ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಸಾವು, 262 ಕೋಟಿ ಪರಿಹಾರ ನೀಡಲು ಮುಂದಾದ ಪೊಲೀಸ್ ಇಲಾಖೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹೈದರಾಬಾದ್:
ಅಮೆರಿಕದಲ್ಲಿ ಪೊಲೀಸ್ ಅಧಿಕಾರಿಯ ನಿರ್ಲಕ್ಷ್ಯದಿಂದ ಅಪಘಾತ ಒಂದರಲ್ಲಿ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ಕುಟುಂಬದವರಿಗೆ 262 ಕೋಟಿ ರೂ.ಪರಿಹಾರ ನೀಡಲು ಅಲ್ಲಿನ ಪೊಲೀಸ್ ಇಲಾಖೆ ಮುಂದಾಗಿದೆ ಎನ್ನಲಾಗಿದೆ.

ಅಮೇರಿಕಾದ ಸಿಯಾಟಲ್ ಪೊಲೀಸ್ ಇಲಾಖೆ ಮೃತಳ ಕುಟುಂಬಕ್ಕೆ 29 ಮಿಲಿಯನ್ ಡಾಲರ್ ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 262 ಕೋಟಿ ರೂ. ಪರಿಹಾರ ನೀಡಲು ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ.

- Advertisement - 

ಜಾಹ್ನವಿ ಕಂದುಲಾ ಅವರ ಸಾವು ತುಂಬಾ ದುಃಖಕರವಾಗಿದೆ. ಈ ಇತ್ಯರ್ಥವು ಅವರ ಕುಟುಂಬಕ್ಕೆ ಸ್ವಲ್ಪ ಪರಿಹಾರ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಸಿಯಾಟಲ್ ವಕೀಲೆ ಎರಿಕಾ ಇವಾನ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅದಾಗ್ಯೂ ಈ ಬಗ್ಗೆ ಜಾಹ್ನವಿ ಕುಟುಂಬದ ಪರವಾಗಿ ವಕೀಲರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಪ್ರಕರಣದಲ್ಲಿ ಪರಿಹಾರ ಒಪ್ಪಂದಕ್ಕಾಗಿ ಎರಡೂ ಕಡೆಯವರು ಕಳೆದ ವಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ:
2021ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಜಾಹ್ನವಿ(23) ತೆರಳಿದ್ದರು. ಅವರು ಸ್ನಾತಕೋತ್ತರ ಪದವಿಗಾಗಿ ಸೌತ್ ಲೇಕ್ ಯೂನಿಯನ್‌ನಲ್ಲಿರುವ ಈಶಾನ್ಯ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಂಡಿದ್ದರು.

- Advertisement - 

ಜನವರಿ-23, 2023ರ ರಾತ್ರಿ, ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಪೊಲೀಸ್ ಗಸ್ತು ವಾಹನವು ಅವರಿಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಜಾಹ್ನವಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಈ ಅಪಘಾತಕ್ಕೆ ಕಾರಣವಾದ ಪೊಲೀಸ್ ಅಧಿಕಾರಿ ಕೆವಿನ್ ಡೇವಿ ಅವರು ಜಾಹ್ನವಿ ಸಾವಿನ ಬಗ್ಗೆ ಹಾಸ್ಯ ಮಾಡುವ ಮೂಲಕ ಆ ಸಮಯದಲ್ಲಿ ತೀವ್ರ ವಿವಾದಕ್ಕೆ ಒಳಗಾಗಿದ್ದರು.

ಆಕೆ ಸಾಮಾನ್ಯ ವ್ಯಕ್ತಿ ಈ ಸಾವು ಯೋಗ್ಯವಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದ ಮಾತುಗಳು ಅವರ ಬಾಡಿ ಕ್ಯಾಮೆರಾದಲ್ಲಿ ದಾಖಲಾಗಿದ್ದವು. ಆ ಸಮಯದಲ್ಲಿ ಭಾರತ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
ಕೆವಿನ್ ಅವರ ವರ್ತನೆಯ ಬಗ್ಗೆ ಅಮೆರಿಕದಲ್ಲೂ ಕೂಡಾ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಇನ್ನು ಅವರ ವರ್ತನೆಯ ವಿಚಾರವಾಗಿ ಅವರನ್ನು ಕರ್ತವ್ಯದಿಂದ ತೆಗೆದುಹಾಕಲಾಗಿತ್ತು.

ಕೆವಿನ್ ಗಂಟೆಗೆ 119 ಕಿಲೋಮೀಟರ್ ವೇಗದಲ್ಲಿ ಕಾರನ್ನು ಚಲಾಯಿಸಿಕೊಂಡು ಬಂದು ಜಾಹ್ನವಿಗೆ ಡಿಕ್ಕಿ ಹೊಡೆದಿದ್ದರು. ಇದರಿಂದಾಗಿ ಜಾಹ್ನವಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಷ್ಟೇ ಅಲ್ಲ ಡಿಕ್ಕಿಯ ರಭಸಕ್ಕೆ ಅವಳು ಸ್ಥಳದಿಂದ 100 ಅಡಿ ದೂರಕ್ಕೆ ಹಾರಿ ಬಿದ್ದಿದ್ದಳು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದ್ದವು.

ಈ ಬಗ್ಗೆ ಸಿಯಾಟಲ್ ಪೊಲೀಸ್ ಇಲಾಖೆಯ ಮುಖ್ಯಸ್ಥೆ ರಾಹರ್ ಪ್ರತಿಕ್ರಿಯಿಸಿದ್ದು, ಜಾಹ್ನವಿ ಸಾವಿನ ಬಗ್ಗೆ ಕೆವಿನ್ ಅವರ ಹೇಳಿಕೆಗಳು ಅವರ ಕುಟುಂಬಕ್ಕೆ ತೀವ್ರ ನೋವುಂಟು ಮಾಡಿವೆ. ಅವರನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಕೆವಿನ್ ಅವರ ಮಾತುಗಳು ಸಿಯಾಟಲ್ ಪೊಲೀಸ್ ಇಲಾಖೆಯ ಮೇಲೆ ಶಾಶ್ವತ ಕಳಂಕ ತಂದಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು.

Share This Article
error: Content is protected !!
";