ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ವಾತಂತ್ರ್ಯ ಏಳು ದಶಕಗಳೆ ಕಳೆದಿದ್ದರೂ ದಲಿತ ಸಿಎಂ ಆಗದಿರೋದರ ಬಗ್ಗೆ ತುಂಬಾ ನೋವಿದೆ. ಹೈಕಮಾಂಡ್ ಮನಸ್ಸು ಮಾಡಿದರೆ ಎಲ್ಲಾ ಸಾಧ್ಯ ಆಗುತ್ತದೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ಬೆಂಗಳೂರಲ್ಲಿ ದಲಿತ ಸಿಎಂ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡಬೇಕು. ಮಲ್ಲಿಕಾರ್ಜುನ ಖರ್ಗೆ ಕಾಲದಲ್ಲೇ ಆಗಬೇಕು ಎಂದು ಇತ್ತು. ಹೈಕಮಾಂಡ್ ಮನಸ್ಸು ಮಾಡಿದರೆ ಎಲ್ಲ ಆಗುತ್ತದೆ. ಹೈಕಮಾಂಡ್ಗೆ ಯಾವ ಕಾಲದಲ್ಲಿ ಏನು ಆಗಬೇಕು ಅಂತ ಗೊತ್ತಿದೆ. ಸಿಎಂ ಮಾಡುವ ಸ್ಥಾನದಲ್ಲಿ ಖರ್ಗೆಯವರು ಕೂತಿದ್ದಾರೆ. ನಾವು ಇನ್ನೇನು ಮಾತನಾಡೋದು ಎಂದು ಮುನಿಯಪ್ಪ ಮಾರ್ಮಿಕವಾಗಿ ಹೇಳಿದರು.
ಶೇ25ರಷ್ಟು ಇರುವ ದಲಿತ ಸಮುದಾಯದ ಪೈಕಿ ಶೇ75ರಷ್ಟು ಮತಗಳನ್ನು ಕಾಂಗ್ರೆಸ್ಗೆ ಹಾಕುತ್ತಾರೆ. ಇದೆಲ್ಲವನ್ನೂ ಹೈಕಮಾಂಡ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. 2028ಕ್ಕೆ ಮತ್ತೆ ಅಧಿಕಾರಕ್ಕೆ ಬರೋದು ನಮ್ಮ ದೃಷ್ಟಿಕೋನ ಎಂದು ಪರೋಕ್ಷವಾಗಿ ದಲಿತ ಸಿಎಂ ಆಗಬೇಕೆಂದು ಅವರು ಪರೋಕ್ಷವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪರ, ವಿರೋಧ ಇಲ್ಲ:
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರನ್ನೂ ರಾಹುಲ್ ಗಾಂಧಿ ಕರೆದು ಮಾತನಾಡಿದ್ದಾರೆ. ದೆಹಲಿಗೆ ಹೋಗೋ ವಿಚಾರ ಹೈಕಮಾಂಡ್ಗೆ ಬಿಟ್ಟ ವಿಚಾರ. ಅವರು ಕರೆಯುತ್ತೇವೆ ಅಂದಿದ್ದಾರೆ. ಕರೆದು ಮಾತನಾಡುತ್ತಾರೆ. ನಾನು ಯಾರ ಪರನೂ ಇಲ್ಲ, ವಿರೋಧನೂ ಇಲ್ಲ. ಡಿಸಿಎಂ ಆಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಸಿಎಂ ಕೂಡ ಇತಿಹಾಸ ಸೃಷ್ಟಿ ಮಾಡಿದ್ದಾರೆ ಎಂದು ಮುನಿಯಪ್ಪ ಅವರು ತಿಳಿಸಿದರು.
ಹಿಂದುಳಿದ ವರ್ಗಗಳ ನಾಯಕ ದೇವರಾಜ ಅರಸು ಅವರು ಬಲವಾಗಿ ಪಾಯ ಹಾಕಿದ್ದರು, ಸಿದ್ದರಾಮಯ್ಯ ಅವರು ಮನೆ ಕಟ್ಟಿದ್ದಾರೆ. ಶೋಷಿತ ವರ್ಗಗಳಿಗೆ ಒಳ್ಳೆಯ ಕೆಲಸ ಮಾಡಿದ್ದಾರೆ. ಒಳ ಮೀಸಲಾತಿ ಮಾಡುವಾಗ ಎಲ್ಲರ ಅಭಿಪ್ರಾಯ ಪಡೆದು ಮಾಡಿದ್ದಾರೆ. ಇದೆಲ್ಲವೂ ಇತಿಹಾಸ ಪುಟಕ್ಕೆ ಸೇರುವ ಕೆಲಸಗಳು. ಸಂಘಟನೆಯಲ್ಲಿ ಡಿಕೆ ಶಿವಕುಮಾರ್ ಅತ್ಯುತ್ತಮ ಕೆಲಸ ಮಾಡಿದ್ದಾರೆ. 136 ಸ್ಥಾನ ಬರಬೇಕು ಎಂದರೆ ಅಷ್ಟು ಸುಲಭ ಅಲ್ಲ ಎಂದು ಡಿಕೆ ಶಿವಕುಮಾರ್ ಕೆಲಸವನ್ನ ಮೆಚ್ಚಿಕೊಂಡರು.
ಕರೆದು ಬುದ್ದಿ ಹೇಳುವೆ:
ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಸೌಮ್ಯ ಸ್ವಭಾವದವರು. ಇಂಥ ಇಮೋಷನ್ ಆಗಬಾರದೆಂದು ಕರೆದು ಬುದ್ದಿ ಹೇಳುತ್ತೇನೆ. ರಾಜಕೀಯ ಕ್ಷೇತ್ರದ ವ್ಯಕ್ತಿ ಶಾಂತ ಸ್ವಭಾವದಿಂದ ಇರಬೇಕು. ಅಧಿಕಾರದಲ್ಲಿರುವವರಿಗೆ ಹೀಗೆ ಮಾತನಾಡಬಾರದು. ಕೂಲಂಕಷವಾಗಿ ಯೋಚಿಸಬೇಕು ಎಂದು ಸಚಿವರು ತಿಳಿಸಿದರು.
ಜೆಡಿಎಸ್ನವರು ಹಿಂದೆ ಬ್ಯಾನರ್ ಹಾಕಿದಾಗ ಈ ಅಧಿಕಾರಿ ತೆಗೆದಿಲ್ಲ. ಈಗ ತೆಗೆದ್ರು ಎಂಬುದುರ ರಾಜೀವ್ ಗೌಡ ವಾದ. ಆದರೆ, ಹೀಗೆ ಮಾತನಾಡುವುದು ಅನಾಗರೀಕತೆ ಆಗುತ್ತದೆ. ಸುಸಂಸ್ಕೃತರು ಹೀಗೆಲ್ಲ ಮಾತನಾಡಬಾರದು ಎಂದು ಮುನಿಯಪ್ಪ ಅವರು ತಾಕೀತು ಮಾಡಿದರು.
ರಾಜೀವ್ ಗೌಡ ಹೇಳುವ ಪ್ರಕಾರ ಅವರ ಹಿನ್ನೆಲೆ ನೋಡಿದಾಗ ಅವರ ಅಭಿಪ್ರಾಯದಲ್ಲಿ ಜೆಡಿಎಸ್ ಬ್ಯಾನರ್ ತೆಗೆಸಿರಲಿಲ್ಲ, ಜೆಡಿಎಸ್ನ ಪೋಸ್ಟರ್ ಬ್ಯಾನರ್ ತೆಗೆಯುತ್ತಿಲ್ಲ ಆ ಅಧಿಕಾರಿ. ಕೇವಲ ಕಾಂಗ್ರೆಸ್ನದ್ದು ಮಾತ್ರ ತೆಗೆದಿದ್ದಾರೆ ಎಂಬುದು ರಾಜೀವ್ ಗೌಡ ವಾದ. ರಾಜೀವ್ ಗೌಡ ಬಡವರಿಗೆ ಒಳ್ಳೆಯ ಕೆಲಸ ಮಾಡಿದ್ದಾನೆ. 10 ವರ್ಷದಲ್ಲಿ ಒಂದೇ ಒಂದು ದಿನ ಇಂಥ ಆಚಾತುರ್ಯ ಕಾಣಲಿಲ್ಲ. ಆದರೆ, ಈಗ ಭಾವನೆಗೆ ಒಳಗಾಗಿ ಹೀಗೆ ಮಾತನಾಡಿದ್ದಾನೆ, ಸರಿಯಲ್ಲ. ಏನೆಲ್ಲ ಮಾತನಾಡಿದ್ದಾರೆ ಸರಿಯಿಲ್ಲ ಎಂದು ಸಚಿವರು ಹೇಳಿದರು.
ಕಳೆದ 10 ವರ್ಷದಲ್ಲಿ ಇಷ್ಟೆಲ್ಲ ಕೆಲಸ ಮಾಡಿ ಈಗ ಮನಸ್ಸಿಗೆ ನೋವು ಮಾಡಿದ್ದಾನೆ. ಇದೇ ಫರ್ಸ್ಟ್ ಅಂಡ್ ಲಾಸ್ಟ್ ಹೀಗೆ ಮಾತಾಡಬಾರದು. ಯಾರೂ ಯಾವ ಕಾಲಕ್ಕೂ ಹೀಗೆ ಮಾತನಾಡಬಾರದು. ಕರೆದು ಬುದ್ದಿ ಹೇಳುತ್ತೇನೆ. ರಾಜೀವ್ ಗೌಡ ನನಗೆ ಸಿಕ್ಕಿಲ್ಲ. ಅವರ ಶ್ರೀಮತಿಗೆ ಕರೆ ಮಾಡಿ ಬುದ್ದಿ ಹೇಳಿದ್ದೇನೆ. ಅವನು ತನ್ನ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡ್ತಿದ್ದಾನೆ. ಈಗ ಯಾರನ್ನೋ ಓಲೈಕೆ ಮಾಡುವ ಅವಶ್ಯಕತೆ ಇಲ್ಲ ಎಂದು ಮುನಿಯಪ್ಪ ಅವರು ತಿಳಿಸಿದರು.

