ಭಾರಿ ದನಗಳ ಜಾತ್ರೆಗೆ ಚಾಲನೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಕಳೆದ ೭೦ವರ್ಷಗಳಿಂದ ನಡೆಯುತ್ತಿರುವ ಮುರುಘಾ ಪರಂಪರೆಯ ಪೀಠಾಧಿಪತಿ ಶ್ರೀ ಗುರುಪಾದ ಮುರುಘರಾಜೇಂದ್ರ ಸ್ವಾಮಿಗಳವರ ಹಾಗೂ ಮೈಲಾರಲಿಂಗೇಶ್ವರ ಸ್ವಾಮಿಯ ಸ್ಮರಣಾರ್ಥ ರಾಷ್ಟ್ರೀಯ ಹೆದ್ದಾರಿ ನಾಲ್ಕರ ದಾವಣಗೆರೆ ರಸ್ತೆಯ ಚಿತ್ರದುರ್ಗ ಹೊರವಲಯದ ಸೀಬಾರದಲ್ಲಿ ಈ ಬಾರಿಯೂ ೭೧ನೇ ವರ್ಷದ ಭಾರಿ ದನಗಳ ಜಾತ್ರೆಗೆ ರಥೋತ್ಸವ ನೆರವೇರಿಸುವ ಮೂಲಕ ನಿನ್ನೆ ಶಿವರಾತ್ರಿಯ ದಿನದಂದು ಭಕ್ತರ ಭಕ್ತಿಯಲ್ಲಿ ಚಾಲನೆ ನೀಡಲಾಯಿತು.

ಮುರುಘಾ ಪರಂಪರೆಯ ಸ್ವಾಮಿಗಳವರಲ್ಲಿ ಗುರುಪಾದ ಮುರುಘರಾಜೇಂದ್ರ ಸ್ವಾಮಿಗಳವರು ತಮ್ಮ ತಪಸ್ಸಶಕ್ತಿ, ಸಮಾಜ ಸುಧಾರಣೆಯ ಕೈಂಕರ್ಯ ಬಲದಿಂದ ಪೀಠಕ್ಕೆ ಘನತೆ ತಂದುಕೊಟ್ಟ ಪುಣ್ಯಪುರುಷರು. ಅವರ ಹೆಸರಿನಲ್ಲಿ ಶ್ರೀಮಠದ ವತಿಯಿಂದ ಜಾನುವಾರು ಜಾತ್ರೆ ಮಧ್ಯಕರ್ನಾಟಕದ ಚಿತ್ರದುರ್ಗದಲ್ಲಿ ೭೦ ವರ್ಷಗಳಿಂದ ಪ್ರತಿವರ್ಷ ನಡೆಯುತ್ತ ಬಂದಿದ್ದು ಕೃಷಿಕ ರೈತಾಪಿ ವರ್ಗಕ್ಕೆ ಸದುಪಯೋಗವಾಗಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ರಥೋತ್ಸವದಲ್ಲಿ ಅಲಂಕರಿಸಿದ್ದ ಸ್ವಾಮಿಗಳ ಭಾವಚಿತ್ರ ಹಾಗೂ ಮೈಲಾರಲಿಂಗೇಶ್ವರ ಉತ್ಸವಮೂರ್ತಿಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

- Advertisement - 

ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ರಥೋತ್ಸವಕ್ಕೆ ಚಾಲನೆ ನೀಡಿದರು.

ಇಂದು ಆರಂಭವಾಗಿರುವ ಜಾತ್ರೆಯು ಬರುವ ಮಾರ್ಚ್ ೧೦ರವರೆಗೆ ನಡೆಯಲಿದೆ. ಈ ಜಾತ್ರೆಯಲ್ಲಿ ರಾಜ್ಯ ಸೇರಿದಂತೆ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡುಗಳಿಂದ ರೈತರು ವಿವಿಧ ತಳಿಯ ರಾಸುಗಳನ್ನು ತಂದು ಕೊಡುವ-ತೆಗೆದುಕೊಳ್ಳುವ ವ್ಯಾಪಾರ ನಡೆಯುತ್ತದೆ ಎಂದು ಜಾತ್ರಾ ಸಮಿತಿ ಸದಸ್ಯ ಪ್ರಕಾಶ್ ಹೇಳಿದರು.

- Advertisement - 

ಸುಂದರ ಪರಿಸರ, ನೀರು, ನೆರಳು, ರಾತ್ರಿವೇಳೆ ಬೆಳಕು, ಪಶುವೈದ್ಯಕೀಯ ಸೌಲಭ್ಯ, ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲದಕ್ಕೂ ಪ್ರಾಶಸ್ತ್ಯ ತಾಣವಾಗಿದ್ದು, ಕೃಷಿಕರು ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಶಿಸ್ತು, ಸ್ವಚ್ಚತೆ, ಸಂಯಮದಿಂದ ನಡೆದುಕೊಳ್ಳಬೇಕೆಂದು ಜಾತ್ರಾ ಸಮಿತಿ ಸದಸ್ಯ ಸತೀಶ್ ಡಿ.ಎಂ. ಹೇಳಿದರು.

ಗುತ್ತಿನಾಡು, ಸೀಬಾರ ಸುತ್ತಮುತ್ತಲ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಉತ್ಸವಮೂರ್ತಿ ಹೊತ್ತ ರಥೋತ್ಸವವನ್ನು ಜಯಕಾರ ಹಾಕುತ್ತ ಎಳೆದರು. ಈ ಸಂದರ್ಭದಲ್ಲಿ ಬೃಹನ್ಮಠದ ವತಿಯಿಂದ ಸೂಕ್ತ ವ್ಯವಸ್ಥೆಯನ್ನು ಗ್ರಾಮಸ್ಥರುಗಳ ಅಪೇಕ್ಷೆಯಂತೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ಅವರು ವ್ಯವಸ್ಥೆ ಮಾಡಿದ್ದರು.

ಜಾತ್ರಾ ಸಮಿತಿ ಮುಖ್ಯಸ್ಥರುಗಳಾದ ಕುಮಾರ, ಜಯದೇವ ಗೌಡ್ರು, ಮುರಿಗೇಂದ್ರಪ್ಪ, ಜೆ.ಕೆ. ಶಿವಮೂರ್ತಿ, ಶಿವಲಿಂಗಪ್ಪ, ಚಿದಾನಂದಪ್ಪ, ನರಸಿಂಹಮೂರ್ತಿ, ಪುಟ್ಟಸ್ವಾಮಿ, ನರಸಿಂಹಮೂರ್ತಿ, ಗ್ರಾ.ಪಂ. ಸದಸ್ಯರಾದ ಶಂಕ್ರಮ್ಮ, ಕಲ್ಲೇಶ್, ಜಂಬುನಾಥ, ಜಿ.ಟಿ. ಲಿಂಗೇಶ್, ತಿಪ್ಪೇಸ್ವಾಮಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಸೇರಿದ್ದರು.

 

Share This Article
error: Content is protected !!
";