ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ಅವರು ಆರೋಪಿ ರಾಜೀವ ಗೌಡ ಪರ ಬ್ಯಾಟಿಂಗ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ರಾಜೀವ್ ಗೌಡ ಸೌಮ್ಯ ಸ್ವಭಾವದವರಾಗಿದ್ದು, ಕರೆದು ಆತನಿಗೆ ಬುದ್ಧಿ ಹೇಳುತ್ತೇನೆ.
ರಾಜಕೀಯದಲ್ಲಿರುವ ವ್ಯಕ್ತಿ ಶಾಂತ ಸ್ವಭಾವದಿಂದ ಇರಬೇಕು. ಅಧಿಕಾರದಲ್ಲಿ ಇರುವವರಿಗೆ ಯಾರೂ ಹೀಗೆ ಮಾತನಾಡಬಾರದು ಎಂದಿದ್ದಾರೆ. ಅಲ್ಲದೆ ಶಿಡ್ಲಘಟ್ಟದಲ್ಲಿ ಜೆಡಿಎಸ್ನವರು ಈ ಹಿಂದೆ ಬ್ಯಾನರ್ ಹಾಕಿದಾಗ ತೆಗೆಸಿಲ್ಲ, ಆದರೆ ಈಗ ತೆಗೆದಿದ್ದಾರೆ ಅಂತಾ ರಾಜೀವ್ ಹೇಳ್ತಿದ್ದಾರೆ.
ಆ ಅಧಿಕಾರಿ ಜೆಡಿಎಸ್ ಪಕ್ಷದ ಪೋಸ್ಟರ್, ಬ್ಯಾನರ್ ತೆಗೆಯುತ್ತಿಲ್ಲ. ಕೇವಲ ಕಾಂಗ್ರೆಸ್ ಬ್ಯಾನರ್ ತೆಗೆದಿದ್ದಾರೆ ಎಂಬುದು ರಾಜೀವ್ ವಾದ ಎಂದು ಸಚಿವ ಮುನಿಯಪ್ಪ ಅವರು ತಿಳಿಸುವ ಮೂಲಕ ಆರೋಪಿ ಪರ ಇದ್ದು ಸಮರ್ಥಿಸಿಕೊಂಡಿದ್ದಾರೆ.

