ಚಂದ್ರವಳ್ಳಿ ನ್ಯೂಸ್, ತಿಪಟೂರು:
ಕಲ್ಪತರುನಾಡು ತಿಪಟೂರಿನ ಎಸ್.ವಿ.ಪಿ ಶಾಲಾ ಆವರಣದಲ್ಲಿ ಪಕ್ಷದ ಮುಖಂಡ ಕೆ.ಟಿ.ಶಾಂತಕುಮಾರ್ ಅವರ ನೇತೃತ್ವದಲ್ಲಿ ಹಮ್ಮಿಕೊಂಡ 4ನೇ ಬೃಹತ್ ಉದ್ಯೋಗ ಮೇಳವನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಿ, ಉದ್ಯೋಗಾಕಾಂಕ್ಷಿಗಳಿಗೆ ಆದೇಶ ಪ್ರತಿ ನೀಡಿ, ಉದ್ಯೋಗ ಮೇಳ ಉದ್ದೇಶಿಸಿ ಮಾತನಾಡಿದರು.
ಸಮಯ ಹಾಗೂ ಸಮುದ್ರದ ಅಲೆಗಳು ಯಾರಿಗೂ ಕಾಯುವುದಿಲ್ಲ. ಸಮಯ ಬಂದಾಗ ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಸದಪಯೋಗ ಪಡೆಸಿಕೊಳ್ಳಬೇಕು.74 ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳಕ್ಕೆ ಬಂದಿದ್ದು ಈ ಅವಕಾಶದಿಂದ ಯಾರು ವಂಚಿತರಾಗಬಾರದು ಎಂದು ನಿಖಿಲ್ ಕಿವಿ ಮಾತು ಹೇಳಿ ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗದರ್ಶನ ಮಾಡಿದರು.
ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನಿಮ್ಮ ತಂದೆ-ತಾಯಿ ಅವರ ತ್ಯಾಗವನ್ನು ಸ್ಮರಿಸಬೇಕು. ಯುವ ಶಕ್ತಿಯಿಂದ ಮಾತ್ರ ದೇಶವನ್ನು ಬದಲಿಸುವ ಶಕ್ತಿ ಇದೆ, ಈ ನಿಟ್ಟಿನಲ್ಲಿ ತಾವೆಲ್ಲರೂ ಉದ್ಯೋಗಕ್ಕೆ ಮಾತ್ರ ಸೀಮಿತವಾಗದೆ ನೀವು ಕೂಡ ದೊಡ್ಡ ದೊಡ್ಡ ಕಂಪನಿಗಳನ್ನು ಹುಟ್ಟುಹಾಕಬೇಕು ಎಂಬ ಆಲೋಚನೆಯನ್ನು ಬೆಳಸಿಕೊಳ್ಳಬೇಕು. ಎಂದು ತಿಳಿಸಿದ ನಿಖಿಲ್ ಕುಮಾರಸ್ವಾಮಿ, ಕೆ.ಟಿ. ಶಾಂತಕುಮಾರ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಅವರ ಕಾರ್ಯಗಳು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಸಕ ಎಂ. ಟಿ ಕೃಷ್ಣಪ್ಪ, ಮಾಜಿ ಶಾಸಕ ಹೆಚ್.ನಿಂಗಪ್ಪ, ಮುಖಂಡರಾದ ಗುಬ್ಬಿ ನಾಗರಾಜು, ಜಿಲ್ಲಾಧ್ಯಕ್ಷ ಆರ್. ಸಿಅಂಜನಪ್ಪ, ಆರ್ ಎಸ್ ಎಸ್ ಸಂಚಾಲಕ ರವೀಂದ್ರ, ಪ್ರಮುಖರಾದ ನಿಂಗಪ್ಪ, ರಂಗನಿಧಿ, ಡಾ. ಸಚಿನ್ ನಡೋಣಿ, ಶಿವಸ್ವಾಮಿ, ಶೋಭಾ, ಲೋಕೇಶ್, ಯೋಗಾನಂದ ಕುಮಾರ್, ಕೃಷ್ಣಮೂರ್ತಿ, ಸೋಮಶೇಖರ್ ಅವರು ವಿದ್ಯಾರ್ಥಿಗಳು ಹಾಗೂ ಪ್ರತಿಷ್ಟಿತ ಕಂಪನಿಗಳ ಸಿಇಓಗಳು ಭಾಗಿಯಾಗಿದ್ದರು.

