ಚಂದ್ರವಳ್ಳಿ ನ್ಯೂಸ್, ಹಾಸನ:
ಶಕ್ತಿದೇವತೆ ಹಾಸನಾಂಬೆ ಉತ್ಸವದ ವೇಳೆ ಕಳೆದ ವರ್ಷ ಲಕ್ಷಾಂತರ ಭಕ್ತರ ದಂಡೇ ಹರಿದುಬಂದಿತ್ತು. ಆ ಮೂಲಕ ಇತಿಹಾಸ ಸೃಷ್ಟಿಯಾಗಿತ್ತು. ಇದೀಗ ಹಾಸನಾಂಬೆ ಉತ್ಸವ ವೇಳೆಯ ವಿದ್ಯುತ್ ದೀಪಾಲಂಕಾರದ ಟೆಂಡರ್ನಲ್ಲಿ ಗೋಲ್ಮಾಲ್ ನಡೆದಿದ್ದು, ಲಕ್ಷಾಂತರ ರೂ ಅಕ್ರಮ ಆರೋಪ ಕೇಳಿಬಂದಿದೆ.
ಈ ಬಗ್ಗೆ ಆರ್ಟಿಐ ಕಾರ್ಯಕರ್ತ ಮನು ದೂರು ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
ಮುಜರಾಯಿ ಇಲಾಖೆಯ ಗ್ರೇಡ್ ಒನ್ ದೇವಾಲಯದಲ್ಲಿ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಪ್ರತಿ ವರ್ಷ ಒಬ್ಬನೇ ಗುತ್ತಿಗೆದಾರನಿಗೆ ಗುತ್ತಿಗೆ ನೀಡಲಾಗುತ್ತಿದೆ.
ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ಸರಿಯಾದ ದಾಖಲೆಯನ್ನೇ ನೀಡಿಲ್ಲ. ಭಕ್ತರ ಹಣವನ್ನು ದುಂದು ವೆಚ್ಚ ಮಾಡಲಾಗಿದೆ. ಕೇವಲ ದೀಪಾಲಂಕಾರ ಮಾತ್ರವಲ್ಲ ಎಲ್ಲದರಲ್ಲೂ ಹಣ ದುರ್ಬಳಕೆ ಮಾಡಿರುವ ಬಗ್ಗೆ ಮನು ದೂರು ನೀಡಿದ್ದಾರೆ.
ಅಧಿಕಾರಿಗಳು ತಬ್ಬಿಬ್ಬು:
ಆರ್ಟಿಐ ಕಾರ್ಯಕರ್ತ ಮನು ದೂರು ಆಧರಿಸಿ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲೇ ಲೋಕಾಯುಕ್ತ ಅಧಿಕಾರಿ ಗಾಯಿತ್ರಿ ಅವರಿಂದ ತನಿಖೆ ನಡೆಸಿದ್ದು, ದೂರುದಾರ ಮನು ಸೇರಿ ಮಹಾನಗರ ಪಾಲಿಕೆ ಇಂಜಿನಿಯರ್ ಸುಜಾತಾ ಹಾಗೂ ನಿವೃತ್ತ ಇಂಜಿನಿಯರ್ ರಂಗಸ್ವಾಮಿ ವಿಚಾರಣೆ ನಡೆಸಿದ್ದಾರೆ. ದೂರುದಾರನ ಸಮ್ಮುಖದಲ್ಲೇ ಸಂಪೂರ್ಣ ಮಾಹಿತಿ ಪಡೆದ ಅಧಿಕಾರಿಗಳು, ಸರಿಯಾದ ದಾಖಲೆ ನೀಡದ ಬಗ್ಗೆ ತನಿಖಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿ ಸೂಕ್ತ ದಾಖಲೆ ನೀಡದಿದ್ದರೇ ಇದನ್ನೇ ವರದಿ ಮಾಡಬೇಕಾಗುತ್ತೆ ಎಂದು ವಾರ್ನಿಂಗ್ ನೀಡಿದ್ದು, ಈ ವೇಳೆ ಅಧಿಕಾರಿಗಳ ಪ್ರಶ್ನೆಗೆ ಮಹಾನಗರ ಪಾಲಿಕೆ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ ಎನ್ನಲಾಗಿದೆ.
15 ಲಕ್ಷಕ್ಕೂ ಅಧಿಕ ಅವ್ಯವಹಾರ:
ಹಾಸನಾಂಬೆ ಉತ್ಸವದ ವೇಳೆ ನಿಯಮ ಪಾಲನೆ ಮಾಡದೆ ವಿದ್ಯುತ್ ದೀಪಾಲಂಕಾರ ಗುತ್ತಿಗೆ ನೀಡಲಾಗಿದೆ. ವಿದ್ಯುತ್ ದೀಪಾಲಂಕಾರಕ್ಕೆಹಲವು ಗುತ್ತಿಗೆದಾರರು ಅರ್ಜಿ ಹಾಕಿದ್ದರೂ ಒಬ್ಬರಿಗೆ ಮಾತ್ರ ಅಧಿಕಾರಿಗಳು ನೆರವು ನೀಡಿದ್ದಾರೆ.
ದೀಪಾಲಂಕಾರ ಒಂದರಲ್ಲೇ 15 ಲಕ್ಷಕ್ಕೂ ಅಧಿಕ ಮೊತ್ತದ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ.
ಹಾಸನಾಂಬೆ ಉತ್ಸವದಲ್ಲಿ ಅನುಭವ ಹೊಂದಿದವರಿಗೆ ಮಾತ್ರ ಆದ್ಯತೆ ಎನ್ನುವ ನಿಯಮ ಸೇರಿಸಿ ಲೈಟಿಂಗ್, ಹೂವಿನ ಅಲಂಕಾರ ಸೇರಿ ಎಲ್ಲಾ ಕೆಲಸಕ್ಕೂ ಒಬ್ಬರಿಗೆ ಗುತ್ತಿಗೆ ನೀಡಲಾಗಿದೆ. ಖರೀದಿ ಮಾಡಿದರು ಅಷ್ಟು ಹಣ ಆಗಲ್ಲ, ಅಷ್ಟೊಂದು ದುಂದು ವೆಚ್ಚ ಮಾಡಲಾಗಿದೆ ಎನ್ನುವ ಆರೋಪಿಗಳು ಕೇಳಿ ಬಂದಿವೆ.

