ವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಸುಕ್ಷೇತ್ರ ಮಠದಲ್ಲಿ ೫೨ ನೇ ವರ್ಷದ ವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ-೨೦೨೬, ವನಕಲ್ಲುಶ್ರೀ ಪ್ರಶಸ್ತಿ ಪ್ರದಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಂಸ್ಕೃತಿ ಉತ್ಸವ ಫೆ.೨೬ ರಿಂದ ಮಾ.೧ ರವರೆಗೆ ನಡೆಯಲಿದೆ ಎಂದು ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಡಾ.ಬಸವರಮಾನಂದ ಮಹಾಸ್ವಾಮೀಜಿ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ ರಾಜ್ಯದ ನಾನಾ ಭಾಗಗಳಿಂದ ೩೦ ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲಿವೆ. ವಿಶ್ವವಿದ್ಯಾನಿಲಯಗಳ ಸಂಶೋಧಕರು, ವಿವಿಧ ಮಠಾಧೀಶರುಗಳು, ಕವಿಗಳು ಪಾಲ್ಗೊಳ್ಳುವರು. ಕೇಂದ್ರ ಸಚಿವ ವಿ.ಸೋಮಣ್ಣನವರಿಗೆ ವನಕಲ್ಲುಶ್ರೀ ಪ್ರಶಸ್ತಿ, ಆಹಾರ ಸಚಿವ ಕೆ.ಹೆಚ್.ಮುನಿಯಪ್ಪನವರಿಗೆ ಜಗಜ್ಯೋತಿ ಪ್ರಶಸ್ತಿ, ವಿಶ್ರಾಂತ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಿ.ಚಿಕ್ಕಪ್ಪಯ್ಯನವರಿಗೆ ವಿಶ್ವಜ್ಯೋತಿ ಪ್ರಶಸ್ತಿ, ಸಿದ್ದಯೋಗಶ್ರಿ ಪ್ರಶಸ್ತಿಯನ್ನು ಸರ್ ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಎಚ್.ಟಿ.ವೆಂಕಟೇಶಮೂರ್ತಿ, ವಿಧಾನಪರಿಷತ್ ಮಾಜಿ ಉಪಸಭಾಪತಿ ಎಸ್.ಎಲ್.ಭೋಜೇಗೌಡರಿಗೆ ಬಾಲಗಂಗಾಧರನಾಥನಿರ್ಮಲ ಜ್ಯೋತಿ ಪ್ರಶಸ್ತಿ, ವಿ.ವೀರೇಶ್‌ರವರಿಗೆ ಶರಣಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಹೇಳಿದರು. ೪ ದಿನಗಳ ಕಾಲ ಭಕ್ತರಿಗೆ ದಾಸೋಹದ ವ್ಯವಸ್ಥೆಯಿರುತ್ತದೆಂದರು.

- Advertisement - 

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಮಾತನಾಡಿ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಸುಕ್ಷೇತ್ರ ಮಠದಿಂದ ನಡೆಯುತ್ತಿರುವ ೫೨ ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ದೊಡ್ಡ ಇತಿಹಾಸವಿದೆ. ಉತ್ತರ ಕರ್ನಾಟಕವಲ್ಲದೆ ದಕ್ಷಿಣ ಕರ್ನಾಟಕದ ಅನನ್ಯ ವಿರಕ್ತಪೀಠ, ತ್ರಿವಿಧ ದಾಸೋಹಿ ಮಠ, ಐದು ಸಾವಿರ ವರ್ಷಗಳ ಭಾರತೀಯ ಸಂಸ್ಕೃತಿಯನ್ನು ಕಾಪಾಡಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಲೆಮಾರಿ, ಅರೆಅಲೆಮಾರಿ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಓ.ಪ್ರತಾಪ್‌ಜೋಗಿ ಮಾತನಾಡಿ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠ ಮೊದಲಿನಿಂದಲೂ ಅಲೆಮಾರಿ ಮತ್ತು ಅರೆಅಲೆಮಾರಿ ಮಕ್ಕಳ ಉಚಿತ ಶಿಕ್ಷಣಕ್ಕೆ ಒತ್ತು ಕೊಡುತ್ತ ರಾಜ್ಯಕ್ಕೆ ಮಾದರಿಯೆನಿಸಿಕೊಂಡಿದೆ. ಈ ಜಾತ್ರಾ ಮಹೋತ್ಸವಕ್ಕೆ ಅಲೆಮಾರಿ, ಅರೆಅಲೆಮಾರಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

- Advertisement - 

ನಿವೃತ್ತ ಪ್ರಾಚಾರ್ಯ ಪಾಂಡುರಂಗಪ್ಪ ಮಾತನಾಡಿ ಜಾತ್ಯಾತೀತ ಪರಂಪರೆಯುಳ್ಳ ಈ ಮಠ ನಿರಾಶ್ರಿತರು, ನಿರ್ಗತಿಕ ಮಕ್ಕಳಿಗೂ ಶಿಕ್ಷಣ, ದಾಸೋಹ ಒದಗಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಸಾಮಾಜಿಕ ಕಳಕಳಿಯುಳ್ಳ ವನಕಲ್ಲೂ ಮಲ್ಲೇಶ್ವರ ಮಹಾಸಂಸ್ಥಾನ ಮಠ ಸರ್ವ ಜನಾಂಗದ ಏಳಿಗೆಗೆ ಶ್ರಮಿಸುತ್ತಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ಟಿ.ಶಫಿವುಲ್ಲಾ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Share This Article
error: Content is protected !!
";