ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ:
ಜೈಲುಗಳಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳ ನಿಯಂತ್ರಣ ಮಾಡಿ ಜೈಲುಗಳ ಸುಧಾರಣೆಗೆ ಮುಂದಾಗಿರುವ ರಾಜ್ಯ ಪೊಲೀಸ್ ಇಲಾಖೆ ಜೈಲಿಗೆ ಒಳ ಬರುವ ಮತ್ತು ಹೊರಗಡೆ ಹೋಗುವ ಕೈದಿಗಳಿಗೆ ಎನ್ಡಿಪಿಎಸ್ ತಪಾಸಣೆ ಕಡ್ಡಾಯ ಮಾಡಲಾಗಿದೆ. ಇದರಿಂದ ಜೈಲಿನಲ್ಲಿಯೂ ಮಾದಕ ವಸ್ತು ಸರಬರಾಜು ಆಗುತ್ತದೆಯೇ ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಅಲೋಕ್ ಕುಮಾರ್ ಹೇಳಿದರು.
ಹುಬ್ಬಳ್ಳಿಯ ಉಪ ಕಾರಾಗೃಹಕ್ಕೆ ಬುಧವಾರ ದಿಢೀರ್ ಭೇಟಿ ನೀಡಿದ ಅವರು, ಜೈಲಿನ ಕಾರ್ಯವೈಖರಿ, ನಿರ್ವಹಣೆ, ಸುಧಾರಣೆ ಕುರಿತ ವಿಷಯಗಳ ಕುರಿತು ಅವರು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದರು.
ಸಬ್ ಜೈಲು ಕಟ್ಟಡ, ಗಾರ್ಡನ್, ಕೈದಿಗಳಿಗೆ ಇರುವ ವ್ಯವಸ್ಥೆ ಕುರಿತು ಮಾಹಿತಿ ಪಡೆದರು. ಕೈದಿಗಳ ಸೆಲ್ಗಳನ್ನೂ ಸಹ ಪರಿಶೀಲನೆ ನಡೆಸಿ, ಸಜಾ ಬಂಧಿಗಳ ಜೊತೆ ಮಾತುಕತೆ ನಡೆಸಿದರು.
ಜೈಲು ಭೇಟಿ ಮಾಡಿ ಪರಿಶೀಲನೆ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹುಬ್ಬಳ್ಳಿಯ ಕಾರಾಗೃಹದಲ್ಲಿ 132 ಕೈದಿಗಳಿದ್ದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಕೈದಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಜೈಲಿನಲ್ಲಿ ಅವರು ದುಡಿಯುವಂತೆ ಮಾಡಲಾಗುತ್ತಿದೆ. ಕೈದಿಗಳು ಬಿಡುಗಡೆ ಆದ ಬಳಿಕ ಅವರ ಜೀವನಕ್ಕೆ ಸಹಕಾರಿಯಾಗಲು ಜೈಲಿನಲ್ಲಿಯೇ ಸ್ಕಿಲ್ ಡೆವಲಪ್ಮೆಂಟ್ ತರಬೇತಿಗೆ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅಲೋಕ್ ಕುಮಾರ್ ತಿಳಿಸಿದರು.
ರಾಜ್ಯದ ಎಲ್ಲ ಜೈಲುಗಳಲ್ಲಿನ ಕೈದಿಗಳಿಗೆ ಯೋಗ, ಧ್ಯಾನ ಕಡ್ಡಾಯ ಮಾಡಲಾಗುವುದು. ಮೊದಲ ಬಾರಿ ಜೈಲು ಪ್ರವೇಶ ಮಾಡುವ ಅಪರಾಧಿಗಳಿಗೆ ಎನ್ಡಿಪಿಎಸ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಒಂದು ವಾರದ ನಂತರ ಇದನ್ನು ಜಾರಿಗೆ ತರಲಾಗುತ್ತದೆ. ಸಮಾಜವನ್ನು ಮಾದಕ ವಸ್ತು ಸೇವನೆಯಿಂದ ಮುಕ್ತಗೊಳಿಸಬೇಕಿದೆ. ನಾವು ಜೈಲಿನಿಂದಲೇ ಪ್ರಾರಂಭಿಸುತ್ತಿದ್ದೇವೆ. ಜೈಲಿಗೆ ಒಳಬರುವ ಮತ್ತು ಹೊರ ಹೋಗುವವರನ್ನು ತಪಾಸಣೆ ಮಾಡಲಾಗುತ್ತದೆ. ಜೈಲಿನಲ್ಲಿ ಎನ್ಡಿಪಿಎಸ್ ತಪಾಸಣೆ ಕಡ್ಡಾಯ ಮಾಡಲಾಗುವುದು. ಮೊದಲ ಪ್ರಕರಣದ ಆರೋಪಿಗಳು ಮತ್ತು ಅಪರಾಧಿಗಳನ್ನು ರೂಢಾಪರಾಧಿಗಳ ಜೊತೆಗೆ ಸೇರದಿರಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಕೆಲ ದಿನಗಳ ಹಿಂದೆ ಅಲೋಕ್ ಕುಮಾರ್ ಅವರು ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.
ಶತಮಾನದ ಇತಿಹಾಸ ಹೊಂದಿರುವ ಹಿಂಡಲಗಾ ಜೈಲಿನಲ್ಲಿ ಗಾಂಜಾ, ಮೊಬೈಲ್ ಫೋನ್ ಪತ್ತೆ ಸೇರಿ ಹಲವು ವಿಚಾರಗಳಿಂದ ಈ ಹಿಂದೆ ಸುದ್ದಿಯಾಗಿತ್ತು.
ಈ ಹಿನ್ನೆಲೆಯಲ್ಲಿ, ದಿಢೀರ್ ಭೇಟಿ ನೀಡಿದ ಡಿಜಿಪಿಅಲೋಕ್ ಕುಮಾರ್, ಜೈಲು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರು. ಜೈಲಿನ ಹೊರಗೆ ಮತ್ತು ಒಳಗಡೆ ಯಾವುದೇ ಅಕ್ರಮಗಳು ನಡೆಯದಂತೆ ಬಿಗಿ ಕ್ರಮ ಕೈಗೊಳ್ಳಬೇಕು ಅಂತಾ ಇಲ್ಲಿನ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಹಿಂಡಲಗಾ ಜೈಲು ಬಹಳ ಹಳೆಯದ್ದು. ಬೆಂಗಳೂರಿನ ಪರಪ್ಪನ ಅಗ್ರಹಾರದ ನಂತರ ಇದು ಪ್ರಮುಖ ಜೈಲಾಗಿದೆ. ರಾಜ್ಯದ ವಿವಿಧ ಭಾಗಗಳ ಮುಖ್ಯ ಆರೋಪಿಗಳು ಇಲ್ಲಿದ್ದಾರೆ.
ಹಳೆ ಕಟ್ಟಡ ಸೇರಿ ಹಲವು ಸಮಸ್ಯೆಗಳು ಇಲ್ಲಿವೆ. ಮೊಬೈಲ್, ಸಿಗರೇಟ್ ಹೊರಗಿನಿಂದ ಒಳಗೆ ಎಸೆಯುವುದನ್ನು ತಡೆಗಟ್ಟಬೇಕಿದೆ. ಒಳಗಡೆ 5ಜಿ ಜಾಮರ್ ಅಳವಡಿಸಿದರೂ ನೆಟ್ವರ್ಕ್ ಬರುತ್ತಿದೆ. ಅದನ್ನು ಪೂರ್ತಿ ಬಂದ್ ಮಾಡುವಂತೆ ಸೂಚಿಸಿದ್ದೇನೆ ಎಂದು ಡಿಐಜಿ ಅವರು ತಿಳಿಸಿದ್ದರು.
ಎನ್ಡಿಪಿಎಸ್ ಏನಿದು:
ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ 2021ರಲ್ಲಿ ಕೇಂದ್ರ ಸರ್ಕಾರ ಎನ್ಡಿಪಿಎಸ್ ತಿದ್ದುಪಡಿ ಮಸೂದೆ ಅಂಗೀಕರಿಸಿತ್ತು.
ಮೂಲಕ ದೇಶದಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟಕ್ಕೆ ಕಠಿಣ ನಿಯಮವನ್ನು ಪ್ರತಿಪಕ್ಷಗಳ ವಿರೋಧದ ನಡುವೆ ಜಾರಿಗೆ ತಂದಿತ್ತು.

