್ಪ, ಕಲ್ಪನಾ, ಹಾರ್ಡ್ವೇರ್ ಶಿವಣ್ಣ, ಧರ್ಮಪುರ ಹನುಮಂತರಾಯಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

