ವೈದ್ಯರು ರೋಗಿಗಳೊಂದಿಗೆ ಕನ್ನಡದಲ್ಲೇ ಸಂವಹನ ನಡೆಸಲಿ: ಡಾ.ಬಿಳಿಮಲೆ

News Desk
- Advertisement -  - Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವೈದ್ಯರು ಸ್ಥಳೀಯ ಭಾಷೆಯ ಮಹತ್ವವನ್ನು ಅರಿತು ರೋಗಿಗಳೊಂದಿಗೆ ಕನ್ನಡದಲ್ಲೇ ಸಂವಹನ ನಡೆಸಿದಾಗ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ನಗರದ ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಈಚೆಗೆ ಆಯೋಜಿಸಲಾಗಿದ್ದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವೈದ್ಯಕೀಯ ಸೇವೆ ಕೇವಲ ಆರ್ಥಿಕ ಲಾಭಕ್ಕಾಗಿರದೆ ಸಾರ್ವಜನಿಕ ಸೇವೆಯಾಗಬೇಕು. ಸ್ಥಳೀಯ ಭಾಷೆಯ ಅರಿವಿನೊಂದಿಗೆ ಜಾಗತಿಕ ವೈದ್ಯಕೀಯ ಜ್ಞಾನವನ್ನು ಬಳಸಿಕೊಂಡಾಗ ರೋಗ ಗುಣಪಡಿಸುವುದು ಸುಲಭವಾಗುತ್ತದೆ ಎಂದರು.

- Advertisement - 

ಕನ್ನಡ ಲಾಂಛನಕ್ಕೆ ಸೂಚನೆ:
ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ಮಾತನಾಡಿ, ಕಾಲೇಜಿನ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು. ಸಂಸ್ಥೆಯ ಲಾಂಛನವು ಇಂಗ್ಲಿಷ್ ಬದಲಿಗೆ ಕನ್ನಡ ಲಿಪಿಯಲ್ಲಿರುವಂತೆ ಕ್ರಮ ಕೈಗೊಳ್ಳಬೇಕು ಡಾ. ಪುರುಷೋತ್ತಮ ಬಿಳಿಮಲೆ ಎಂದು ಸೂಚಿಸಿದರು.

ಶೈಕ್ಷಣಿಕ ಸಾಧನೆಯಲ್ಲಿ 7ನೇ ಸ್ಥಾನ:
ಸಂಸ್ಥೆಯ ಪ್ರಗತಿ ವರದಿ ಮಂಡಿಸಿದ ನಿರ್ದೇಶಕ ಡಾ. ಬಿ.ವೈ. ಯುವರಾಜ್, ಕಾಲೇಜಿನ ಆಡಳಿತಾತ್ಮಕ ಪತ್ರ ವ್ಯವಹಾರಗಳು ಸಂಪೂರ್ಣವಾಗಿ ಕನ್ನಡದಲ್ಲೇ ನಡೆಯುತ್ತಿವೆ. ನಮ್ಮ ವಿದ್ಯಾರ್ಥಿಗಳು ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳ ಪೈಕಿ ದ್ವಿತೀಯ ಅತಿ ಹೆಚ್ಚು ಅಂಕ ಗಳಿಸಿದ್ದು, ಒಟ್ಟಾರೆ ಸಾಧನೆಯಲ್ಲಿ ಕಾಲೇಜು ರಾಜ್ಯಕ್ಕೆ 7ನೇ ಸ್ಥಾನದಲ್ಲಿದೆ, ಎಂದು ಹೆಮ್ಮೆಯಿಂದ ತಿಳಿಸಿದರು. 2026-27ನೇ ಸಾಲಿನಿಂದ ಸ್ನಾತಕೋತ್ತರ ಕೋರ್ಸ್ಗಳನ್ನು ಆರಂಭಿಸುವ ಯೋಜನೆಯಿದೆ ಎಂದೂ ಅವರು ಮಾಹಿತಿ ನೀಡಿದರು. ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಬೋಧಕರು ಕನ್ನಡದಲ್ಲಿ ವೈದ್ಯಕೀಯ ಲೇಖನ ಹಾಗೂ ಸಂಶೋಧನಾ ಬರಹಗಳನ್ನು ಬರೆಯಲು ಉತ್ತೇಜಿಸಲಾಗುವುದು. ಕಾಲೇಜಿನಲ್ಲಿ ಕನ್ನಡ ಸಂಘವನ್ನು ರಚಿಸಲಾಗಿದ್ದು, ಕನ್ನಡ ರಾಜ್ಯೋತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

- Advertisement - 

ಪ್ರಾಧಿಕಾರದ ಸದಸ್ಯ ಡಾ. ಎ.ಬಿ. ರಾಮಚಂದ್ರಪ್ಪ ಮಾತನಾಡಿ, ತಾಯಿ ಭಾಷೆಯಲ್ಲಿ ಸಂವಹನ ನಡೆಸುವುದರಿಂದ ಮಾನವೀಯ ಬಾಂಧವ್ಯ ಗಟ್ಟಿಯಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಸಾಹಿತಿ ಪ್ರೊ. ಸಿ. ಶಿವಲಿಂಗಪ್ಪ, ಅಕಾಡೆಮಿಕ್ ರಿಜಿಸ್ಟ್ರಾರ್ ಡಾ. ಚಂದ್ರಿಕಾ ಎನ್., ಡಾ. ಮೇಘ ಜಿ.ಹೆಚ್, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Share This Article
error: Content is protected !!
";