ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹಾಲಿನ ಪ್ರೋತ್ಸಾಹ ಧನವನ್ನು 5 ರೂ ನಿಂದ 7 ರೂಗೆ ಹೆಚ್ಚಿಸುವ ಕುರಿತು ಚಿಂತನೆ ನಡೆದಿದ್ದು,ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮಹತ್ವದ ಬದಲಾವಣೆಗಳನ್ನು ತರಲು ಬಮೂಲ್ಕಾರ್ಯೋನ್ಮುಖವಾಗಿದೆ. ರೈತರು ಯಾವುದೇ ಕಾರಣಕ್ಕೂ ಹೈನುಗಾರಿಕೆಯಿಂದ ಹಿಂದೆ ಸರಿಯಬಾರದು ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದ್ದಾರೆ.
ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ, ಕೊನಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಸಹಯೋಗದಲ್ಲಿ ತಾಲೂಕು ಮಟ್ಟದ ಹಸುಗಳ ಹಾಲು ಕರೆಯುವ ಸ್ಪರ್ಧೆ ಹಾಗೂ ಮಿಶ್ರ ತಳಿ ಕರುಗಳ ಪ್ರದರ್ಶನ ಹಾಗೂ ಡೈರಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು ಇಡೀ ದೇಶದಲ್ಲಿ ಹಾಲಿಗೆ 5 ರೂ ಪ್ರೋತ್ಸಾಹ ಧನ ನೀಡುತ್ತಿರುವ ರಾಜ್ಯ ನಮ್ಮದಾಗಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಹಾಲಿಗೆ ಹೆಚ್ಚಿನ ದರ ನೀಡಲಾಗುತ್ತಿದೆ. ಆದರೆ ಹೈನುಗಾರಿಕೆಗೆ ನಷ್ಟದ ಕಾರಣ ಒಡ್ಡಿ ರೈತರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ.
ಹೈನುಗಾರಿಕೆಯಿಂದ ಸ್ವಾವಲಂಭಿ ಬದುಕು ನಡೆಸಲು ವಿಪುಲ ಅವಕಾಶಗಳಿವೆ. ಇದು ಸ್ವಯಂ ಉದ್ಯೋಗಕ್ಕೆ ದಾರಿಯಾಗಲಿದ್ದು, ನಿರುದ್ಯೋಗ ಸಮಸ್ಯೆ ನಿವಾರಿಸಲು ನೆರವಾಗುತ್ತದೆ. ಆದರೆ ಬೇಸಿಗೆ ಹಾಗೂ ಇತರ ಕಾರಣಗಳಿಂದಾಗಿ ಬಮೂಲ್ನಲ್ಲಿ ಹಾಲು ಉತ್ಪಾದನೆ 18 ಲಕ್ಷದಿಂದ 15 ಲಕ್ಷ ಲೀಟರ್ ಗಳಿಗೆ ಇಳಿದಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ 1.80 ಲಕ್ಷ ಲೀ. ನಿಂದ 1.05 ಲಕ್ಷ ಲೀಗೆ ಇಳಿದಿದೆ. ಇಂದು ನಂದಿನಿ ಬ್ರಾಂಡ್ದಿನೇ ದಿನೇ ಪ್ರಖ್ಯಾತಿ ಹೊಂದುತ್ತಿದ್ದು, ಅದಕ್ಕೆ ರೈತರ ಪರಿಶ್ರಮ ಕಾರಣವಾಗಿದೆ. ಗುಣಮಟ್ಟವನ್ನು ಕಾಪಾಡಿಕೊಳ್ಳುವ ಮೂಲಕ ಸಂಸ್ಥೆಯ ಏಳಿಗೆಗೆ ಶ್ರಮಿಸಿದರೆ ಅದರ ಲಾಭ ಸಹ ರೈತರ ಪಾಲಾಗುತ್ತಿದೆ.
ಹಾಲಿನ ಉತ್ಪಾದನೆ ಹೆಚ್ಚಿಸಲು ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ ಹೊಸದಾಗಿ ಹಸುಗಳನ್ನು ಖರೀದಿಸಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಪ್ರತಿ ಹಾಲು ಉತ್ಪಾದಕರ ಸಹಕಾರ ಸಂಘದ ವ್ಯಾಪ್ತಿಲ್ಲಿನ 25 ಜನ ರೈತರಿಗೆ ಶೇ.3ರ ಬಡ್ಡಿ ದರದಲ್ಲಿ 1.60 ಲಕ್ಷ ದಿಂದ 15 ಲಕ್ಷದವರೆಗೂ ಸಾಲ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಹಸುಗಳು ಹೆಣ್ಣು ಕರು ಹಾಕಿದಾಗ ರೈತರಿಗೆ ಹೆಚ್ಚಿನ ಲಾಭವಿದ್ದು, ಈ ದಿಸೆಯಲ್ಲಿ ಕಡ್ಡಾಯವಾಗಿ ಹೆಣ್ಣು ಕರುಹಾಕುವ ಕುರಿತಾಗಿ, ತಳಿಗಳನ್ನು ಸಜ್ಜುಗೊಳಿಸಲು ಸರ್ವೆ ಮಾಡಲಾಗುತ್ತಿದೆ.
ರೈತರಿಗೆ ಹಸಿ ಮೇವು ಒದಗಿಸುವುದು, 1 ಲಕ್ಷ ಕೌ ಮ್ಯಾಟ್ಗಳನ್ನು ಹಾಗು ಹಾಲು ಕರೆಯುವ ಯಂತ್ರಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ . ನಾಟಿ ಹಸು ಹಾಲಿಗೆ ಲೀಟರ್ಗೆ 90 ರೂ ನೀಡಲಾಗುತ್ತಿದ್ದು, ನಾಟಿ ಹಸು ಹಾಲಿನ ಸಂಗ್ರಹಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ರೈತರಿಗೆ 5 ದಿನ ಗಿಣ್ಣಿನ ಹಾಲು ಪಡೆಯಲು ಮಾರುಕಟ್ಟೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ಹಾಲು ಕರೆಯುವ ಸ್ಪರ್ಧೆಯಲ್ಲಿ ಒಟ್ಟು 36 ಹಸುಗಳು ಭಾಗವಹಿಸಿದ್ದವು. 45 ಲೀಟರ್ ಹಾಲು ಕರೆದ ಹಸುವಿಗೆ ಪ್ರಥಮ ಬಹುಮಾನ, 39 ಲೀಟರ್ ಹಾಲು ಕರೆದ ಹಸುವಿಗೆ ದ್ವಿತೀಯ ಬಹುಮಾನ ಹಾಗೂ 30 ಲೀಟರ್ ಹಾಲು ಕರೆದ ಹಸುವಿಗೆ ತೃತೀಯ ಬಹುಮಾನ ನೀಡಲಾಯಿತು. ವಿಜೇತ ಹಸುಗಳ ಮಾಲೀಕರನ್ನು ಸನ್ಮಾನಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಮೂಲ್ ನಿರ್ದೇಶಕ ಬಿ.ಸಿ.ಆನಂದಕುಮಾರ್, ಬಮೂಲ್ ನಲ್ಲಿ ಹಾಲಿನ ಪಾತ್ರದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಪಾತ್ರವೂ ಮಹತ್ವದ್ದಾಗಿದೆ. ತಾಲೂಕಿನಲ್ಲಿ ನಾಲ್ಕು ವರ್ಷಗಳ ಹಿಂದೆಯೇ ಹಾಲಿನ ಟೆಟ್ರಾಪ್ಯಾಕ್ ಸೇರಿದಂತೆ ನಂದಿನಿಯ ಇತರೆ ಉತ್ಪನ್ನಗಳನ್ನು ತಯಾರಿಸಲು 15 ಎಕರೆ ಜಮೀನು ಖರೀದಿಸಲಾಗಿದೆ. ಬಮೂಲ್ ವತಿಯಿಂದ ಉತ್ಪನ್ನ ತಯಾರಿಕ ಘಟಕ ಸ್ಥಾಪನೆಗೆ ಅನುದಾನ ನೀಡಬೇಕು. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಗಳಾಗಿ ಅದನ್ನು ಉದ್ಘಾಟಿಸಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿಯೂ ಹಾಲಿನ ಉತ್ಪನ್ನಗಳ ಘಟಕ ಸ್ಥಾಪಿಸಲು ಜಮೀನುಗಳನ್ನು ಮೀಸಲಿರಿಸಲಾಗಿದೆ. ಈ ಕುರಿತು ಬಮೂಲ್ಕಾರ್ಯಕಾರಿ ಸಭೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ರೈತರು ಹಸುಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಯಾವುದೇ ಆತಂಕವಿಲ್ಲದೇ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಶಾಸಕ ಧೀರಜ್ಮುನಿರಾಜು ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸಾಕಾರಗೊಳಿಸುವಲ್ಲಿ ಹಾಗೂ ಬಮೂಲ್ನಲ್ಲಿ ವಿವಿಧ ಯೋಜನೆಗಳನ್ನು ಜಾರಿಗೆ ತರಲು ಡಿ.ಕೆ.ಸುರೇಶ್ಶ್ರಮಿಸುತ್ತಿದ್ದಾರೆ. ತಾಲೂಕಿನ ಕೂಗೇನಹಳ್ಳಿಯಲ್ಲಿ ಪ್ಯಾಕೇಜಿಂಗ್ ಘಟಕಕ್ಕೆ ಬಮೂಲ್ನಿಂದ ಅನುದಾನ ನೀಡಿ, ಘಟಕ ಆರಂಭಿಸಬೇಕಿದೆ ಎಂದು ಮನವಿ ಮಾಡಿದರು.
ಕೊನಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆರ್.ಮುನಿರಾಜು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸದ ಡಾ.ಕೆ.ಸುಧಾಕರ್, ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಬಿ.ಸಿ.ಆನಂದ್ಕುಮಾರ್, ಮಾಜಿ ಶಾಸಕ ಟಿ.ವೆಂಕಟರಮಣಯ್ಯ,
ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ಟಿ.ಎ.ಪಿ.ಎಂಸಿ.ಎಸ್ ಅಧ್ಯಕ್ಷ ಸಿದ್ದರಾಮಯ್ಯ, ನಿರ್ದೇಶಕ ವಿಶ್ವಾಸ್ಹನುಮಂತೇಗೌಡ, ಭಾರತ ಸೇವಾ ದಳದ ಜಿಲ್ಲಾಧ್ಯಕ್ಷ ಜಿ.ಲಕ್ಷ್ಮೀಪತಿ, ಕೊನಘಟ್ಟ ಎಂ.ಪಿಸಿಎಸ್ಉಪಾಧ್ಯಕ್ಷ ಅಂಬರೀಷ್, ಕಾರ್ಯ ನಿರ್ವಾಹಕ ಕೆ.ಆರ್.ಸುಬ್ಬೇಗೌಡ ಸೇರಿದಂತೆ ಬಮೂಲ್ಹಾಗೂ ಕೊನಘಟ್ಟ ಎಂ.ಪಿಸಿಎಸ್ನಿರ್ದೇಶಕರು ಹಾಜರಿದ್ದರು.

