ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ನಂತರ ವಿವಿಧ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರಾಗಿರುವ ಒಟ್ಟು 54 ಮಂದಿಗೆ ರಾಜ್ಯ ಸರ್ಕಾರ ಸಚಿವ ಸ್ಥಾನಮಾನ ನೀಡಿ ಆದೇಶಿಸಿತ್ತು.
ಆ ಪೈಕಿ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿ ನಿಯಮಿತ ಅಧ್ಯಕ್ಷರಾಗಿರುವ ಭೂ ಕಾಂತ್ ಅವರಿಗೂ ರಾಜ್ಯ ಸಚಿವ ಸ್ಥಾನಮಾನ ನೀಡಿದ್ದರ ವಿರುದ್ಧ ಕಾಂಗ್ರೆಸ್ ಪಾಳಯದಿಂದ ಭಾರೀ ಆಕ್ಷೇಪ ಕೇಳಿಬಂದಿತ್ತು.
ಬಿಜೆಪಿ ನಾಯಕನಿಗೆ ಕಾಂಗ್ರೆಸ್ ಸರ್ಕಾರದಿಂದ ಈ ಸ್ಥಾನ ಮಾನ ನೀಡಿರೋದು ಎಷ್ಟು ಸರಿ ಎಂಬ ವಿರೋಧ ಕೇಳಿಬಂದ ಬೆನ್ನಲ್ಲೇ ಭೂಕಾಂತ್ಗೆ ನೀಡಲಾಗಿದ್ದ ಸಚಿವ ಸಂಪುಟದ ಸ್ಥಾನಮಾನವನ್ನು ಸರ್ಕಾರ ಈಗ ಹಿಂಪಡೆದು ಆದೇಶಿಸಿದೆ. ಕಾರ್ಯಕರ್ತರ ಅಸಮಾಧಾನದ ಬೆನ್ನಲ್ಲೇ ಈ ತೀರ್ಮಾನ ಮಾಡಲಾಗಿದೆ ಎನ್ನಲಾಗಿದೆ.
ಭೂಕಾಂತ್ ಅವರ ಪತ್ನಿ ಕೂಡ ಬಿಜೆಪಿಯಿಂದ ಜಿಲ್ಲಾ ಪಂಚಾಯತಿ ಸದಸ್ಯೆಯಾಗಿದ್ದರು. ಹೀಗಿರುವಾಗ ಅವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿರುವ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇಲ್ಲಿಯವರೆಗೂ ಪ್ರಮುಖ ನಿಗಮಗಳ ಅಧ್ಯಕ್ಷರಾಗಿರುವ ಶಾಸಕರಿಗಷ್ಟೇ ದೊರೆಯುತ್ತಿದ್ದ ಈ ಸ್ಥಾನಮಾನವನ್ನು ಎಲ್ಲ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರಿಗೂ ಅನ್ವಯಿಸುವಂತೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ ಸರಿ. ಆದರೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿರುವಾಗ ಬಿಜೆಪಿ ಮುಖಂಡನಿಗೆ ಈ ಸ್ಥಾನಮಾನ ನೀಡಿದ್ದು ಯಾಕೆ ಎಂದು ಪ್ರಶ್ನಿಸಲಾಗಿತ್ತು.
ಡಿ.ಕೆ. ಸುರೇಶ್ ಕಿಡಿ-
ಕಾರ್ಯಕರ್ತರು ಮಾತ್ರವಲ್ಲದೆ ತಮ್ಮದೇ ಸರ್ಕಾರದ ವಿರುದ್ಧ ಮಾಜಿ ಸಂಸದ ಡಿ.ಕೆ. ಸುರೇಶ್ ಕೂಡ ಲೇವಡಿ ಮಾಡದ್ದರು. ನಮ್ಮದು ಸರ್ವಧರ್ಮ ಪಾಲಿಸಿಯಾಗಿದ್ದು, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲರೂ ನಮ್ಮ ಪಕ್ಷದಲ್ಲೇ ಇದ್ದಾರೆ. ಹೀಗಾಗಿ ಎಲ್ಲ ವಿಚಾರದಲ್ಲೂ ಹೊರಗಿನಿಂದ ಬಂದ ಅತಿಥಿಗಳಿಗೆ ಮೊದಲ ಆದ್ಯತೆ ನೀಡಿ, ಕಾಂಗ್ರೆಸ್ ಕಾರ್ಯಕರ್ತರಿಗೆ ಎರಡನೇಆದ್ಯತೆ ನೀಡುತ್ತೇವೆ ಎಂದು ಪರೋಕ್ಷವಾಗಿ ಡಿಕೆ ಸುರೇಶ್ ಅವರು ತಿವಿದಿದ್ದರು.

