ಆಧುನಿಕತೆಯ ಅಲೆಗಳಲ್ಲಿ ಮುಳುಗುತ್ತಿರುವ ಹರಿಕಥೆ ಪರಂಪರೆ: ಕುಮಾರ್ ಕಳವಳ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಹರಿಕಥೆ ಕಥೆ ಹೇಳುವಿಕೆ
, ಸಂಗೀತ, ನೃತ್ಯ ಮತ್ತು ನಾಟಕೀಯ ಅಭಿನಯಗಳ ಸಮನ್ವಯದಿಂದ ರೂಪುಗೊಂಡಿರುವ ವಿಶಿಷ್ಟ ಹಿಂದೂ ಸಾಂಪ್ರದಾಯಿಕ ಕಲೆ. ಹರಿಯ ಕಥೆ ಎಂಬ ಅರ್ಥವನ್ನು ಹೊಂದಿರುವ ಈ ಕಲೆಯ ಪ್ರಧಾನ ಉದ್ದೇಶ ಜನರಲ್ಲಿ ಭಕ್ತಿ, ನೀತಿ ಮತ್ತು ಧರ್ಮಬೋಧನೆಯನ್ನು ಬೆಳೆಸುವುದಾಗಿದೆ. ಸರಳ ಭಾಷೆ, ಸಂಗೀತಾತ್ಮಕ ವಾಚನ ಹಾಗೂ ಹಾಸ್ಯವ್ಯಂಗ್ಯದ ಸ್ಪರ್ಶದಿಂದ ಕಥೆಯನ್ನು ಜೀವಂತಗೊಳಿಸುವ ಹರಿಕಥೆ, ಗ್ರಾಮೀಣ ಜನಜೀವನದೊಂದಿಗೆ ಬೆಸೆದುಕೊಂಡು ಜನಮನ ಗೆದ್ದಿದೆ ಎಂದು ಮಾಜಿ ನಗರಸಭಾ ಸದಸ್ಯ ಹಿರಿಯ ಪತ್ರಕರ್ತ ಸಿ. ಎನ್ ಕುಮಾರ್ ಹೇಳಿದರು.

ತಾಲೂಕಿನ ಮಲ್ಲಾಡಿಹಳ್ಳಿ ಸೇವಾಶ್ರಮದ ಸಭಾಂಗಣದಲ್ಲಿ ಶನಿವಾರ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತವಾಗಿ ಆಯೋಜಿಸಿದ ಹರಿಕಥೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

- Advertisement - 

ಸಾಮಾನ್ಯವಾಗಿ ಏಕವ್ಯಕ್ತಿ ಪ್ರದರ್ಶನವಾಗುವ ಹರಿಕಥೆಯಲ್ಲಿ ಕಥನಕಾರರನ್ನು ದಾಸಅಥವಾ ಕೀರ್ತನಕಾರ ಎಂದು ಕರೆಯಲಾಗುತ್ತದೆ. ಕೈಯಲ್ಲಿ ತಾಳ ಅಥವಾ ಚಿಟಿಕೆ ಹಿಡಿದು ಲಯಬದ್ಧವಾಗಿ ಕಥನ ಮಾಡುವ ಕಲಾವಿದರಿಗೆ ಮೃದಂಗ, ತಬಲ, ಹಾರ್ಮೋನಿಯಂ ಅಥವಾ ಪಿಟೀಲು ವಾದಕರು ಸಂಗೀತ ಸಾಥ್ ನೀಡುವುದು ಈ ಕಲೆಯ ವಿಶೇಷತೆ. ಹಾಡುಮಾತಿನ ಸಮನ್ವಯ ಪ್ರೇಕ್ಷಕರನ್ನು ಕಥೆಯೊಳಗೆ ಸೆಳೆಯುವ ಅಪಾರ ಶಕ್ತಿಯನ್ನು ಹೊಂದಿದೆ ಎಂದು ತಿಳಿಸಿದರು.

ವಿಷಯವಸ್ತುವಿನಲ್ಲಿ ಹರಿಕಥೆ ಅಪಾರ ಸಮೃದ್ಧಿಯಿದೆ. ಪುರಾಣಗಳು, ರಾಮಾಯಣ, ಮಹಾಭಾರತದ ಪ್ರಸಂಗಗಳು ಹಾಗೂ ಮಹಾನ್ ಸಂತರ ಜೀವನಚರಿತ್ರೆಗಳು ಇದರ ಆಧಾರ. ಧಾರ್ಮಿಕ ಕಥೆಗಳ ಮೂಲಕ ನೀತಿಬೋಧನೆ ಹಾಗೂ ಮಾನವೀಯ ಮೌಲ್ಯಗಳ ಸಾರವನ್ನು ಪ್ರೇಕ್ಷಕರಿಗೆ ತಲುಪಿಸಲಾಗುತ್ತದೆ. ಹೀಗಾಗಿ ಹರಿಕಥೆ ಕೇವಲ ಮನರಂಜನೆಯ ಕಲೆ ಅಲ್ಲ ಸಮಾಜಬೋಧನೆಯ ಪರಿಣಾಮಕಾರಿ ಸಾಧನವೂ ಆಗಿದೆ ಎಂದು ಹೇಳಿದರು.

- Advertisement - 

ಜಾನುಕೊಂಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಸ್ವಾಮಿ ಮಾತನಾಡಿ ಸಾಮಾಜಿಕ ದೃಷ್ಟಿಯಿಂದಲೂ ಹರಿಕಥೆಗೆ ಮಹತ್ವವಿದೆ. ಹಿಂದಿನ ಕಾಲದಲ್ಲಿ ಇದು ಧಾರ್ಮಿಕ ಪ್ರಚಾರಕ್ಕೆ ಮಾತ್ರ ಸೀಮಿತವಾಗಿರದೆ, ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ದೇಶಭಕ್ತಿ ಮೂಡಿಸಲು ಹಾಗೂ ಸಾಮಾಜಿಕ ಜಾಗೃತಿ ಹೆಚ್ಚಿಸಲು ಬಳಸಲ್ಪಟ್ಟಿತು. ಅಕ್ಷರಜ್ಞಾನ ಕಡಿಮೆ ಇದ್ದ ಕಾಲದಲ್ಲೂ ಕಥೆ ಮತ್ತು ಸಂಗೀತದ ಮೂಲಕ ಸಂದೇಶ ತಲುಪಿಸಿದ ಹರಿಕಥೆ, ಇಂದಿಗೂ ಭಾರತೀಯ ಸಂಸ್ಕೃತಿಯ ಜೀವಂತ ಪ್ರತೀಕವಾಗಿ ಉಳಿದಿದೆ ಎಂದರು.

ಮಡಿಲು ಸಂಸ್ಥೆಯ ಕಾರ್ಯದರ್ಶಿ ಆನಂದ್ .ಡಿ ಆಲಘಟ್ಟ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ವೇದಿಕೆ ಕಲ್ಪಿಸುವುದು ಮಡಿಲು ಸಂಸ್ಥೆಯ ಗುರಿಯಾಗಿದೆ. ಹರಿಕಥೆಯಂತಹ ಕಲೆಗಳನ್ನು ಉಳಿಸಲು ವಿದ್ಯಾರ್ಥಿಗಳ ಸಹಭಾಗಿತ್ವ ಅಗತ್ಯ ಹಾಗೂ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪರಂಪರ ಕಲೆಗಳನ್ನು ಉಳಿಸುವ ಹೊಣೆ ಸಮಾಜದ ಮೇಲಿದೆ. ನಮ್ಮ ಮಡಿಲು ಸಂಸ್ಥೆಯು ಭವಿಷ್ಯದಲ್ಲಿ ಸಂಸ್ಕೃತಿ ಉಳಿವಿಗೆ ಮಹತ್ವದ ಪಾತ್ರವಹಿಸುವ ನಿರೀಕ್ಷೆಯಿದೆ‌ಎಂದರು.

ನಮ್ಮ ಉದ್ದೇಶ ಕೇವಲ ಕಾರ್ಯಕ್ರಮಗಳನ್ನು ಆಯೋಜಿಸುವುದಲ್ಲ, ಜನರಲ್ಲಿ ಸಾಂಸ್ಕೃತಿಕ ಜಾಗೃತಿ ಮೂಡಿಸುವುದು. ಯುವಕರು ಮುಂದೆ ಬಂದು ಕಲೆ, ಸಾಹಿತ್ಯ ಹಾಗೂ ಸಮಾಜ ಸೇವೆಯತ್ತ ಆಸಕ್ತಿ ತೋರಬೇಕು ಎಂದು ಹೇಳಿದರು. ಗ್ರಾಮೀಣ ಭಾಗಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು, ಮಕ್ಕಳಿಗೆ ಪಾಠ್ಯೇತರ ಚಟುವಟಿಕೆಗಳ ಮೂಲಕ ಕಲೆಯನ್ನು ಪರಿಚಯಿಸುವುದು, ಹಿರಿಯರ ಅನುಭವಗಳನ್ನು ಯುವ ಪೀಳಿಗೆಗೆ ತಲುಪಿಸುವ ಪ್ರಯತ್ನಗಳು ಸಂಸ್ಥೆಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿವೆ ಎಂದರು.

ವಿದ್ವಾನ್ ಡಾ.ಶಂಕರ ಭಟ್ ಉಂಚಳ್ಳಿ ಅವರ ತಂಡದವರಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತವಾಗಿ ಹರಿಕಥೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮ ವ್ಯವಸ್ಥಾಪಕ ಚಂದ್ರಪ್ಪ, ಮಡಿಲು ಸಂಸ್ಥೆ ಸದಸ್ಯರಾದ ಪ್ರದೀಪ್ ಮಹಾಂತೇಶ್ ದ್ಯಾಮ್ ಕುಮಾರ್, ಪ್ರವೀಣ್ ದರ್ಶನ್ ಹಾಗೂಶಿಕ್ಷಕರಾದ  ಶಂಕರ್ ಮೂರ್ತಿ,ಸೋಮಶೇಖರ್, ಎಸ್.ಎಂ ಗೌಡ, ಮೋಹನ್ ಕುಮಾರ್, ಹರೀಶ್ ಸ್ವಾಮಿ ದೈಹಿಕ ಶಿಕ್ಷಕ ತಾರಾನಂದ, ಮಡಿಲು ಸಂಸ್ಥೆ ಖಜಾಂಚಿ ಪ್ರದೀಪ್, ನಿರ್ದೇಶಕರಾದ ಮಹಾಂತೇಶ್ ಇತರರು ಇದ್ದರು.

 

Share This Article
error: Content is protected !!
";