ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಭಾರತೀಯ ಕಿಸಾನ್ ಸಂಘ ಚಿತ್ರದುರ್ಗ ಜಿಲ್ಲಾ ಘಟಕ ಹಾಗೂ ಎಲ್ಲಾ ತಾಲ್ಲೂಕು ಘಟಗಳ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯು ಚಳ್ಳಕೆರೆ ನಗರದ ಚಳ್ಳಕೆರೆ ಅಮ್ಮನ ದೇವಸ್ಥಾನದಿಂದ ಹೊರಟು ಪ್ರಧಾನ ರಸ್ತೆ ಮುಖಾಂತರ ವಾಲ್ಮೀಕಿ ವೃತ್ತದವರೆಗೆ ಹಾದು ತಹಶೀಲ್ದಾರ್ ಕಚೇರಿಯ ಮುಂದೆ ಧರಣಿ ಕುಳಿತು ಪ್ರತಿಭಟನೆ ನಡೆಸಿ ಮನವಿ ಕೊಡಲಾಯಿತು.
ಹೋರಾಟದ ನೇತೃತ್ವ ವಹಿಸಿದ್ದ ದಕ್ಷಿಣ ಪ್ರಾಂತ ಅಧ್ಯಕ್ಷ ಹಾಡ್ಯ ರಮೇಶ್ ರಾಜು ಮಾತನಾಡಿ ಚಿತ್ರದುರ್ಗ ಜಿಲ್ಲೆಯು ಬಯಲುಸೀಮೆ ಆಗಿರುವುದರಿಂದ ಅತಿಯಾದ ಬಿಸಿಲು ಹೆಚ್ಚಾಗುವುದರಿಂದ ರೈತರಿಗೆ ಪ್ರತಿ ವರ್ಷ ನೀರಿನ ಸಮಸ್ಯೆ ಉಂಟಾಗುತ್ತದೆ. ರೈತರ ಬೆಳೆಗಳು ಒಣಗಿ ಹೋಗುತ್ತವೆ. ಆದ್ದರಿಂದ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಕಾಲಮಿತಿಯೊಳಗೆ ಪೂರೈಸಿ ಶೀಘ್ರ ಅನುಷ್ಠಾನಗೊಳ್ಳಬೇಕು ಇಲ್ಲದೆ ಹೋದಲ್ಲಿ ಮುಂದಿನ ದಿನದಲ್ಲಿ ನಾವು ರಾಜ್ಯ ವ್ಯಾಪಿಯಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಕಂದಾಯ ಇಲಾಖೆಯಲ್ಲಿ ರೈತರಿಗೆ ಆಗುತ್ತಿರುವ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಿ ಕೊಡುವುದು ಹಾಗೂ ಬೇಸಿಗೆಯು ಹೆಚ್ಚಾಗಿರುವುದರಿಂದ ಬಿಸಿಲಿನ ಬೇಗೆಗೆ ರೈತನ ಬೆಳೆಗಳು ಒಣಗಿ ಹೋಗುತ್ತಿರುವುದರಿಂದ ಬೆಸ್ಕಾಂ ಇಲಾಖೆಯು ಸುಟ್ಟ ಪರಿವರ್ತಕಗಳನ್ನು, ಕೆ.ಈ.ಆರ್.ಸಿ ಆದೇಶದ ನಿಯಮಾನುಸಾರ ಶೀಘ್ರವೇ ರೈತರಿಗೆ ಅಳವಡಿಸಿ ಕೊಡಬೇಕು ಹಾಗೂ ಅಕ್ರಮ ಸಕ್ರಮ ಯೋಜನೆ ಮರು ಜಾರಿ ಮಾಡುವುದು ಮುಂತಾದ ರೈತರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಡುವ ವಿಚಾರವಾಗಿ ಜಿಲ್ಲಾಧ್ಯಕ್ಷ ಕರಿಕೆರೆ ತಿಪ್ಪೇಸ್ವಾಮಿ ಅಧಿಕಾರಿಗಳಿಗೆ ಮನವರಿಕೆ ಮಾಡಿ ತಹಶೀಲ್ದಾರ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿ ಕೊಡಲಾಯಿತು. ತಾಲ್ಲೂಕು ದಂಡಾಧಿಕಾರಿಗಳು ಹಾಗೂ
ಬೆಸ್ಕಾಂ ಇಲಾಖೆಗೆ ಸಂಬಂಧಿಸಿದ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ತೋಟಗಾರಿಕೆ ಕೃಷಿ ಇಲಾಖೆಗಳಿಂದ ಆಗಮಿಸಿದ್ದ ಅಧಿಕಾರಿಗಳು ಮನವಿ ಸ್ವೀಕರಿಸಿ ತಕ್ಷಣವೇ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಪ್ರತಿಭಟನಾ ನಿರತರಿಗೆ ಆಶ್ವಾಸನೆ ನೀಡಿರುತ್ತಾರೆ.
ಈ ಸಮಸ್ಯೆಗಳನ್ನು ಈಡೇರಿಸದ ಪಕ್ಷದಲ್ಲಿ ಭಾರತೀಯ ಕಿಸಾನ್ ಸಂಘವು ಮುಂದಿನ ದಿನದಲ್ಲಿ ಉಗ್ರವಾದ ಹೋರಾಟ ಮಾಡಬೇಕಾದೀತು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಾತ್ರಿಕೇನಹಳ್ಳಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಕರಿಕೆರೆ ತಿಪ್ಪೇಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾತ್ರಿಕೇನಹಳ್ಳಿ, ಜಿಲ್ಲಾ ಉಪಾಧ್ಯಕ್ಷ ಸುಬ್ರಮಣಿ ಲಕ್ಕವನಹಳ್ಳಿ, ಜಿಲ್ಲಾ ಸಹ ಕಾರ್ಯದರ್ಶಿ ವೆಂಕಟೇಶ್ ರೆಡ್ಡಿ, ಜಿಲ್ಲಾ ಮಹಿಳಾ ಪ್ರಮುಖರಾದ ರಮ್ಯಾ ಲಕ್ಕವನಹಳ್ಳಿ ದಕ್ಷಿಣ ಪ್ರಾಂತ ಮಹಿಳಾಪ್ರಮುಖರಾದ ನಿರ್ಮಲ ರಮೇಶ ರಾಜು, ಜಿಲ್ಲಾ ಕೋಶಾಧ್ಯಕ್ಷ ಚಿಕ್ಕೇಗೌಡ್ರು, ಜಿಲ್ಲಾ ಉಪಾಧ್ಯಕ್ಷ ಆನಂದ್ ರೆಡ್ಡಿ, ಜಿಲ್ಲಾ ಪದಾಧಿಕಾರಿಗಳಾದ ಪಂಚಾಕ್ಷರಿ ಸ್ವಾಮಿ, ಏಕಾಂತಪ್ಪ ಹಿರೇಮದುರೆ,
ಹೊಸದುರ್ಗ ತಾಲ್ಲೂಕು ಅಧ್ಯಕ್ಷ ಮಹಾಲಿಂಗಪ್ಪ ಹಾಗೂ ಹೊಸದುರ್ಗ ತಾಲ್ಲೂಕು ಕಾರ್ಯದರ್ಶಿ ನಾಗೇಂದ್ರ ಅಯ್ಯನಳ್ಳಿ, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಉಮೇಶ್ ಗೌಡ ಕಾರ್ಯದರ್ಶಿ ಸುರೇಂದ್ರಪ್ಪ, ಮೊಳಕಾಲ್ಮೂರು ತಾಲ್ಲೂಕು ಅಧ್ಯಕ್ಷ ಕಾತಿ ಮಾಸ್ಟರ್, ಉಪಾಧ್ಯಕ್ಷ ಮಂಜುನಾಥ್, ಚಿತ್ರದುರ್ಗ ತಾಲೂಕು ಅಧ್ಯಕ್ಷ ಪ್ರಕಾಶಣ್ಣ ಸಿರಿಗೆರೆ ಕಾರ್ಯದರ್ಶಿ ಈಶ್ವರಪ್ಪ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಪದಾಧಿಕಾರಿಗಳು ರೈತ ಮುಖಂಡರು ಭಗತ್ ಸಿಂಗ್ ಯುವ ಪಡೆ ಪದಾಧಿಕಾರಿ ಛಲವಾದಿ ಸಂಘದ ಪದಾಧಿಕಾರಿಗಳು, ಅಧ್ಯಕ್ಷರು, ಕಾರ್ಯದರ್ಶಿಗಳು ಪ್ರಗತಿಪರ ರೈತರು ಭಾಗವಹಿಸಿದ್ದರು.

