ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಿದ್ದಾರೆ ಅಂದ್ರೆ ಯಥಾಸ್ಥಿತಿ ಅಂತಲೇ ಅರ್ಥ, ಮುಂದೆ ಮಹತ್ವದ ರಾಜಕೀಯ ಬದಲಾವಣೆ ಆಗುತ್ತದೆ ಅಂತ ಅಂದುಕೊಂಡರೆ ಸುಳ್ಳು ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ಶಾಸಕರ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಜಣ್ಣ ಅವರು, ಬಜೆಟ್ ಮಂಡಿಸ್ತಾ ಇಲ್ವಾ ಸಿದ್ದರಾಮಯ್ಯ?. ಅಂದ್ರೆ ಯಥಾಸ್ಥಿತಿ ಅಂತಲೇ ಅರ್ಥ. ಸಿದ್ದರಾಮಯ್ಯ ಗಟ್ಟಿಯಾಗಿ ವಿಶ್ವಾಸದಲ್ಲಿದ್ದಾರೆ. ಬಜೆಟ್ ಮಂಡಿಸ್ತಿದ್ದಾರೆ ಅಂದ್ರೆ ಅಷ್ಟು ಕಾನ್ಫಿಡೆನ್ಸ್ ಇದೆ ಅಂತಾಯ್ತಲ್ಲ ಎಂದು ಹೇಳಿದರು.
ಶಾಸಕರ ವಿದೇಶ ಪ್ರವಾಸ ಕುರಿತು ಪ್ರತಿಕ್ರಿಯಿಸಿದ ರಾಜಣ್ಣ, ವಿದೇಶ ಪ್ರವಾಸದಲ್ಲಿ ಸದುದ್ದೇಶ ಇದ್ದರೆ ಹೋಗಿ ಬರಲಿ. ಅದನ್ನು ತಪ್ಪು ಎನ್ನುವುದು ಸರಿಯಲ್ಲ. ವಿದೇಶದಲ್ಲಿ ನಮಗೆ ಒಳ್ಳೆಯದಾಗುವ ಕೆಲವು ಸಂಗತಿಗಳು ಇರುತ್ತವೆ. ಅದನ್ನು ತಿಳಿದುಕೊಂಡು ಬಂದು ಇಲ್ಲಿ ಅಳವಡಿಸಿಕೊಂಡರೆ ಒಳ್ಳೆಯದೇ ಅಲ್ವಾ?. ಪ್ರಪಂಚದ ಯಾವ ಯಾವ ದೇಶಗಳಲ್ಲಿ ರೈತರಿಗೆ ಅನುಕೂಲ ಆಗುವ ಪದ್ದತಿ ಇರುತ್ತದೆಯೋ ಅದನ್ನು ಕಲಿತು ಬರಲಿ. ಯಾಕೆ ಪ್ರವಾಸನ್ನು ತಡೆಯುತ್ತಾರೆ, ಅದು ಸರಿಯಲ್ಲ. ಅದಕ್ಕೆ ಕಠಿಣ ಪದ ಬಳಸಿದರೆ ತಪ್ಪಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಆರು ತಿಂಗಳು ಸಿದ್ದರಾಮಯ್ಯನವರ ಹತ್ತಿರ ಹೋಗಿಲ್ಲ ಅಂದ್ರೆ ಯಾಕೆ ಬಂದಿಲ್ಲ ಅಂತ ಕೇಳಲ್ಲ. ದಿನಾ ಸಿದ್ದರಾಮಯ್ಯ ಹತ್ತಿರ ಹೋದ್ರೆ ಯಾಕಯ್ಯ ಬಂದೆ ಅಂತ ಕೇಳಲ್ಲ. ನಾವೆಲ್ಲ ಸಿದ್ದರಾಮಯ್ಯ ಬಣ ಅಲ್ವಾ?. ನಾವೆಲ್ಲ ಯಾಕೆ ಫಾರಿನ್ ಹೋಗ್ತಾ ಇಲ್ಲಾ?. ಅಲ್ಲೆಲ್ಲ ಬೈಠಕ್ ಸೇರ್ತಾರೆ ಕೆಲವರು. ಬೈಠಕ್ ಅಂದ್ರೆ ದೇಶದ ಬಗ್ಗೆ ಚಿಂತನೆ ಮಾಡುವುದು. ರಾಜಕಾರಣದಲ್ಲಿ ಎಲ್ಲರೂ ಒಂದೇ ತರಹ ಇರುತ್ತಾರಾ? ಎಂದು ರಾಜಣ್ಮ ಪ್ರಶ್ನಿಸಿದರು.
ಸರ್ಕಾರಿ ಅಧಿಕಾರಿಗಳು ಎಷ್ಟೋ ದುಡ್ಡಲ್ಲೇ ವಿದೇಶಕ್ಕೆ ಹೋಗ್ತಾರೆ. ನಾನು ಹೋದಷ್ಟು ಫಾರಿನ್ ಟ್ರಿಪ್ ಯಾರೂ ಹೋಗಲ್ಲ. ನಾನು ಜೊತೆಯಲ್ಲಿ ಕರಕೊಂಡೂ ಹೋಗಲ್ಲ ಬಂದ ಮೇಲೂ ಹೇಳಲ್ಲ. ಅದು ನನ್ನ ಸ್ಟೈಲ್. ಖಾಸಗಿ ಬದುಕಲ್ಲಿ ಯಾರಾದರೂ ಶಾಸಕರು ಸ್ವಂತ ಖರ್ಚಲ್ಲಿ ಹೊರಗೆ ಹೋದರೆ ಅದು ಸರಿ ಅಥವಾ ಅಲ್ಲ ಎನ್ನುವುದು, ಅವಹೇಳನ ಮಾಡುವ ಪದ್ಧತಿ ಯಾಕೆ ಬರ್ತಾ ಇದೆಯೇನೋ?. ರಾಜಕೀಯ ಅರ್ಥವನ್ನು ಯಾವ ಯಾವ ರೀತಿ ಅರ್ಥೈಸ್ತೀರೋ. ಪಾಲಿಟಿಕ್ಸ್ ಪ್ರತಿಯೊಂದರಲ್ಲೂ ಇದ್ದೇ ಇರುತ್ತದೆ ಎಂದು ತಿಳಿಸಿದರು.
ಮಗಳು ಸ್ಪರ್ಧೆ: ಮಹಿಳಾ ಮೀಸಲಾತಿ ಜಾರಿಗೆ ಬಂದು ಮಹಿಳಾ ಮೀಸಲು ಲಭ್ಯವಾದರೆ ಮಗಳನ್ನೇ ಚುನಾವಣೆಗೆ ನಿಲ್ಲಿಸುತ್ತೇನೆ ಎಂದು ರಾಜಣ್ಣ ಪ್ರತಿಕ್ರಿಯೆ ನೀಡಿದರು.

